ಜೆ.ಸಿ.ರಾಯ್ ಜೀವನದ ಕೊನೆಯ 15 ನಿಮಿಷಗಳು: ಕಡೆಯ ಬಯಕೆ ಏನು ಗೊತ್ತೇ?

ಜೆ.ಸಿ.ರಾಯ್ | Photo Credit : Instagram
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಹಾಗೂ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಜೆ.ಸಿ.ರಾಯ್ (57) ಬೆಂಗಳೂರಿನಲ್ಲಿ ಜನವರಿ 30ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಭಾರತ ಹಾಗೂ ಯುಎಇಗಳಲ್ಲಿ ಐಷಾರಾಮಿ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಹೆಸರಾಗಿದ್ದ ರಾಯ್ ಅವರಿಗೆ ಆದಾಯ ತೆರಿಗೆ ಇಲಾಖೆ ಸಮನ್ಸ್ ನೀಡಿದ ಬೆನ್ನಲ್ಲೇ ಸಾವಿಗೆ ಶರಣಾಗಿದ್ದರು. ಉದ್ಯಮಿಯ ಜೀವನದ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬ ಬಗೆಗಿನ ತನಿಖೆ ಕುತೂಹಲ ಕೆರಳಿಸಿದೆ.
ರಾಯ್ ಕೊನೆಗೆ ಹೇಗೆ ಕಚೇರಿಗೆ ಬಂದರು, ಐಟಿ ಅಧಿಕಾರಿಗಳ ಜತೆ ಹೇಗೆ ಸಂವಾದ ನಡೆಸಿದರು, ಕೊನೆಗೆ ಹೇಗೆ ಮೌನಕ್ಕೆ ಶರಣಾದರು ಎಂಬ ಬಗ್ಗೆ ಹಾಗೂ ಮಾರಣಾಂತಿಕ ಗುಂಡೇಟಿನ ಗಾಯದೊಂದಿಗೆ ಬಳಿಕ ಪತ್ತೆಯಾದರು ಎನ್ನುವುದನ್ನು ಮಾಧ್ಯಮ ವರದಿಗಳು ಬಣ್ಣಿಸಿವೆ. ಅಧಿಕಾರಿಗಳು ಕೂಡಾ ಕೊನೆಯ 15 ನಿಮಿಷದ ಬಗೆಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮಧ್ಯಾಹ್ನ 3ರ ಸುಮಾರಿಗೆ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್ ಅವರ ಜತೆ ಐಟಿ ವಿಚಾರಣೆಗೆ ಸಹಕರಿಸಲು ಕಚೇರಿಗೆ ಆಗಮಿಸಿದ್ದರು. ಹಿಂದಿನ ತಿಂಗಳ ದಾಳಿಯ ಹಿನ್ನೆಲೆಯಲ್ಲಿ ಸತತ ಎರಡು ದಿನಗಳಿಂದ ಕೊಚ್ಚಿನ್ ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ತಂಡಗಳು ಸಂಯೋಜಿತ ಶೋಧ ಕಾರ್ಯ ನಡೆಸಿದ್ದವು.
ತಮ್ಮ ಖಾಸಗಿ ಚೇಂಬರ್ಗೆ ಪ್ರವೇಶಿಸಿ ತಾಯಿಯ ಜತೆ ಮಾತನಾಡುವ ಇಂಗಿತ ವ್ಯಕ್ತಪಡಿಸಿದರು. ಆ ವೇಳೆ ಜೋಸೆಫ್ ಹೊರ ನಡೆದರು. ವಾಪಸ್ಸಾದಾಗ ಯಾರನ್ನೂ ಒಳಕ್ಕೆ ಬಿಡದಂತೆ ರಾಯ್ ಸೂಚಿಸಿದ್ದಾಗಿ ಭದ್ರತಾ ಸಿಬ್ಬಂದಿ ಹೇಳಿದರು. ತಕ್ಷಣವೇ ಕರೆ ಮಾಡಿ ವಾಪಸ್ಸಾಗುವುದಾಗಿ ಹೇಳಿ ಮತ್ತೊಂದು ಕೊಠಡಿಗೆ ತೆರಳಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
10 ನಿಮಿಷ ಬಳಿಕ ಜೋಸೆಫ್ ಕ್ಯಾಬಿನ್ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಒಳಗಿನಿಂದ ಬೀಗ ಹಾಕಿಕೊಂಡಿರುವುದು ಗಮನಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ ರಾಯ್ ಅವರ ಅಂಗಿಯಲ್ಲಿ ರಕ್ತದ ಕಲೆಗಳಿದ್ದು, ಕುರ್ಚಿಯಲ್ಲಿ ಕುಳಿತಿದ್ದರು. ತಕ್ಷಣ ಆ್ಯಂಬುಲೆನ್ಸ್ ಮೂಲಕ ಎಚ್ಎಸ್ಆರ್ ಲೇಔಟ್ನ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಗಲೇ ರಾಯ್ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದರು.
ರಾಯ್ ತಲೆ ಹಾಗೂ ಎಡಭಾಗದಲ್ಲಿ ಎದೆಗೆ ಗುಂಡೇಟಿನ ಗಾಯಗಳಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಲೈಸನ್ಸ್ ಹೊಂದಿದ್ದ ಪಿಸ್ತೂಲು ವಶಪಡಿಸಿಕೊಂಡು ವಿಧಿವಿಜ್ಞಾನ ಹಾಗೂ ಸಿಡಿತ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.







