ಆರೆಸ್ಸೆಸ್ ನೂರು ಸಲ ಹುಟ್ಟಿದರೂ ದೇಶದ ಬಹುತ್ವ ನಾಶ ಮಾಡಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್
‘ಆರೆಸ್ಸೆಸ್ ಯಾಗದ ಕುದುರೆ ಕಟ್ಟಿದ ಖಂಬೀರ’ ಪುಸ್ತಕ ಲೋಕಾರ್ಪಣೆ

ಬೆಂಗಳೂರು : ‘ನಮ್ಮ ದೇಶದ ಆತ್ಮ ಬಹುತ್ವ. ರಾಷ್ಟ್ರೀಯ ಸ್ವಯಂ ಸೇವಕರ ಸಂಘವು(ಆರೆಸ್ಸೆಸ್) ನೂರು ಸಲ ಹುಟ್ಟಿ ಬಂದರೂ, ದೇಶದ ಬಹುತ್ವ ನಾಶ ಮಾಡಲು ಸಾಧ್ಯವಿಲ್ಲ. ಜನರು ಈ ದೇಶದ ಬಹುತ್ವನ್ನು ಕಾಪಾಡಿಕೊಂಡು ಬಂದಿದ್ದಾರೆಯೇ ಹೊರತು ಯಾವುದೇ ರಾಜಕಾರಣಿಗಳಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ನವಯಾನ ಮೈತ್ರಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ‘ಆರೆಸ್ಸೆಸ್ ಯಾಗದ ಕುದುರೆ ಕಟ್ಟಿದ ಖಂಬೀರ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೆಸ್ಸೆಸ್ ಸ್ಥಾಪನೆ ಮಾಡಲು ಹೆಡ್ಗೆವಾರ್ ಅವರಿಗೆ ಪ್ರೇರಣೆಯಾಗಿದ್ದು ಸಾವರ್ಕರ್ ಅಲ್ಲ, ಬಿ.ಎಸ್.ಮೂಂಜೆ. ಮೂಂಜೆ ಹಿಟ್ಲರ್ ಮತ್ತು ಮುಸಲೋನಿಯಿಂದ ಪ್ರೇರಣೆಯಾಗಿ ಬೌನ್ಸಾಲಿ ಮಿಲಿಟರಿ ಶಾಲೆ ಎಂದು ಮಾಡುತ್ತಾರೆ. ಅದರಲ್ಲಿ ಲಾಠಿ, ತಲವಾರ್, ಗುಂಡು ಹಾರಿಸುವುದನ್ನು ಹೇಳಿಕೊಡುತ್ತಾರೆ. ಲಾಠಿ ಇಡಿದುಕೊಂಡು ಸ್ವಯಂ ಸೇವೆ ಮಾಡುತ್ತೇವೆ ಎನ್ನುತ್ತಾರಲ್ಲ. ಸ್ವಯಂ ಸೇವೆಗೆ ಲಾಠಿ ಬೇಕಿಲ್ಲ. ಮಹಾತ್ಮ ಗಾಂಧಿ ಅವರು ಹಿಡಿದುಕೊಂಡ ಲಾಠಿಗೂ ಆರೆಸ್ಸೆಸ್ ನವರು ಹಿಡಿದುಕೊಂಡಿದ್ದ ಲಾಠಿಗೂ ಬಹಳ ವ್ಯತ್ಯಾಸವಿದೆ ಎಂದು ಅವರು ಹೇಳಿದರು.
ಆರೆಸ್ಸೆಸ್ನ್ನು ಮೂರು ಸಲ ನಿಷೇಧ ಮಾಡಲಾಗಿತ್ತು. ಸರ್ಧಾರ್ ವಲ್ಲಭಬಾಯಿ ಪಟೇಲ್ ಅವರು ಮಹಾತ್ಮ ಗಾಂಧಿ ಅವರ ಹತ್ಯೆಯಾದ ಮೇಲೆ ಮೊದಲ ಬಾರಿಗೆ ನಿಷೇಧ ಮಾಡಿದ್ದರು. ಈಗ ಸರ್ಧಾರ್ ವಲ್ಲಭಬಾಯಿ ಪಟೇಲ್ ಅವರ 80 ಅಡಿ ಪ್ರತಿಮೆ ನಿರ್ಮಿಸಲಾಗಿದೆ. ಆರೆಸ್ಸೆಸ್ ನಿಷೇಧಿಸಿದ್ದು ಒಳ್ಳೆಯದು ಎಂದು ನರೇಂದ್ರ ಮೋದಿ ಅವರು ಆ ಪ್ರತಿಮೆಯನ್ನು ನಿರ್ಮಿಸಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.
