ಅಮಿತ್ ಶಾರನ್ನು ವಜಾಗೊಳಿಸಲು ಶೋಭಕ್ಕ ರಾಷ್ಟ್ರಪತಿಗೆ ಪತ್ರ ಬರೆಯಲಿ : ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಪುಟದಿಂದ ವಜಾಗೊಳಿಸುವಂತೆ ಕೋರಿ ಶೋಭಕ್ಕ ರಾಷ್ಟ್ರಪತಿಗೆ ಪತ್ರ ಬರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದರು.
ರಾಜ್ಯ ಸರಕಾರವು ನಾಗರಿಕರಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿತರಣೆ ಮಾಡಲು ಹೊರಡಿಸಿರುವ ಅಧಿಸೂಚನೆ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಶೋಭಾ ಕರಂದ್ಲಾಜೆ ಪತ್ರ ಬರೆದಿರುವ ಕುರಿತು ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ನುಸುಳುಕೋರರನ್ನು ಕರ್ನಾಟಕದವರೆಗೆ ಬಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಶೋಭಕ್ಕ ಪತ್ರ ಬರೆಯಬೇಕು. ಕರ್ನಾಟಕ ರಾಜ್ಯ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿಲ್ಲ. ಅಕ್ರಮ ವಲಸಿಗರು 4 ಸಾವಿರ ಕಿ.ಮೀ. ದೂರದ ಕರ್ನಾಟಕದವರೆಗೂ ಬಂದಿದ್ದಾರೆ ಎಂದರೆ ಇವರೇನು ಕಡಲೇಕಾಯಿ ತಿನ್ನುತ್ತಿದ್ದರಾ? ಎಂದು ಅವರು ಕಿಡಿಕಾರಿದರು.
ಅಸ್ಸಾಂಲ್ಲಿ ಎನ್ಆರ್ಸಿ ಮತ್ತು ಸಿಎಎ ಮೂಲಕ 30 ಲಕ್ಷ ಜನರನ್ನು ಗುರುತಿಸಿದ್ದು, ಅದರಲ್ಲಿ 21 ಲಕ್ಷ ಹಿಂದೂಗಳನ್ನು ಹೊರಹಾಕಲು ಹೊರಟಿದ್ದರು. ಹೀಗಾಗಿ ಅದನ್ನು ಅಲ್ಲೇ ಕೈಬಿಟ್ಟರು. ರಾಜಕೀಯಕ್ಕಾಗಿ ಬಾಂಗ್ಲಾದೇಶಿಗರ ಹೆಸರು ಹೇಳುತ್ತಿದ್ದಾರೆ. ಭಾರತದ ನೈಜ್ಯ ಮತದಾರರನ್ನು ಕೈಬಿಡುವ ಕುತಂತ್ರ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಕಿಡಿಗಾರಿದರು.






