ಘಜ್ನಿ ನಂತರ ದೇಶವನ್ನು ಲೂಟಿ ಹೊಡೆದದ್ದು ಆರೆಸ್ಸೆಸ್-ಬಿಜೆಪಿ : ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರು : ‘ದೇಶವನ್ನು ಮಹಮ್ಮದ್ ಘಜ್ನಿ ಲೂಟಿ ಮಾಡಿದ ಎಂದು ಇತಿಹಾಸದಲ್ಲಿ ಹೇಳುತ್ತಾರೆ. ಆತನ ನಂತರ ದೇಶವನ್ನು ಯಾರಾದರೂ ಲೂಟಿ ಹೊಡೆದಿದ್ದರೆ ಅದು ಹಿಂದುತ್ವವಾದಿಗಳು, ಆರೆಸ್ಸೆಸ್ ಹಾಗೂ ಬಿಜೆಪಿಯವರು’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಾಮ ಮಂದಿ ನಿರ್ಮಾಣ ದೇಣಿಗೆ ದುರುಪಯೋಗ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 1992ರಲ್ಲಿ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ರಾಮಮಂದಿರ ಕಟ್ಟುತ್ತೇವೆ ಎಂದು ಇಟ್ಟಿಗೆ ಯಾತ್ರೆ ಮಾಡಿದರು. ಆಗ ಸಂಗ್ರಹಿಸಿದ 900 ಕೋಟಿ ರೂ.ದೇಣಿಗೆಗೆ ಲೆಕ್ಕ ಇಲ್ಲ ಎಂದು ದೂರಿದರು.
ಈಗ ರಾಮ ಮಂದಿರ ಕಟ್ಟಲು ಮುಕೇಶ್ ಅಂಬಾನಿ 500 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅದಕ್ಕೂ ಲೆಕ್ಕ ಇಲ್ಲ. ರಾಮಮಂದಿರ ವಿಶ್ವಸ್ಥ ಮಂಡಳಿ ಟ್ರಸ್ಟ್ ಸದಸ್ಯರಾಗಿರುವ ಪೇಜಾವರ ಶ್ರೀಯವರೆ ಈಗ ಲೆಕ್ಕ ಕೇಳುತ್ತಿದ್ದಾರೆ. ಪ್ರಧಾನಿ ಕಚೇರಿಯಿಂದಲೂ ಲೆಕ್ಕ ಕೊಡಿ ಎಂದು ಕೇಳಿದರೆ, ಲೆಕ್ಕ ಕೊಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ರಾಮನ ಹೆಸರಿನಲ್ಲೂ ಕಳ್ಳತನ, ಲೂಟಿ ಮಾಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ರಾಮಮಂದಿರ ದೇಣಿಗೆ ವಿವಾದದ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಹರಿಪ್ರಸಾದ್, ಪೇಜಾವರ ಶ್ರೀಗಳು ಲೆಕ್ಕ ಕೇಳಿದ್ದಾರೆ. ಆರೆಸ್ಸೆಸ್ ನೋಂದಣಿ ಮಾಡಿಸಿದರೆ ಒಳ್ಳೆಯದು, ಯಾವುದೆ ಸಮಸ್ಯೆಯಿಲ್ಲ ಎಂದಿದ್ದಾರೆ. ಹಾಗಾದರೆ, ಪ್ರಹ್ಲಾದ್ ಜೋಶಿ, ಪೇಜಾವರ ಶ್ರೀಗಳ ವಿರುದ್ಧ ಇದ್ದಾರಾ? ಅವರ ಮಾತಿಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಪ್ರಖರ ಭಾಷಾ ಪಂಡಿತ, ಜ್ಞಾನ ಭಂಡಾರ ಶಿಖರದ ಸಾಕಾರ ಮೂರ್ತಿಯಾಗಿರುವ ಪ್ರಹ್ಲಾದ್ ಜೋಶಿ ನನಗೆ ಸಾಮಾನ್ಯ ಜ್ಞಾನ ಹೇಳಿ ಕೊಡುವುದಾಗಿ ತಿಳಿಸಿದ್ದಾರೆ. ನಿಮ್ಮಿಂದ ಹೇಳಿಸಿಕೊಳ್ಳುವಂತಹ ದುರ್ಗತಿ ನನಗೆ ಬಂದಿಲ್ಲ. ಯಡಿಯೂರಪ್ಪ ಪಕ್ಷ ಬಿಟ್ಟು ಹೋದಾಗ ಏನೆಲ್ಲ ಮಾತನಾಡಿದ್ದರು. ಈಗ ಯಡಿಯೂರಪ್ಪನವರ ಪಾದ ಪೂಜೆ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದರು.
ಬಿಡದಿ ಟೌನ್ಶಿಪ್ ವಿವಾದದ ಕುರಿತು ಚರ್ಚೆಗೆ ಮುಖ್ಯಮಂತ್ರಿ ಬರಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಲು ಪ್ರಜಾಪ್ರಭುತ್ವದ ಪವಿತ್ರ ಸ್ಥಳ ವಿಧಾನಸಭೆ, ವಿಧಾನಸೌಧ ಇದೆ. ಎಲ್ಲೊ ರಸ್ತೆಯಲ್ಲಿ ಕೂತು ಚರ್ಚೆ ಮಾಡೋಕೆ ಆಗುತ್ತಾ, ನಾವು ರೈತರು, ಕಾರ್ಮಿಕರ ಜೊತೆಯೂ ಮಾತನಾಡುತ್ತೇವೆ. ಯಾರನ್ನೂ ದೂರ ಇಡುವುದಿಲ್ಲ ಎಂದು ಹೇಳಿದರು.
ರೈತರ ಬಗ್ಗೆ ಅಷ್ಟು ಕಾಳಜಿಯಿದ್ದರೆ ದಿಲ್ಲಿಯ ಗಡಿಯಲ್ಲಿ ಒಂದು ವರ್ಷ ರೈತರು ಹೋರಾಟ ಮಾಡಿದರು. 700 ಜನ ಜೀವ ಕಳೆದುಕೊಂಡರು. ನರೇಂದ್ರ ಮೋದಿ ಈವರೆಗೆ ರೈತರ ಜೊತೆ ಮಾತನಾಡಿಲ್ಲ. ನಾವು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದಿಲ್ಲ. ರೈತರಿಗೆ ಹಾನಿ ಮಾಡಿರುವುದು, ಅವರ ಕೊಲೆ ಮಾಡಿರುವುದು ಯಾರಾದರೂ ಇದ್ದರೆ ಅದು ಬಿಜೆಪಿ ಹಾಗೂ ಎನ್ಡಿಎ ಸರಕಾರ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆ, ರಾಜ್ಯಕ್ಕೆ ಬರಬೇಕಿರುವ ಅನುದಾನ ಸೇರಿದಂತೆ ಕೇಂದ್ರ ಮಂತ್ರಿಯಾಗಿ ರಾಜ್ಯದ ಪರವಾಗಿ ಎಷ್ಟು ವಿಚಾರಗಳನ್ನು ಸಂಸತ್ತಿನಲ್ಲಿ ಮಾತನಾಡಿದ್ದಾರೆ. ತಮ್ಮ ಅವರ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.