ಮಹಾತ್ಮ ಗಾಂಧಿ ಅವರು 1948ರಲ್ಲಿ ಕೊಲೆಯಾದಾಗ ಆರೆಸ್ಸೆಸ್ ನಿಷೇಧವಾಯಿತು. ಅನೇಕರು ನಾಥುರಾಮ್ ಗೋಡ್ಸೆ ಆರೆಸ್ಸೆಸ್ ಅಲ್ಲ ಎಂದು ಹೇಳುತ್ತಾರೆ. ಪ್ರಿಯಾಂಕ್ ಖರ್ಗೆ ಅವರು ಇದನ್ನೇ ಹೇಳುತ್ತಿರುವುದು, ಅವರ ಪರವಾಗಿ ಕೆಲಸ ಮಾಡಿಸುವಾಗ ಸ್ವಯಂ ಸೇವಕ ಎಂದು ಹೇಳುತ್ತಾರೆ. ಆದರೆ ಏನಾದರೂ ಕೆಟ್ಟ ಕೆಲಸ ಮಾಡಿದರೆ ಅವರಿಗೂ ಆರೆಸ್ಸೆಸ್ಗೂ ಸಂಬಂಧವಿಲ್ಲ ಎಂದು ಹೇಳುತ್ತಾರೆ ಎಂದು ಅವರು ತಿಳಿಸಿದರು.
ಆರೆಸ್ಸೆಸ್ನಲ್ಲಿ ಅಂಧ ಭಕ್ತರನ್ನು ಯಾವ ರೀತಿ ಸೃಷ್ಠಿ ಮಾಡುತ್ತಾರೆಂದರೆ, ಆರೆಸ್ಸೆಸ್ ಎಂದರೆ ರಾಷ್ಟ್ರೀಯ ರೂಮರ್ಸ್ ಸ್ಪ್ರೆಡ್ಡಿಂಗ್ ಸಂಘ್ ಎಂದು, ವದಂತಿಗಳನ್ನು ಹೇಗೆ ಬೇಕಾದರೂ ಹರಡಿಸುತ್ತಾರೆ. ಸುಳ್ಳನ್ನು ಸತ್ಯ ಎಂದು ನೂರು ಸಲ ಹೇಳುತ್ತಾರೆ ಎಂದು ಹರಿಪ್ರಸಾದ್ ತಿಳಿಸಿದರು.
ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಕಮ್ಯೂನಿಸ್ಟರು ಈ ದೇಶದ ಆಂತರಿಕ ಶತ್ರುಗಳು ಎಂದು ಗೋಲ್ವಾಲ್ಕರ್ ಅವರ ಪುಸ್ತಕದಲ್ಲಿದೆ. ಆರೆಸ್ಸೆಸ್ನವರು ಮಾತ್ರ ದೇಶ ಭಕ್ತರೆಂದು ಗುತ್ತಿಗೆ ತೆಗೆದುಕೊಂಡಿದ್ದಾರೆ. ಒಂದೇ ಒಂದು ರಾಷ್ಟ್ರೀಯ, ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಾಲ್ಗೊಂಡಿಲ್ಲ. ಶೂದ್ರರು, ದಲಿತರಿಗೆ ಅಧಿಕಾರ ಕೊಡುವುದಿದ್ದರೆ, ಬ್ರಿಟೀಷರ ಜೊತೆಗೆ ಗುಲಾಮರಾಗಿಯೇ ಇರುತ್ತೇವೆ ಎನ್ನುವಷ್ಟರ ಮಟ್ಟಿಗೆ ಗೋಲ್ವಾಲ್ಕರ್ ಹೋಗಿದ್ದರು ಎಂದು ಅವರು ಟೀಕಿಸಿದರು.
