ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–2032ಕ್ಕೆ ಸಂಪುಟ ಅನುಮೋದನೆ

ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
ಬೆಂಗಳೂರು: ಕರ್ನಾಟಕದಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಬೇಕು, ಯುವ ಸಮೂಹ ಜಾಗತಿಕ ಮಟ್ಟದಲ್ಲಿ ಉದ್ಯೋಗ ಗಿಟ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂಬ ಉದ್ದೇಶ ಹೊಂದಿರುವ ರಾಜ್ಯ ಸರಕಾರ ಈಗ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025-2032 ಜಾರಿಗೆ ತರಲು ಕ್ರಮ ಕೈಗೊಂಡಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೌಶಲ್ಯ ನೀತಿಗೆ ಅನುಮೋದನೆ ನೀಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಈ ಅಭಿವೃದ್ಧಿ ನೀತಿಯಿಂದ ರಾಜ್ಯದ ಪ್ರಗತಿಗೆ ಅತ್ಯಂತ ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರಕಾರ ಮುಂದಾಗಿದ್ದು, 2032ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ಹೊಂದಲಾಗಿದ್ದು, ಇದನ್ನು ಸಾಕಾರಗೊಳಿಸಲು ನಾವು ಬದ್ಧವಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೌಶಲ್ಯ ನೀತಿ ಜಾರಿಗೆ ಮೂಲಕ ರಾಜ್ಯದಲ್ಲಿ ವಿಶೇಷ ಪ್ರತಿಭಾ ಕಣಜ ಸ್ಥಾಪಿಸಲಾಗುತ್ತದೆ. ವಿಶೇಷ ತರಬೇತಿಗಳನ್ನು ಯುವ ಸಮೂಹಕ್ಕೆ ನೀಡುವ ಮೂಲಕ ಅಂತರ್ ರಾಷ್ಟ್ರೀಯ ಮಟ್ಟದಲ್ಲಿಯೂ ಸಮರ್ಥವಾಗಿ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುತ್ತದೆ. ರಾಜ್ಯ, ರಾಷ್ಟ್ರೀಯ ಮತ್ತು ಜಾಗತಿಕ ಅಗತ್ಯಗಳನ್ನು ಪೂರೈಸಲು ಕೌಶಲ್ಯಪೂರ್ಣ ಕಾರ್ಯಪಡೆ ರಚನೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025-2032 ಕೌಶಲ್ಯ ತರಬೇತಿಯನ್ನು ಶಿಕ್ಷಣ, ಉದ್ಯೋಗ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ ಮತ್ತು ಉತ್ತಮ ಭವಿಷ್ಯವನ್ನು ರೂಪಿಸುತ್ತದೆ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕೌಶಲ್ಯ ನೀತಿಯ ಪ್ರಮುಖ ಅಂಶಗಳು:
ಕಲಿಕೆ ಜೊತೆಗೆ ಕೌಶಲ್ಯ, ನನ್ನ ವೃತ್ತಿ ನನ್ನ ಆಯ್ಕೆ ಯೋಜನೆಗೆ ಆದ್ಯತೆ, ಅಪ್ರೆಂಟಿಸ್ಶಿಪ್, ಐಟಿಐ ತರಬೇತಿ ಮೂಲಕ ವಿಶೇಷ ಸಹಯೋಗ, ತಾಂತ್ರಿಕ ಮತ್ತು ಕೈಗಾರಿಕಾ ಬದಲಾವಣೆಗಳಿಗೆ ನಿರಂತರ ಕಲಿಕೆಗೆ ಗಮನ, ಮಹಿಳೆಯರು, ಅಂಗವಿಕಲರು, ನಗರ ಪ್ರದೇಶದಲ್ಲಿನ ಬಡವರು, ದಮನಿತ ಸಮುದಾಯಗಳಿಗೆ ತರಬೇತಿ, ಐಟಿಐ ಆಧುನೀಕರಣ, ಜಿಟಿಟಿಸಿ ವಿಸ್ತರಣೆ ಮತ್ತು ಗ್ರಾಮೀಣ ಮತ್ತು ನಗರ ಕೌಶಲ್ಯ ಕೇಂದ್ರಗಳ ಸ್ಥಾಪನೆ, ಮೂಲಸೌಕರ್ಯ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.







