ಆಡಳಿತಾರೂಢ ಕಾಂಗ್ರೆಸ್ ಸರಕಾರ ಸುಳ್ಳು, ವಂಚನೆಗೆ ಹೆಸರಾಗಿರುವ ಸರಕಾರ : ಛಲವಾದಿ ನಾರಾಯಣಸ್ವಾಮಿ ಟೀಕೆ

ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಸುಳ್ಳು, ಮೋಸ, ವಂಚನೆಗೆ ಹೆಸರಾಗಿರುವ ಸರಕಾರವಾಗಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಬುಧವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರಕ್ಕೆ ಸುಳ್ಳು ಹೇಳುವುದು ಹರಿದುಬಂದ ವಿಚಾರ, ಮೋಸ ಮಾಡುವುದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಕಾಂಗ್ರೆಸ್ ಹುಟ್ಟಿದ ದಿನದಿಂದ ಮೋಸ ಜೊತೆಯಲ್ಲಿ ಬಂದಿದೆ. ಪ್ರತಿದಿನ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಡವರ ಹೊಟ್ಟೆಯ ಮೇಲೆ ಬರೆ ಹಾಕಿ ಈ ಸರಕಾರ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡಿದೆ. ಸರಕಾರದ ಖಜಾನೆ ಬರಿದಾಗಿದೆ. ಖಜಾನೆ ತುಂಬಿಸಿಕೊಳ್ಳಲು ಬಡವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕೇಂದ್ರದ ಒತ್ತಡ ಮತ್ತು ಯೋಚನೆ ಇಲ್ಲದಿದ್ದರೂ ಈ ರೀತಿ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿ ಯುಪಿಐ ಯೋಜನೆಗೆ ಕಳಂಕ ತರುವ ಕೆಲಸ ರಾಜ್ಯ ಸರಕಾರ ಮಾಡಿದೆ ಎಂದು ಅವರು ದೂರಿದರು.
ನೆಪ ಮಾತ್ರಕ್ಕೆ ಅಧಿವೇಶನ: ಆಗಸ್ಟ್ 11ರಿಂದ ಅಧಿವೇಶನ ಪ್ರಾರಂಭವಾಗಲಿದೆ. ಕೇವಲ 9 ದಿನ ಮಾತ್ರ ಅಧಿವೇಶನ ಕರೆದಿದ್ದು, ಮೊದಲ ದಿನ ಹೊರತುಪಡಿಸಿದರೆ ಕೇವಲ 8 ದಿನಗಳ ಅಧಿವೇಶನ ನಡೆಯಲಿದೆ. ಹೆಚ್ಚು ದಿನಗಳ ಕಾಲ ಅಧಿವೇಶನ ನಡೆದರೆ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ಸಿಗುತ್ತದೆ. ಯಾವುದೇ ವಿಚಾರಗಳು ಚರ್ಚೆ ಆಗಬಾರದೆಂದು ಸರಕಾರ ನೆಪ ಮಾತ್ರಕ್ಕೆ ಕಲಾಪ ನಡೆಸಲು ಮುಂದಾಗಿದೆ ಎಂದು ಟೀಕಿಸಿದರು.