ಮೋಹನ್ಭಾಗವತ್ ಅವರು ವಿದೇಶದಲ್ಲಿ ಹೇಳುತ್ತಾರೆ. ಮುಸ್ಲಿಮರನ್ನು ವಿರೋಧಿಸುವವರು ಹಿಂದೂನೇ ಅಲ್ಲ ಎಂದು. ಅದನ್ನೇ ಭಾರತದಲ್ಲಿ ಹೇಳಿ. ವಿದೇಶದಲ್ಲಿ ಅದನ್ನು ಹೇಳದಿದ್ದರೆ, ಜೈಲಿಗೆ ಹಾಕುತ್ತಾರೆ. ಅವರು ಬಹಳ ದ್ವಂದ್ವ ನೀತಿಯಲ್ಲಿರುವವರು. ಅವರು ಎಲ್ಲಿ ಬೇಕಾದರೂ ಹೊಂದಾಣಿಕೆಯಾಗುತ್ತಾರೆ ಎಂದು ಹರಿಪ್ರಸಾದ್ ತಿಳಿಸಿದರು.
ಈಗ ಜೆನ್ಝೀಗಳನ್ನು ಮೀಸಲಾತಿ ವಿರುದ್ಧ ಎತ್ತಿಕಟ್ಟಿದ್ದಾರೆ. ಮೀಸಲಾತಿ ಇರುವುದು ಬಡತನ ಹೋಗಲಾಡಿಸಲು ಅಲ್ಲ. ಎಲ್ಲರಿಗೂ ಸಮಪಾಲು, ಸಮಬಾಳು ಉದ್ದೇಶದಿಂದ ಮೀಸಲಾತಿ ಇರುವುದು. ಅದಕ್ಕಾಗಿ ಮೀಸಲಾತಿ ಕುರಿತು ಜಾಗೃತಿ ಮೂಡಿಸಬೇಕಾಗುತ್ತದೆ. ಆರೆಸ್ಸೆಸ್ ಅಕ್ಟೋಪಸ್ ರೀತಿ, ಅದು ಎಲ್ಲಿದೆ ಎಂದು ಹೇಳಲು ಆಗುವುದೇ ಇಲ್ಲ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ಮಾಧ್ಯಮ ಎಲ್ಲ ಕಡೆಯೂ ಇದೆ. ಅದಕ್ಕಾಗಿ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಚಿಂತಕ ಬಂಜಗೆರೆ ಡಾ.ಜಯಪ್ರಕಾಶ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಆಶಯಗಳಿಗೆ ತದ್ವಿರುದ್ಧವಾದ ಆಶಯಗಳಿನ್ನಿಟ್ಟುಕೊಂಡು ಆರೆಸ್ಸೆಸ್ ನಡೆಯುತ್ತಿದೆ. ಭಾರತ ಬಿಟ್ಟು ತೊಲಗಿ ಎಂದು ಗಾಂಧೀಜಿ ನೇತೃತ್ವದಲ್ಲಿ ಚಳವಳಿ ನಡೆದರೆ, ಬ್ರಿಟೀಷರ ಪರವಾಗಿ ಆರೆಸ್ಸೆಸ್ ಮುಖಂಡರು ಪ್ರಚಾರಾಂದೋಲನ ಮಾಡುತ್ತಾರೆ. ಮುಚ್ಚಿಡುತ್ತಾ ಬಂದಿರುವ ಪರಂಪರೆ ಅವರಲ್ಲಿ ಇರುವುದರಿಂದ ಬಹಳ ಜನರಿಗೆ ಇದು ಗೊತ್ತಿಲ್ಲ ಎಂದು ಹೇಳಿದರು.
ಆರೆಸ್ಸೆಸ್, ಸಂಘ ಪರಿವಾರ, ಬಿಜೆಪಿಯವರು ರಾಷ್ಟ್ರಭಕ್ತಿ ಎಂದು ಮಾತನಾಡಿದಾಗ ಅದು ಭಾಷಣದ ಭಕ್ತಿಯೇ ಹೊರತು ನಿಜವಾದ ರಾಷ್ಟ್ರಭಕ್ತಿಯೂ ಅಲ್ಲ. ದೇಶ ಭಕ್ತಿಯೂ ಅಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ.ವೈ.ಪಾಟೀಲ್, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಸುಭಾಷ ರಾಠೋಡ, ಸಿಪಿಎಂ ಡಾ.ಕೆ.ಪ್ರಕಾಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಣುಕಾ ಸಿಂಗೆ, ಚಿಂತಕ ಪ್ರೊ.ಆರ್.ಕೆ.ಹುಡುಗಿ ಮತ್ತಿತರರ ಹಾಜರಿದ್ದರು.






