ನಾಗ್ಪುರ ಶಿಕ್ಷಣ ನೀತಿ ರದ್ದು: ಡಿಸಿಎಂ ಡಿ.ಕೆ.ಶಿವಕುಮಾರ್
![ನಾಗ್ಪುರ ಶಿಕ್ಷಣ ನೀತಿ ರದ್ದು: ಡಿಸಿಎಂ ಡಿ.ಕೆ.ಶಿವಕುಮಾರ್ ನಾಗ್ಪುರ ಶಿಕ್ಷಣ ನೀತಿ ರದ್ದು: ಡಿಸಿಎಂ ಡಿ.ಕೆ.ಶಿವಕುಮಾರ್](/images/placeholder.jpg)
ಬೆಂಗಳೂರು, ಆ. 21: ಬಿಜೆಪಿ ಸರಕಾರ ತರಾತುರಿಯಲ್ಲಿ ಜಾರಿಗೆ ಮಾಡಿರುವ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ರದ್ದು ಮಾಡಿ, ಹೊಸ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ. ಇನ್ನೊಂದು ವಾರದಲ್ಲಿ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಪೀಳಿಗೆ ಮಕ್ಕಳ ಏಳಿಗೆಗಾಗಿ ಕರ್ನಾಟಕ ಶಿಕ್ಷಣ ನೀತಿ ರೂಪಿಸುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ವಾಗ್ದಾನದಂತೆ ನಾಗ್ಪುರ ಶಿಕ್ಷಣ ನೀತಿ ರದ್ದು ಮಾಡುತ್ತೇವೆ. ಶಿಕ್ಷಣ ತಜ್ಞರ ಸಮಿತಿ ರಚನೆ ಸಂಬಂಧ ನಮ್ಮ ಇಬ್ಬರು ಸಚಿವರು ಪ್ರಸ್ತಾವನೆ ನೀಡಲಿದ್ದಾರೆ ಎಂದರು.
ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಮ್ಮಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ, ಆದರೂ ಬಿಜೆಪಿ ಸರಕಾರ 2021 ರಲ್ಲಿ ತರಾತುರಿಯಲ್ಲಿ ಇದನ್ನು ಜಾರಿಗೆ ತಂದಿದೆ. ನಮ್ಮ ಮಕ್ಕಳಿಗೆ ಹಳೆ ಕಾಲದ ಶಿಕ್ಷಣ ನೀಡಲು ಬಿಜೆಪಿ ಹೊರಟಿತ್ತು. ನಾವು ಎಲ್ಲ ರಂಗಗಳಲ್ಲೂ ಮುಂದಿದ್ದೇವೆ. ಹೀಗಿರುವಾಗ ಹಲವಾರು ನ್ಯೂನ್ಯತೆಗಳಿರುವ ನಾಗ್ಪುರ ಶಿಕ್ಷಣ ನೀತಿ(ಎನ್ಇಪಿ)ಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಅವರು ಹೇಳಿದರು.
ಗುಜರಾತ್, ಉತ್ತರಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ಯಾವ ರಾಜ್ಯಗಳಲ್ಲೂ ಎನ್ಇಪಿ ಜಾರಿಗೆ ತಂದಿಲ್ಲ. ಹೀಗಿರುವಾಗ ನಮ್ಮ ರಾಜ್ಯದಲ್ಲಿ ಏಕೆ ಬೇಕು? ನಮ್ಮ ಮಕ್ಕಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು, ಹಳೆ ಕಾಲದ ಶಿಕ್ಷಣ ನಮ್ಮ ಮಕ್ಕಳಿಗೆ ಬೇಡ ಎಂದು ಅವರು ಹೇಳಿದರು.
ಯಾವುದೇ ಶಿಕ್ಷಣ ನೀತಿ ಪ್ರಾಥಮಿಕ ಹಂತದಿಂದ ಜಾರಿಗೆ ಬರಬೇಕು, ಆಗ ಅದರ ಸಾಧಕ-ಭಾದಕಗಳು ತಿಳಿಯುತ್ತವೆ. 2013-18 ಸಿದ್ದರಾಮಯ್ಯ ಅವರ ಸರಕಾರದ ವೇಳೆ ಜ್ಞಾನ ಆಯೋಗ ಎಂದು ಮಾಡಿ, ಕರ್ನಾಟಕ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು. ಅದರ ಅಂಶಗಳನ್ನು ಈಗ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಎನ್ಇಪಿಯಲ್ಲೇ ಮುಂದುವರೆಯುತ್ತೇವೆ ಎಂದು ಡೀಮ್ಡ್ ವಿಶ್ವವಿದ್ಯಾಲಯಗಳು ಹೇಳಿವೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸಮಿತಿ ರಚನೆಯ ನಂತರ ಅಲ್ಲಿರುವ ಶಿಕ್ಷಣ ತಜ್ಞರ ಅಭಿಪ್ರಾಯ ಕೇಳಿ, ಮುಂದುವರೆಯಲಾಗುವುದು. ಶಿಕ್ಷಣವು ರಾಜ್ಯ ಪಟ್ಟಿಯಲ್ಲಿ ಇರುವಂತ ವಿಷಯ, ಬೇರೆಯವರ ಹಸ್ತಕ್ಷೇಪ ನಮಗೆ ಬೇಡ ಎಂದು ಹೇಳಿದರು.