Budget Session 2026 | ಸಿಎಂ ಯಾರಾಗಬಹುದು?: ಸದನದಲ್ಲಿ ಸ್ವಾರಸ್ಯಕರ ಚರ್ಚೆ

ಬೆಂಗಳೂರು : ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ವಿಚಾರವಾಗಿ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದ್ದು ಮಾತ್ರವಲ್ಲದೆ, ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಹೆಸರು ಉಲ್ಲೇಖ ಮಾಡದ ಪ್ರಸಂಗ ಕಂಡುಬಂದಿತು.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸ್ಪೀಕರ್ ಯು.ಟಿ.ಖಾದರ್ ಅವರು ಫೋಟೋ ಶೂಟ್ ಮಾಡಿಸಿದ್ದಾರೆ. ಇದು ಅನುಮಾನ ಹುಟ್ಟು ಹಾಕಿದ್ದು, ಹೊಸ ಬಾಗಿಲು, ಕಿಟಕಿ ಮಾಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಎಲ್ಲಿಗೂ ಹೋಗಲ್ಲ. 2028ಕ್ಕೂ ಗೆಲ್ಲುತ್ತಾರೆ. ಎಲ್ಲಿಯವರೆಗೆ ಚುನಾವಣೆಗೆ ನಿಲ್ಲುತ್ತಾರೆ, ಅಲ್ಲಿಯವರೆಗೆ ಗೆಲ್ಲುತ್ತಾರೆ ಎಂದರು. ಅದಕ್ಕೆ ಆರ್.ಅಶೋಕ್, ಎಲ್ಲಿಯವರೆಗೆ ಸ್ಪೀಕರ್ ಆಗಿ ಇರುತ್ತಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಹೈಕಮಾಂಡ್ ತೀರ್ಮಾನದವರೆಗೆ ಇರುತ್ತಾರೆ. ನೀವು ಏನೇ ಕಿತಾಪತಿ ಮಾಡಿದರೂ, ಜ್ಯಾಕ್ ಹಾಕಿ ಎತ್ತಿದರೂ ಅವರು ಏಳಲ್ಲ. ಕಿತಾಪತಿಗೆ ಮನ್ನಣೆ ಕೊಡಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಮತ್ತೆ ಆರ್.ಅಶೋಕ್, ಅವರಿಗೆ ಕನಸು ಇಲ್ಲವೇ? ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯ, ನಿನಗೂ ಕನಸಿದೆ ಸಿಎಂ ಆಗಬೇಕೆಂದು. ಅದೇ ರೀತಿ, ಅರವಿಂದ ಬೆಲ್ಲದ ಸಿಎಂ ಆದರೂ ಸಂತೋಷ ಪಡುತ್ತೇನೆ. ಆದರೆ, ವಿಜಯೇಂದ್ರ ಯಾರಿಗೂ ಬಿಡಲ್ಲ ಎಂದು ಸಿದ್ದರಾಮಯ್ಯ ಕಾಲೆಳೆದರು. ಈ ವೇಳೆ ಸದನ ನಗೆಗಡಲಲ್ಲಿ ತೇಲಿತು.
ಈ ವೇಳೆ ಸುನೀಲ್ ಕುಮಾರ್ ಮಧ್ಯಪ್ರವೇಶಿಸಿ, ಡಿ.ಕೆ.ಶಿವಕುಮಾರ್ ಸಿಎಂ ಆದರೂ ಖುಷಿಯಾಗುತ್ತೇನೆ ಎಂದು ಉಲ್ಲೇಖಿಸಿ ಎಂದರು. ಈ ವೇಳೆ ಸಿದ್ದರಾಮಯ್ಯ ಅವರು, ಹೈಕಮಾಂಡ್ ಎಲ್ಲಿಯವರೆಗೆ ತೀರ್ಮಾನ ಮಾಡಲಿದೆಯೋ, ಅಲ್ಲಿವರೆಗೆ ನಾನೆ ಮುಖ್ಯಮಂತ್ರಿ ಎಂದು ಪುನರುಚ್ಚರಿಸಿದರು.
ಆಗ ಆರ್.ಅಶೋಕ್, ನೀರು ಕುಡಿಸಲು ತಂದೆಯವರು ಚೆನ್ನಾಗಿ ಕಲಿಸಿದ್ದಾರೆ. ಹಾಗಾಗಿ ನಮಗೆ, ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಗತಿ ಆಗುತ್ತೆ ಎಂದು ವ್ಯಂಗ್ಯವಾಡಿದರು. ಅದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ನಮ್ಮಲ್ಲಿ ಯಾರೇ ಸಿಎಂ ಆದರೂ ಸರಿ. 224 ಮಂದಿ ಶಾಸಕರು ಇದ್ದಾರೆ. ಯಾರಾದರೂ ನಾನು ಖುಷಿ ಪಡುತ್ತೇನೆ. ಯಾಕೆ ಎಂ.ಬಿ.ಪಾಟೀಲ್, ಮುನಿಯಪ್ಪ, ಶಿವಾನಂದ ಪಾಟೀಲ್ ಆಗಬಾರದಾ? ಕೋನರೆಡ್ಡಿ, ಖಂಡ್ರೆ ಆಗಬಾರದಾ? ಎಲ್ಲರಿಗೋ ಯೋಗ್ಯತೆ ಇದೆ, ಅವಕಾಶ ಸಿಕ್ಕಿಲ್ಲ ಅಷ್ಟೇ ಎಂದು ಚರ್ಚೆಗೆ ತೆರೆ ಎಳೆದರು.






