ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ: ಕೈದಿಗಳ ಚಲನವಲನಗಳ ಸಂಪೂರ್ಣ ದತ್ತಾಂಶ ಸಂಗ್ರಹ

ಬೆಂಗಳೂರು, ಮೇ 8 : ರಾಜಧಾನಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುವ ಅನುಚಿತ ವರ್ತನೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ‘ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್ಮೆಂಟ್ ಸಿಸ್ಟಂ’ ಅನ್ನು ಪರಿಚಯಿಸಲಾಗಿದ್ದು, ಇನ್ನುಮುಂದೆ ಪ್ರತಿ ಬ್ಯಾರಕ್ ಪ್ರವೇಶಿಸುವಾಗ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಇರಲಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಜೈಲಿನ ಪ್ರತಿ ಬ್ಯಾರಕ್, ಸಂದರ್ಶಕರ ಕೊಠಡಿ, ಆಸ್ಪತ್ರೆ, ಕ್ಯಾಂಟೀನ್, ಅಡುಗೆ ಕೋಣೆ, ಗ್ರಂಥಾಲಯ, ಮೈದಾನ, ಕರಕುಶಲ ಕಾರ್ಖಾನೆಗಳು, ಬೇಕರಿ ಸೇರಿ ಎಲ್ಲೆಡೆ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಮುಖವಾಗಿ ಸಂದರ್ಶಕರ ಕೊಠಡಿಗೆ ಹೋಗುವಾಗ ಬಯೊಮೆಟ್ರಿಕ್ ಜೊತೆಗೆ ಟೋಕನ್ ಪಡೆಯಬೇಕು. ಈ ಟೋಕನ್ನಲ್ಲಿ ಕೈದಿಯ ಹೆಸರು, ಸಂಖ್ಯೆ, ಸಮಯ ಸೇರಿ ಇತರೆ ಅಂಶಗಳನ್ನು ಜೈಲು ಸಿಬ್ಬಂದಿ ಸಾಫ್ಟ್ವೇರ್ನಲ್ಲಿ ಅಪ್ಡೇಟ್ ಮಾಡುತ್ತಾರೆ. ಹೀಗೆ ಪ್ರತಿ ಬಾರಿ ಸಂದರ್ಶಕರನ್ನು ಭೇಟಿಯಾಗಲು ಬಂದು ಹೋಗುವ ಕೈದಿಗಳ ಚಲನವಲನಗಳ ಸಂಪೂರ್ಣ ದತ್ತಾಂಶ ಸಂಗ್ರಹವಾಗಲಿದೆ ಎಂದು ಜೈಲಾಧಿಕಾರಿಗಳು ಹೇಳಿದ್ದಾರೆ.
ಇನ್ನು ಆಸ್ಪತ್ರೆ, ಗ್ರಂಥಾಲಯ ಹಾಗೂ ಕಾರ್ಯನಿಮಿತ್ತ ಬೇರೆ ಬ್ಯಾರಕ್ಗಳ ಪ್ರವೇಶ ದ್ವಾರದಲ್ಲೂ ಇದೇ ರೀತಿಯ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬೇರೆ ಕೈದಿಗಳ ಜತೆ ಸೇರಿ ಅಕ್ರಮ ಚಟುವಟಿಕೆಗೆ ಮುಂದಾದರೆ ಅಂತಹ ಕೈದಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ. ಅಲ್ಲದೆ, ಎಲ್ಲೆಲ್ಲಿ ಎಷ್ಟು ಹೊತ್ತು ಕಾಲ ಕಳೆದರೂ ಸೇರಿ ಪ್ರತಿ ಕ್ಷಣವನ್ನು ಟ್ರ್ಯಾಕಿಂಗ್ ಮಾಡಬಹುದಾಗಿದೆ ಎಂದು ಜೈಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಕಾರಾಗೃಹದಲ್ಲಿ ಕೃತಕ ಬುದ್ದಿಮತ್ತೆ(ಎಐ) ಕ್ಯಾಮೆರಾಗಳ ಮೂಲಕ ಕೈದಿಗಳು ಮತ್ತು ಅಧಿಕಾರಿ-ಸಿಬ್ಬಂದಿ ಮೇಲೆ ನಿಗಾವಹಿಸಲಾಗಿತ್ತು. ಇದೀಗ ಅದರೊಂದಿಗೆ ಕೈದಿಗಳ ಫೋನ್ ಕರೆ ವ್ಯವಸ್ಥೆ ಸಂಪೂರ್ಣ ಡಿಜಿಟಲ್ ಟ್ರ್ಯಾಕಿಂಗ್, ಸಂದರ್ಶಕರನ್ನು ಭೇಟಿಯಾಗಲು ಡಿಜಿಟಲ್ ಟೋಕನ್ ಪದ್ಧತಿ ಸೇರಿ ಕಾರಾಗೃಹ ಬಂಧಿಗಳ ಚಲನವಲನಗಳ ಮೇಲೆ ಸಂಪೂರ್ಣ ನಿಗಾ ಇಡಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದಕ್ಕೆ ಸುಮಾರು 2.25 ಕೋಟಿ ರೂ. ವೆಚ್ಚವಾಗಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಕೈದಿಗಳ ಪ್ರತಿಯೊಂದು ಚಲನವಲನ ತಿಳಿಯಲು ಇಲಾಖೆಯು ಕ್ಯಾಂಟೀನ್ ಯೂಸೇಜ್ ಸಿಸ್ಟಂ ಜಾರಿಗೆ ತರಲಾಗಿದೆ. ಜೈಲಿನಲ್ಲಿರುವ ಕ್ಯಾಂಟೀನ್ನಲ್ಲಿ ನೇರವಾಗಿ ಹಣ ಪಾವತಿಸದೆ ಸದ್ಯ ಇರುವ ವಾಲೆಟ್ ಅಥವಾ ಕೂಪನ್ ನೀಡಿ ಬನ್-ಬಿಸ್ಕತ್ ಸೇರಿ ಬೇಕರಿ ತಿನಿಸುಗಳನ್ನು ತಿನ್ನಲು ಖರೀದಿಸಬಹುದಾಗಿದೆ. ಈ ಮೂಲಕ ಖರೀದಿದಾರನ ಹೆಸರು, ಖರೀದಿಸಿದ ವಸ್ತು, ಅದರ ಪ್ರಮಾಣ, ಸಮಯ ಹಾಗೂ ದಿನಾಂಕ, ವಾಲೆಟ್ನಲ್ಲಿ ಬಾಕಿಯಿರುವ ಹಣ ಸೇರಿ ಪ್ರತಿಯೊಂದೂ ಟ್ರ್ಯಾಕ್ ಆಗಲಿದೆ. ಇದರಿಂದ ಕೈದಿಯ ಪ್ರತಿ ಖರ್ಚಿನ ವಿವರಗಳು ದತ್ತಾಂಶಗಳಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






