ಸಂಪುಟ ಪುನರ್ ರಚನೆ ಆದರೂ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯ ಸಂಪುಟ ಪುನರ್ ರಚನೆ ಪ್ರಕ್ರಿಯೆಗೆ ಒಪ್ಪಿಗೆ ಸಿಕ್ಕಿದೆ. ಆದರೆ, ಯಾವುದೇ ರೀತಿಯಲ್ಲಿ ಮುಖ್ಯಮಂತ್ರಿ, ನಾಯಕತ್ವ ಬದಲಾವಣೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆಗೆ ಅನುಮತಿ ಕೊಟ್ಟಿದ್ದಾರೆಂದು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸಂಪುಟ ಪುನರ್ ರಚನೆ ಆದರೆ ಒಳ್ಳೆಯದೇ. ಬಹಳ ದಿನಗಳಿಂದ ಶಾಸಕರ ಬೇಡಿಕೆ ಇದೆ ಎಂದರು.
ಸಚಿವರಾಗಬೇಕು ಎನ್ನುವ ಅಪೇಕ್ಷೆ ಹಲವರಿಗಿದೆ. ಸಂಪುಟ ಪುನರ್ ರಚನೆ ಅನುಮತಿ ಕೊಟ್ಟಿದ್ದರೆ, ಸಿಎಂ ಬದಲಾವಣೆ ವಿಚಾರ ನೀವೇ ಊಹೆ ಮಾಡಿಕೊಳ್ಳಿ. ಸಂಪುಟ ಪುನಾರಚನೆ ಆದರೆ ಸಿಎಂ ಬದಲಾವಣೆ ಆಗಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಮಯ ಸಂದರ್ಭ ನೋಡಿ ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.
ಕಬ್ಬಿಗೆ ದರ ನಿಗದಿ ಮಾಡುವುದು ಕೇಂದ್ರ ಸರಕಾರ. ನಮ್ಮ ರೈತರು ಹೆಚ್ಚಿನ ದರ ನೀಡಬೇಕೆಂದು ಹೇಳುತ್ತಿದ್ದಾರೆ. ನಾವು ಕೊಡುವುದಕ್ಕೆ ಬರುವುದಿಲ್ಲ. ಆದರೂ, ಸರಕಾರದಿಂದ ಪ್ರತಿ ಟನ್ಗೆ 50 ರೂ. ನೀಡುತ್ತೇವೆ. ಕಾರ್ಖಾನೆಗಳು 50 ರೂ. ನೀಡಲು ಒಪ್ಪಿಕೊಂಡಿವೆ. ಜತೆಗೆ, ಕೇಂದ್ರ ಸರಕಾರದ ಜತೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.





