ಬೆಂಗಳೂರು | ಸೂಟ್ಕೇಸ್ನಲ್ಲಿ ಬಾಲಕಿ ಮೃತದೇಹ ಪತ್ತೆ ಪ್ರಕರಣ: ಏಳು ಮಂದಿ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಸೂಟ್ಕೇಸ್ನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರ್ಯನಗರ ಠಾಣಾ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ ಬಿಹಾರ ಮೂಲದ ಆಶೀಕ್ ಕುಮಾರ್(22) ಮುಖೇಶ್ ರಾಜಬನ್ಶಿ(35), ಇಂದುದೇವಿ(32), ರಾಜರಾಮ್ ಕುಮಾರ್(18), ಪಿಂಟು ಕುಮಾರ್(18), ಕಾಲು ಕುಮಾರ್(17), ರಾಜು ಕುಮಾರ್(17) ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ.
ಮೇ 20ರಂದು ಇಲ್ಲಿನ ಆನೇಕಲ್ ತಾಲೂಕಿನ ಹಳೇ ಚಂದಾಪುರ ರೈಲ್ವೆ ಹಳಿ ಪಕ್ಕದಲ್ಲಿ ಸೂಟ್ಕೇಸ್ನಲ್ಲಿ ಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪ್ರಕರಣವನ್ನು ಸೂರ್ಯನಗರ ಠಾಣಾ ಪೊಲೀಸರು ಭೇದಿಸಿದ್ದು, ಬಾಲಕಿ ಲೈಂಗಿಕ ಕ್ರಿಯೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆಗೈದಿರುವುದಾಗಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದ ಎ1 ಆರೋಪಿ ಆಶೀಕ್ ಕುಮಾರ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದನು. ಆಶೀಕ್ ಕುಮಾರ್ ಮೇ 13ರಂದು ಬೆಂಗಳೂರಿನಿಂದ ಬಿಹಾರಕ್ಕೆ ತೆರಳಿದ್ದನು. ಬಳಿಕ ಮೇ 18ರಂದು ಬಿಹಾರದಿಂದ ಬಾಲಕಿಯೊಂದಿಗೆ ಆಶೀಕ್ ಕುಮಾರ್ ಬೆಂಗಳೂರಿಗೆ ತಲುಪಿದ್ದಾನೆ. ಅದೇ ದಿನ ಬಾಲಕಿಯ ಜೊತೆ ಬೆಂಗಳೂರು ನಗರ ಸುತ್ತಾಡಿದ ಆಶೀಕ್ ಕುಮಾರ್, ರಾತ್ರಿ ಸಂಬಂಧಿ ಮುಖೇಶ್ ಎಂಬಾತನ ಮನೆಗೆ ಕರೆದುಕೊಂಡು ಹೋಗಿದ್ದಾನೆ.
ಮೇ 19ರಂದು ಬಾಲಕಿ ಲೈಂಗಿಕ ಕ್ರಿಯೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆಕೆಯ ಜೊತೆಗೆ ಜಗಳ ಪ್ರಾರಂಭಿಸಿದ ಆಶೀಕ್ ಕುಮಾರ್, ಬಿಯರ್ ಬಾಟಲ್ನಿಂದ ಬಾಲಕಿಗೆ ಹಲ್ಲೆ ಮಾಡಿ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಆಶೀಕ್ ಕುಮಾರ್ ಸಂಬಂಧಿಗಳಿಗೆ ವಿಚಾರ ತಿಳಿಸಿದ್ದು, ಅನಂತರ, ತನ್ನ ಸ್ನೇಹಿತರ ಸಹಕಾರದಿಂದ ಬಾಲಕಿಯ ಮೃತದೇಹವನ್ನು ಸೂಟ್ಕೇಸ್ನಲ್ಲಿ ಹಾಕಿದ್ದಾರೆ. ಆರೋಪಿಗಳೆಲ್ಲರೂ ಸೇರಿಕೊಂಡು ಕ್ಯಾಬ್ನಲ್ಲಿ ಬಾಲಕಿಯ ಮೃತದೇಹ ತೆಗೆದುಕೊಂಡು ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಬಂದಿದ್ದಾರೆ. ರೈಲು ಹಳಿಯಿಂದ ಕೆಳಕ್ಕೆ ಸೂಟ್ಕೇಸ್ ಎಸೆದು ಪರಾರಿಯಾಗಿದ್ದರು.
ಈ ಸಂಬಂಧ ಸೂರ್ಯನಗರ ಠಾಣೆ ಪೊಲೀಸರು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳ ಚಲನವಲನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ, ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರು, ಬಿಹಾರದಲ್ಲಿ ಏಳೂ ಮಂದಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆಸಿರುವುದಾಗಿ ಮಾಹಿತಿ ನೀಡಿದ್ದಾರೆ.







