ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ; ಪೊಲೀಸರ ಲೋಪ ಎತ್ತಿ ಹಿಡಿದ ವರದಿ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ
ಬೆಂಗಳೂರು : ಆರ್ಸಿಬಿ ಗೆಲುವಿನ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ.ಕುನ್ಹಾ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯಲ್ಲಿ ಪೊಲೀಸರ ಲೋಪಗಳನ್ನೇ ಎತ್ತಿ ಹಿಡಿಯಲಾಗಿದೆ.
ಎರಡು ಸಂಪುಟಗಳನ್ನು ಒಳಗೊಂಡು ಈ ವರದಿಯಲ್ಲಿ ಕಾಲ್ತುಳಿತಕ್ಕೆ ಕೆಎಸ್ಸಿಎ, ಡಿಎನ್ಎ, ಆರ್ಸಿಬಿ ಹಾಗೂ ಪೊಲೀಸರನ್ನು ನೇರ ಹೊಣೆ ಮಾಡಲಾಗಿದೆ. ಜತೆಗೆ, ಘಟನೆಯ ದಿನದ ಮಧ್ಯಾಹ್ನ 3:25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ 5:30ರ ವರೆಗೆ ಪೊಲೀಸ್ ಕಮಿಷನರ್ಗೆ ಮಾಹಿತಿಯಿರಲಿಲ್ಲ. ಜಂಟಿ ಪೊಲೀಸ್ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದು 4 ಗಂಟೆಗೆ ಎಂದು ಉಲ್ಲೇಖಿಸಿರುವುದಾಗಿ ಗೊತ್ತಾಗಿದೆ.
ಕಾರ್ಯಕ್ರಮ ನಡೆಸುವುದು ಅಸಾಧ್ಯವೆಂದು ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದರು. ಚಿನ್ನಸ್ವಾಮಿ ಸ್ಟೇಡಿಯಂ ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಕ್ರೀಡಾಂಗಣದ ಒಳಗೆ 79 ಪೊಲೀಸರು ಮಾತ್ರ ಇದ್ದರು. ಹೊರಗೆ ಪೊಲೀಸರು ಇರಲಿಲ್ಲ. ಆಂಬುಲೆನ್ಸ್ ಇರಲಿಲ್ಲ. ಹೀಗೆ, ಈ ಎಲ್ಲರ ಕರ್ತವ್ಯ ಲೋಪ, ನಿರ್ಲಕ್ಷ್ಯದ ಪರಮಾವಧಿ ಎದ್ದು ಕಾಣುತ್ತಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿರುವುದಾಗಿ ಮೂಲಗಳು ತಿಳಿಸಿವೆ.





