MLC ಭೀಮರಾವ್ ಪಾಟೀಲ್ಗೆ ನಾಲ್ಕೂವರೆ ವರ್ಷದಿಂದ ಕಚೇರಿ ನೀಡದ ಆರೋಪ: ಸಭಾಪತಿ ಕಚೇರಿಗೆ ಹಾಜರಾಗಲು ಬೀದರ್ ಡಿಸಿಗೆ ಹೊರಟ್ಟಿ ಆದೇಶ

ಬೆಂಗಳೂರು : ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕೂವರೆ ವರ್ಷ ಕಳೆದರೂ ಕಾಂಗ್ರೆಸ್ ಸದಸ್ಯ ಭೀಮರಾವ್ ಪಾಟೀಲ್ ಅವರಿಗೆ ಬೀದರ್ ಜಿಲ್ಲಾಧಿಕಾರಿ ಕಚೇರಿ ನೀಡಿಲ್ಲ ಎಂದು ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಸದನದಲ್ಲಿ ಆಕ್ಷೇಪಿಸಿದರು.
ಬುಧವಾರ ವಿಧಾನಪರಿಷತ್ತಿನ ಕಲಾಪ ಆರಂಭವಾಗುತ್ತಿದ್ದಂತೆ ಪ್ರಸ್ತಾಪಿಸಿದ ಪುಟ್ಟಣ್ಣ, ಭೀಮರಾವ್ ಅವರು ಪರಿಷತ್ ಸದಸ್ಯರಾಗಿ ನಾಲ್ಕೂವರೆ ವರ್ಷವಾದರೂ ಬೀದರ್ ಜಿಲ್ಲಾಧಿಕಾರಿಗಳು ಕಚೇರಿ ನೀಡಿಲ್ಲ. ಹಕ್ಕು ಭಾದ್ಯತಾ ಸಮಿತಿಯಿಂದ ಶಿಫಾರಸು ಮಾಡಿದರೂ ಈ ಬಗ್ಗೆ ಜಿಲ್ಲಾಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
2023ರಲ್ಲಿ ಸಭಾಪತಿ ಕಚೇರಿಯಿಂದ ಪತ್ರ ಬರೆದು ಭೀಮರಾವ್ ಪಾಟೀಲ್ ಅವರಿಗೆ ಕಚೇರಿ ನೀಡುವಂತೆ ತಿಳಿಸಲಾಗಿದೆ. ಅಲ್ಲದೇ, ಬೀದರ್ನಲ್ಲಿಯೇ ನಡೆದ ಹಕ್ಕು ಭಾದ್ಯತಾ ಸಮಿತಿ ಸಭೆ ಸೇರಿ ಪಾಟೀಲ್ ಅವರಿಗೆ ಕಚೇರಿ ನೀಡುವಂತೆ ಸೂಚನೆ ನೀಡಿತ್ತು. ಆದರೂ ಭೀಮರಾವ್ ಪಾಟೀಲ್ ಅವರಿಗೆ ಈವರೆಗೆ ಕಚೇರಿ ಒದಗಿಸಿಲ್ಲ. ಕೂಡಲೇ ಜಿಲ್ಲಾಧಿಕಾರಿಗೆ ಸಮನ್ಸ್ ನೀಡಿ ಸದನಕ್ಕೆ ಕರೆಸಿ ಕಟಕಟೆಗೆ ನಿಲ್ಲಿಸಿ ಛೀಮಾರಿ ಹಾಕಿ ಶಿಕ್ಷೆ ನೀಡಬೇಕು ಎಂದು ಪುಟ್ಟಣ್ಣ ಒತ್ತಾಯಿಸಿದರು.
ಬಿಜೆಪಿ ಸದಸ್ಯ ಸುನೀಲ್ ವಲ್ಯಾಪುರ ಮಾತನಾಡಿ, ಭೀಮರಾವ್ ಪಾಟೀಲ್ ಅವರಿಗೆ ಕಚೇರಿ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಸಂಬಂಧಪಟ್ಟವರನ್ನು ಕರೆಯಿಸಿ ಛೀಮಾರಿ ಹಾಕಿ ಎಂದು ಒತ್ತಾಯಿಸಿದರು. ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ ಅಹಮದ್ ಅವರು, ಭೀಮರಾವ್ ಪಾಟೀಲ್ ಅವರಿಗೆ ನಾಲ್ಕು ವರ್ಷ ಕಳೆದರೂ ಕಚೇರಿ ನೀಡದಿರುವುದು ಸದನದ ಸದಸ್ಯರಿಗೆ ಮಾಡಿರುವ ಅಪಮಾನ, ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.
ಸದಸ್ಯ ಭೀಮರಾವ್ ಪಾಟೀಲ್ ಮಾತನಾಡಿ, ನಾಲ್ಕೂವರೆ ವರ್ಷದಿಂದ ಜನರ ಕೆಲಸ ಮಾಡಲು ಅನುಕೂಲವಾಗುವಂತೆ ಬೀದರ್ನ ಔರಾದ್ ತಾಲೂಕಿನಲ್ಲಿ ಕಚೇರಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮೂರು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಇದು ನನಗೆ ಹಾಗೂ ಸದನಕ್ಕೆ ಮಾಡಿದ ಅಪಮಾನ ಎಂದು ನೋವು ಹೊರಹಾಕಿದರು.
ಸಭಾನಾಯಕ ಎನ್.ಎಸ್.ಭೋಸರಾಜ್ ಮಾತನಾಡಿ, ಮುಖ್ಯ ಕಾರ್ಯದರ್ಶಿಗಳ ಮುಖಾಂತರ ಜಿಲ್ಲಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು. ಈ ವೇಳೆ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಬೀದರ್ ಜಿಲ್ಲಾಧಿಕಾರಿಗಳು ಗುರುವಾರ(ಮಾ.26) ತಮ್ಮ ಕಚೇರಿಯಲ್ಲಿ ಖುದ್ದು ಹಾಜರಿರಬೇಕು ಎಂದು ಆದೇಶಿಸಿದರು.






