Bengaluru | ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ನಿಂದ ಪ್ರತಿಭಟನೆ

ಬೆಂಗಳೂರು : ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ, ಉದ್ದೇಶಿತ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಲಾಯಿತು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಸರಕಾರ ಭಂಡತನ ಪ್ರದರ್ಶನ ಮಾಡುತ್ತಿದೆ. ಬಿಡದಿ ಟೌನ್ಶಿಪ್ ಮತ್ತು ನೈಸ್ ಯೋಜನೆಯ ಮೂಲಕ ಸರಕಾರ ಖಾಸಗಿ ವ್ಯಕ್ತಿಗಳ ಜೊತೆಗಿನ ಕುಮ್ಮಕ್ಕಿನಿಂದ ಸಾವಿರಾರು ಕೋಟಿ ರೂ.ಬೆಲೆ ಬಾಳುವ ಭೂಮಿಯನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರು, ಬಿಡದಿ ಟೌನ್ಶಿಪ್ ಮತ್ತು ನೈಸ್ ಯೋಜನೆ ಪಿತಾಮಹರು ಕುಮಾರಸ್ವಾಮಿ ಮತ್ತು ದೇವೇಗೌಡ ಎಂದು ಹೇಳುತ್ತಿದ್ದಾರೆ. ಆದರೆ, ಈ ವೇದಿಕೆಯಿಂದ ಕಾಂಗ್ರೆಸ್ ನಾಯಕರಿಗೆ ನೇರ ಸವಾಲು ಹಾಕುತ್ತೇನೆ. ಬಿಡದಿ ಟೌನ್ಶಿಪ್ ಮತ್ತು ನೈಸ್ ಯೋಜನೆಗಳ ಬಗ್ಗೆ ಏನೇನು ಆಗಿದೆ, ಶುರುವಾಗಿದ್ದೆಲ್ಲಿ? ಈಗ ಬಂದು ನಿಂತಿರುವುದು ಎಲ್ಲಿ? ಎಂಬ ಬಗ್ಗೆ ಕೂಲಂಕಶವಾಗಿ ಚರ್ಚೆ ಮಾಡಲು ತಯಾರಿದ್ದೇನೆ ಎಂದರು.
ಎಲ್ಲವನ್ನೂ ಸರ್ವನಾಶ ಮಾಡುತ್ತಿದೆ ಈ ಸರಕಾರ. ನೈಸ್ ಸಂಸ್ಥೆ ಭೂಮಿ ಅನ್ನು ನುಂಗಿದ್ದಾಯಿತು. ಇದೀಗ ಬೇನಾಮಿ ಕಂಪೆನಿಗಳನ್ನು ಸೃಷ್ಟಿ ಮಾಡಿಕೊಂಡು ಇಡೀ ಯೋಜನೆಯನ್ನೇ ಕಬಳಿಸಲು ಹೊರಟಿದ್ದೀರಿ. ಬಿಡದಿಯಲ್ಲಿ ಫಲವತ್ತಾದ ರೈತರ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದೆ ಎಂದು ದೂರಿದರು.
ಎರಡು ಯೋಜನೆಗಳನ್ನು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಒತ್ತೆಯಿಡಲು ಹೊರಟಿದ್ದೀರಿ. ಜನರ ರಕ್ತ, ಬೆವರು, ಅವರ ಕಷ್ಟದ ಬೆಲೆ ನಿಮಗೆ ಗೊತ್ತಾಗುವುದು ಹೇಗೆ? ಪಾರಂಪರಿಕ ಕಟ್ಟಡ ಕುಮಾರ ಕೃಪ ಅತಿಥಿ ಗೃಹವನ್ನೇ ಸರ್ವನಾಶ ಮಾಡಿದವರು ನೀವು. ಕೆಂಗಲ್ ಹನುಮಂತಯ್ಯ ನವರು ಕಟ್ಟಿದ ವಿಧಾನಸೌಧವನ್ನು ಹಾಳು ಮಾಡಲು ಹೊರಟವರು ನೀವು. ನಿಮ್ಮಂತವರಿಗೆ ರೈತರ ಕಷ್ಟಕಾರ್ಪಣ್ಯಗಳು ತಿಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ಟೌನ್ಶಿಪ್ ನನ್ನ ಕನಸಿನ ಕೂಸು. ಇದರಲ್ಲಿ ಎರಡು ಮಾತೇ ಇಲ್ಲ. ಅದೇ ರೀತಿ ನೈಸ್ ಯೋಜನೆ ದೇವೇಗೌಡರ ಕನಸಿನ ಕೂಸು ಎಂಬುವುದರಲ್ಲಿ ಅಸತ್ಯವಿಲ್ಲ. ಆದರೆ ಆ ಎರಡು ಕೂಸುಗಳನ್ನು ನೀವು ಹೀಗೆಲ್ಲಾ ಬಳಸಿ ಹಾಳು ಮಾಡಿದ್ದೀರಿ ಎಂಬುದು ನಮಗಷ್ಟೇ ಅಲ್ಲ. ಇಡೀ ರಾಜ್ಯಕ್ಕೆ ಗೊತ್ತು. ಇಡೀ ದೇಶವೇ ಈ ದರೋಡೆಯನ್ನು ನೋಡುತ್ತಿದೆ. ಇತ್ತೀಚೆಗೆ ರಾಜ್ಯ ಹೈಕೋರ್ಟ್ ಏನೇನು ಅಭಿಪ್ರಾಯ ವ್ಯಕ್ತಪಡಿಸಿದೆ ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಮಂಜುನಾಥ್, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಮತ್ತಿತರರು ಹಾಜರಿದ್ದರು.
📍ಬೆಂಗಳೂರು
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) August 18, 2026
ನಮ್ಮ @JanataDal_S ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರ ನೇತೃತ್ವದಲ್ಲಿ, ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ @H_D_Devegowda ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ನಡೆದ 'ಬಿಡದಿ ಟೌನ್ ಶಿಪ್ ವಿರೋಧಿ ಬೃಹತ್ ಸಮಾವೇಶ ಮತ್ತು ವಿಧಾನಸೌಧ ಚಲೋ' ಕಾರ್ಯಕ್ರಮದಲ್ಲಿ… pic.twitter.com/i589GsqtuV






