Budget Session 2026 | ಹಸ್ತಪ್ರತಿಗಳು ಮತ್ತು ಡಿಜಿಟಲೀಕರಣ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

ಬೆಂಗಳೂರು : ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಅವರು ವಿಧಾನಪರಿಷತ್ತಿನಲ್ಲಿ ಮಂಗಳವಾರ ಮಂಡಿಸಿದ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2026ನೇ ಸಾಲಿನ “ಕರ್ನಾಟಕ ಜ್ಞಾನಭಂಡಾರ ಹಸ್ತಪ್ರತಿಗಳು ಮತ್ತು ಡಿಜಿಟಲೀಕರಣ ವಿಧೇಯಕ”ವು ಸದಸ್ಯರುಗಳ ವಿಸ್ತೃತ ಚರ್ಚೆಯ ನಂತರ ಸರ್ವಾನುಮತದಿಂದ ಅಂಗೀಕಾರವಾಯಿತು.
ಈ ವಿಧೇಯಕ ಕುರಿತು ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್, ಈ ವಿಧೇಯಕವು ಅತ್ಯಂತ ಮಹತ್ವದ ಹಾಗೂ ಸರಳವಾದ ವಿಧೇಯಕವಾಗಿದ್ದು, ನಮ್ಮ ರಾಜ್ಯದಲ್ಲಿ ಇರುವ ಹಸ್ತಪ್ರತಿಗಳನ್ನು ಸಮೀಕ್ಷೆ ಮಾಡುವುದು. ದಾಖಲೆಗಳನ್ನು ಸಂರಕ್ಷಣೆ ಮಾಡುವುದು, ಡಿಜಿಟೀಕರಣ, ಸಂಶೋಧನೆ, ಪ್ರಕಟಣೆ ಮತ್ತು ಸಾರ್ವಜನಿಕರಿಗೆ ಲಭ್ಯಗೊಳಿಸುವ ಉದ್ದೇಶದಿಂದ “ಹಸ್ತಪ್ರತಿ ಪ್ರಾಧಿಕಾರ ಸ್ಥಾಪಿಸಲು” ಈ ವಿಧೇಯಕದ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹಸ್ತಪ್ರತಿ ಎಂದರೆ ತಾಳೆಗರಿಯ ಮೇಲಿನ ಕಿರುರೂಪದ ವರ್ಣಚಿತ್ರಗಳು ಮತ್ತು ಪುರಾತನ ಜ್ಞಾನವನ್ನು ಸಂರಕ್ಷಿಸುವ ಮೌಖಿಕ ಸಂಪ್ರದಾಯಗಳ ದೃಶ್ಯ-ಶ್ರವಣ ದಾಖಲೆಗಳನ್ನು ಒಳಗೊಂಡ ಹಾಗೂ ಮುದ್ರಣ ಅಥವಾ ಶಿಲಾಮುದ್ರಣ ಮಾಡದಿರುವ, ಸಂಸ್ಕೃ ತ, ಕನ್ನಡ, ಪ್ರಾಕೃತ, ಪಾಲಿ, ತಮಿಳು, ತೆಲುಗು, ಅರಬ್ಬೀ, ಪಾರ್ಸಿ, ಮೋಡಿ, ಶಾರದ ಅಥವಾ ಯಾವುದೇ ಇತರ ಭಾರತೀಯ ಅಥವಾ ವಿದೇಶಿ ಲಿಪಿಯುಳ್ಳ ಯಾವುದೇ ಕೈಬರಹ ಅಥವಾ ತಾಳೆಗರಿ ದಾಖಲೆ. ಭೋಜ-ತೊಗಟೆ, ಹಾಳೆ, ಬಟ್ಟೆ, ತಾಮ್ರ ಪತ್ರ, ಶಿಲಾ ಶಾಸನ ಅಥವಾ ಯಾವುದೇ ಇತರ ಪದಾರ್ಥದಿಂದ ಮಾಡಿರುವ ಲಿಪಿಪತ್ರ ಎಂದು ಸಚಿವರು ವಿವರಿಸಿದರು.
ಹಸ್ತಪ್ರತಿಗಳ ದಾಖಲೆಗಳ ಮಾಲಕತ್ವವನ್ನು ಬದಲಾಯಿಸಲಾಗುವುದಿಲ್ಲ. ಡಿಜಿಟೀಕರಣ ಮಾಡಿ ವಾಪಸ್ಸು ಮಾಲಕರಿಗೆ ನೀಡಲಾಗುವುದು. ಜ್ಞಾನಭಂಡಾರ ಹಸ್ತಪ್ರತಿಗಳು ಮತ್ತು ಡಿಜಿಟೀಕರಣವನ್ನು ಸರಿಯಾಗಿ ಮಾಡಿದಾಗ ಜ್ಞಾನಭಂಡಾರವನ್ನು ಸಂರಕ್ಷಣೆ ಮಾಡಿದಂತಾಗುತ್ತದೆ. ಮುಂದಿನ ಪೀಳಿಗೆಗೂ ನೀಡಿದಂತಾಗುತ್ತದೆ. ಜಗತ್ತಿನಲ್ಲಿ ಕನ್ನಡ ಜ್ಞಾನಸಂಪನ್ನವಾಗುತ್ತದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು. ಈ ವೇಳೆ ಸುದೀರ್ಘ ಚರ್ಚೆಯ ನಂತರ ಮೇಲ್ಮನೆಯಲ್ಲಿ ಈ ವಿಧೇಯಕಕ್ಕೆ ಅಂಗೀಕಾರ ದೊರಕಿತು.






