ಮತಗಳ್ಳತನ ಆರೋಪ | ಸದನದಲ್ಲಿ ಖಂಡನಾ ನಿರ್ಣಯ ಮಂಡನೆಗೆ ಬಿ.ಕೆ.ಹರಿಪ್ರಸಾದ್ ಒತ್ತಾಯ

ಬಿ.ಕೆ.ಹರಿಪ್ರಸಾದ್
ಬೆಂಗಳೂರು, ಆ.19: ‘ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್(ಇವಿಎಂ) ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ದೇಶದಲ್ಲಿ ಮತಗಳ್ಳತನ ಮಾಡಲಾಗುತ್ತಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಪಾರದರ್ಶಕ ಚುನಾವಣಾ ವ್ಯವಸ್ಥೆ ಜಾರಿಗೆ ತರುವಲ್ಲಿ ವಿಫಲಗೊಂಡಿರುವ ಚುನಾವಣಾ ಆಯೋಗದ ಕ್ರಮದ ಬಗ್ಗೆ ಸದನದಲ್ಲಿ ರಾಜ್ಯ ಸರಕಾರ ಖಂಡನಾ ನಿರ್ಣಯವನ್ನು ಮಂಡಿಸಬೇಕು’ ಎಂದು ಕಾಂಗ್ರೆಸ್ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಮತಗಳ್ಳತನ ಆರೋಪ ಸಂಬಂಧ ರಾಜ್ಯ ಸರಕಾರವು ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಕಳುಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
2024ರ ವೇಳೆ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ನಡೆದಾಗ ಸಂಜೆ 5 ಗಂಟೆಗೆ ಶೇ.58.22ರಷ್ಟು ಮತದಾನವಾಗಿತ್ತು. ಆದರೆ, ಶೇ.66.05ರಷ್ಟು ಮತದಾನವಾಗಿದೆ ಎಂದು ಮಧ್ಯರಾತ್ರಿ ಘೋಷಿಸಲಾಯಿತು. ಹೆಚ್ಚುವರಿಯಾಗಿ 48 ಲಕ್ಷ ಮತಗಳು ಎಲ್ಲಿಂದ ಸೇರ್ಪಡೆಯಾದವು ಎನ್ನುವುದು ಯಕ್ಷಪ್ರಶ್ನೆಯಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ವಿವರಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು 3 ಸಾವಿರದ ಮತಗಳ ಅಂತರದಿಂದ 25 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. 5 ಸಾವಿರ ಮತಗಳ ಅಂತರದಿಂದ 39 ಕ್ಷೇತ್ರಗಳಲ್ಲಿ, 10 ಸಾವಿರ ಮತಗಳ ಅಂತರದಿಂದ 69 ಕ್ಷೇತ್ರಗಳಲ್ಲಿ ರಾತ್ರೋರಾತ್ರಿ ಗೆಲುವು ಪಡೆದಿರುವುದು ಕಂಡುಬಂದಿದೆ. ಲೋಕಸಭೆ ಚುನಾವಣೆಗೆ ಹೋಲಿಸಿದರೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿನ ಮತದಾರರ ಸಂಖ್ಯೆ ಹೆಚ್ಚಳದ ಬಗ್ಗೆ ಚುನಾವಣಾಧಿಕಾರಿಗಳು ಉತ್ತರಿಸಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ಇದೇ ರೀತಿ ಮುಂಬರುವ ಬಿಹಾರದ ಚುನಾವಣೆಯಲ್ಲಿ ನಡೆಯಲಿದೆ ಎನ್ನುವ ಆತಂಕ ಎದುರಾಗಿದೆ. ಬಿಜೆಪಿ ಮತ್ತು ಅದರ ಮೈತ್ರಿಯನ್ನು ಬೆಂಬಲಿಸದ ಸಮುದಾಯಗಳ ಮತದಾರರನ್ನೇ ಮತದಾರರ ಪಟ್ಟಿಯಿಂದ ಬಿಜೆಪಿ ತೆಗೆದುಹಾಕುತ್ತಿದೆ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.







