Budget Session 2026 | ಮೇಲ್ಮನೆಯಲ್ಲಿ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ ಅಂಗೀಕಾರ

ಬೆಂಗಳೂರು : ರಾಜ್ಯದ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ-2026’ಅನ್ನು ಗುರುವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಿದರು.
ಬಳಿಕ ಈ ವಿಧೇಯಕದ ಕುರಿತು ಮಾತನಾಡಿದ ಅವರು, ತೆರಿಗೆ ಸಂಗ್ರಹಣೆಯನ್ನು ಪರಿಣಾಮಕಾರಿಯಾಗಿಸಲು ಮತ್ತು ರಾಜ್ಯದ ಬೊಕ್ಕಸಕ್ಕೆ ತೆರಿಗೆ ಬಾಕಿದಾರರನ್ನು ಕಡಿಮೆಯಾಗಿಸಲು ಹಾಗೂ ಇತರೆ ಆನುಷಂಗಿಕ ತಿದ್ದುಪಡಿಗಳನ್ನು ಸಹ ಮಾಡಲು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 35)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕ ಜಾರಿಗೆ ಮಂಡಿಸಲಾಗಿದೆ ಎಂದರು.
ರಾಜ್ಯದಲ್ಲಿ ಸಂಚರಿಸುವ ಬಾಡಿಗೆ ವಾಹನಗಳು, ಪ್ರವಾಸಿ ವಾಹನಗಳು ಹಾಗೂ ಖಾಸಗಿ ಸೇವಾ ವಾಹನಗಳ ಜೀವಿತಾವಧಿ ತೆರಿಗೆಯನ್ನು ಈ ತಿದ್ದುಪಡಿಯ ಮೂಲಕ ಪರಿಷ್ಕರಿಸಲಾಗಿದೆ. ಪ್ರಮುಖವಾಗಿ ಕಾರು, ಜೀಪು ಮತ್ತು ಓಮ್ನಿ ವಾಹನಗಳ ನೋಂದಣಿ ತೆರಿಗೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಪಕ್ಕದ ರಾಜ್ಯಗಳಲ್ಲಿ ತೆರಿಗೆ ಪ್ರಮಾಣ ಕಡಿಮೆ ಇರುವುದರಿಂದ ಅನೇಕ ವಾಹನ ಮಾಲಕರು ಅನ್ಯ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡುತ್ತಿದ್ದರು. ಇದನ್ನು ತಡೆಗಟ್ಟಲು ಮತ್ತು ಕರ್ನಾಟಕದಲ್ಲೇ ನೋಂದಣಿ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ತೆರಿಗೆ ದರಗಳನ್ನು ವೈಜ್ಞಾನಿಕವಾಗಿ ಮರು-ಹೊಂದಾಣಿಕೆ ಮಾಡಲಾಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಸಾರಿಗೆ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ಸೆಸ್ ವಿಧಿಸಲಾಗುವುದು. ದ್ವಿಚಕ್ರ ವಾಹನಗಳಿಗೆ 500 ರೂ. ನಾಲ್ಕು ಚಕ್ರದ ವಾಹನಗಳಿಗೆ(ಕಾರು) 1,000 ರೂ. ಈ ಹಣವನ್ನು ಚಾಲಕರು, ಕ್ಲೀನರ್ಗಳು ಮತ್ತು ಮೆಕ್ಯಾನಿಕ್ಗಳಂತಹ ಸಾರಿಗೆ ಕ್ಷೇತ್ರದ ಅಸಂಘಟಿತ ಕಾರ್ಮಿಕರ ಕಲ್ಯಾಣ ಮತ್ತು ವಿಮಾ ಸೌಲಭ್ಯಗಳಿಗಾಗಿ ಬಳಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ವಿದ್ಯುತ್ ಚಾಲಿತ ವಾಹನಗಳಿಗೆ ಈ ಹಿಂದಿನಂತೆಯೇ ತೆರಿಗೆ ವಿನಾಯಿತಿ ಮತ್ತು ರಿಯಾಯಿತಿಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ. 15 ವರ್ಷ ಮೀರಿದ ಹಳೆಯ ಸರಕಾರಿ ವಾಹನಗಳನ್ನು ಕಡ್ಡಾಯವಾಗಿ ಗುಜರಿ ಮಾಡುವ ಪ್ರಕ್ರಿಯೆಗೆ ಈ ವಿಧೇಯಕದ ಮೂಲಕ ವೇಗ ನೀಡಲಾಗುವುದು. ಇದು ಪರಿಸರ ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಈ ತಿದ್ದುಪಡಿ ವಿಧೇಯಕವು ಕೇವಲ ಆದಾಯ ಸಂಗ್ರಹಕ್ಕಾಗಿ ಅಲ್ಲ, ಬದಲಾಗಿ ಲಕ್ಷಾಂತರ ಸಾರಿಗೆ ಕಾರ್ಮಿಕರ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ನೀಡುವ ಮಾನವೀಯ ದೃಷ್ಟಿಕೋನವನ್ನು ಹೊಂದಿದೆ. ಅಲ್ಲದೆ, ಅನ್ಯ ರಾಜ್ಯಗಳ ನೋಂದಣಿ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಇದು ಸಹಕಾರಿಯಾಗಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ನಂತರ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕವು ವಿಧಾನಪರಿಷತ್ತಿನಲ್ಲಿ ಅಂಗೀಕಾರವಾಯಿತು.







