ತೀರ್ಥಹಳ್ಳಿ| ಮಹಿಳೆಯರಿಗೆ ಅಶ್ಲೀಲ ಸಂಜ್ಞೆ, ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪ: ಮಧುಕರ ಮಯ್ಯ ವಿರುದ್ಧ ದೂರು
![ತೀರ್ಥಹಳ್ಳಿ| ಮಹಿಳೆಯರಿಗೆ ಅಶ್ಲೀಲ ಸಂಜ್ಞೆ, ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪ: ಮಧುಕರ ಮಯ್ಯ ವಿರುದ್ಧ ದೂರು ತೀರ್ಥಹಳ್ಳಿ| ಮಹಿಳೆಯರಿಗೆ ಅಶ್ಲೀಲ ಸಂಜ್ಞೆ, ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪ: ಮಧುಕರ ಮಯ್ಯ ವಿರುದ್ಧ ದೂರು](https://www.varthabharati.in/h-upload/2023/08/13/1179785-theerthahalli.gif)
ಪತ್ರಿಕಾಗೋಷ್ಠಿಯಲ್ಲಿ ತುಂಗಾ ತೀರದ ಮಾನಿನೀಯರ ಒಕ್ಕೂಟ ಸದಸ್ಯರು
ಶಿವಮೊಗ್ಗ: ಮಹಿಳೆಯರಿಗೆ ಅಶ್ಲೀಲ ಸಂಜ್ಞೆ, ಲೈಂಗಿಕ ಕಿರುಕುಳ, ಸಾಮಾಜಿಕ ಜಾಲತಾಣದಲ್ಲಿ ಅಸಹ್ಯ ಪದ ಬಳಕೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ ಮಧುಕರ ಮಯ್ಯ ಎಂಬಾತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತುಂಗಾ ತೀರದ ಮಾನಿನೀಯರ ಒಕ್ಕೂಟದ ಪದ್ಮಜಾ ಜೋಯ್ಸ್, ಎಂ.ಜಿ. ಗಾಯತ್ರಿ ಶೇಷಗಿರಿ, ಥೆರೇಸಾ ಮ್ಯಾಥ್ಯೂ ಅವರು ತಿಳಿಸಿದ್ದಾರೆ.
ಶನಿವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಆರೋಪಿ ಕಳೆದ ಒಂದು ವರ್ಷಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಚಲನವಲನಗಳನ್ನು ಗಮನಿಸಿ ಅಶ್ಲೀಲ ಸಂಜ್ಞೆಗಳನ್ನು ಮಾಡುತ್ತಾ ಬಂದಿದ್ದಾನೆ. ವಿಚಾರಿಸಲು ಹೋದಾಗ ನಿಂದನಾತ್ಮಕ ಮತ್ತು ಅಶ್ಲೀಲಕರ ಸಂಜ್ಞೆಗಳನ್ನು ಮಾಡುವ ಮೂಲಕ ಲೈಂಗಿಕ ಕಿರುಕುಳ, ಮಾನಹಾನಿಯುಂಟು ಮಾಡುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ಅವಮಾನಕಾರಿಯಾಗಿ ಪೋಸ್ಟ್ಗಳನ್ನು ಹಾಕುತ್ತಾನೆʼ ಎಂದು ಆರೋಪಿಸಿದ್ದಾರೆ.
ತನ್ನನ್ನು ವಕೀಲ ಎಂದು ಹೇಳಿಕೊಳ್ಳುವ ಈತ, ತನಗೆ ನ್ಯಾಯಾಧೀಶರು, ವಕೀಲರುಗಳ ಬೆಂಬಲವಿದೆ. ಯಾವ ನ್ಯಾಯಾಧೀಶರು, ಕೋರ್ಟ್ ನನಗೆ ಏನು ಮಾಡಲು ಆಗುವುದಿಲ್ಲ ಎಂದು ಬೆದರಿಸುತ್ತಾನೆ. ಈತನಿಂದಾಗಿ ಹೆಣ್ಣುಮಕ್ಕಳು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿಯೂ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ನಮ್ಮ ಮೇಲೆ ಹಲ್ಲೆ ಮಾಡುವ ಕುತಂತ್ರ ಮಾಡುತ್ತಿರುವುದಾಗಿ ಆರೋಪಿಸಿರುವ ಅವರು, ನಮಗೆ ತೀವ್ರ ಆತಂಕ ಮತ್ತು ಭಯ ಉಂಟಾಗಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇವೆ. ಮುಂದೆ ನಮಗೇನಾದರೂ ತೊಂದರೆ ಆದಲ್ಲಿ ಅದಕ್ಕೆ ಮಧುಕರ ಮಯ್ಯ ನೇರ ಹೊಣೆ ಎಂದು ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.