ಸಿಎಂ ರೈತ ವಿದ್ಯಾನಿಧಿ ಯೋಜನೆ | ಅರ್ಹ ವಿದ್ಯಾರ್ಥಿಗಳಿಗೆ ಹಣ ಪಾವತಿ ಮಾಡದ ಸರಕಾರ

ಬೆಂಗಳೂರು, ಅ.12: ಬಿಜೆಪಿ ಸರಕಾರವು ರೈತ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಜಾರಿ ಮಾಡುವ ಸಲುವಾಗಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಅನುಷ್ಠಾನ ಮಾಡಿತ್ತು. ಆದರೆ ಬಿಜೆಪಿ ಸರಕಾರವೇ ಹಣವನ್ನು ಅರ್ಹ ವಿದ್ಯಾರ್ಥಿಗಳ ಖಾತೆಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದ್ದು, ಅದೇ ರೀತಿಯಾಗಿ ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರವೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಹಣ ಬಿಡುಗಡೆ ಮಾಡದೆ ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.
2021-22ನೇ ಸಾಲಿನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯ ಸರಕಾರ ಜಾರಿ ಮಾಡಿತ್ತು. ಆ ವರ್ಷದಲ್ಲಿ ಯೋಜನೆಯಡಿ ಆಯ್ಕೆಯಾದ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಹಣವನ್ನು ಪಾವತಿ ಮಾಡಿತ್ತು. ಆದರೆ ಎರಡನೆಯ ವರ್ಷ ಅಂದರೆ 2022-23ನೇ ಸಾಲಿನಲ್ಲಿ ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಜನವರಿ ತಿಂಗಳಿನಲ್ಲಿ ಮೊದಲ ಹಂತದಲ್ಲಿ ಹಣವನ್ನು ಪಾವತಿ ಮಾಡಿದೆ. ಇದೇ ಸಾಲಿನಲ್ಲಿ ಆಯ್ಕೆಯಾದ ಇನ್ನೂ ಅನೇಕ ಅರ್ಹ ವಿದ್ಯಾರ್ಥಿಗಳಿಗೆ ಹಣವನ್ನು ಪಾವತಿ ಮಾಡಿರಲಿಲ್ಲ.
2021-22ನೇ ಸಾಲಿನಲ್ಲಿ ರಾಜ್ಯಾದ್ಯಂತ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಉಪಯೋಗವನ್ನು ಪಡೆದುಕೊಂಡಿದ್ದು, ರಾಜ್ಯ ಸರಕಾರ 464 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. 2022-23ನೇ ಸಾಲಿನಲ್ಲಿ 8.5 ಲಕ್ಷ ವಿದ್ಯಾರ್ಥಿಗಳಿಗೆ 374 ಕೋಟಿ ರೂ.ಗಳನ್ನು ಮಾತ್ರ ಸರಕಾರ ಪಾವತಿ ಮಾಡಿದ್ದು, ಇನ್ನು ಕೆಲ ವಿದ್ಯಾರ್ಥಿಗಳಿಗೆ ಹಣ ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ. ಇನ್ನುಳಿದ ಅರ್ಹ ವಿದ್ಯಾರ್ಥಿಗಳಿಗೆ ಹಣ ಪಾವತಿ ಮಾಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ.
2021-2022ನೇ ಸಾಲಿನಲ್ಲಿ ಕೃಷಿ ಭೂಮಿ ಹೊಂದಿರುವ(ಪಹಣಿ ಇರುವ) ರೈತರ ಮಕ್ಕಳಿಗೆ ಮಾತ್ರ ಈ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. 2022-23ನೇ ಶೈಕ್ಷಣಿಕ ಸಾಲಿನಿಂದ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮವನ್ನು ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಿ ಆದೇಶ ಹೊರ ಡಿಸಲಾಗಿತ್ತು. ಈ ಮೂಲಕ ರಾಜ್ಯದ ಲ್ಲಿರುವ 18 ಲಕ್ಷ ಕೃಷಿ ಕಾರ್ಮಿಕ ಕುಟುಂಬಗಳ 6 ಲಕ್ಷ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಯೋಜನೆ ಲಭಿಸಿತ್ತು. ಇದಕ್ಕೆ ಬೇಕಾದ ಹೆಚ್ಚುವರಿ ಅನುದಾನ 360 ಕೋಟಿ ರೂ.ಗಳನ್ನೂ ಬಿಡುಗಡೆ ಮಾಡಲು ಬಿಜೆಪಿ ಸರಕಾರವು ಪೂರಕ ಅಂದಾಜಿನಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಪಿಯುಸಿ, ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2,500 ರೂ. ಹಾಗೂ ವಿದ್ಯಾರ್ಥಿನಿಯರಿಗೆ 3 ಸಾವಿರ ರೂ.ಗಳನ್ನು, ಪದವಿ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ಹಾಗೂ ವಿದ್ಯಾರ್ಥಿನಿಯರಿಗೆ 5,500 ರೂ.ಗಳನ್ನು, ಎಲ್ಎಲ್ಬಿ, ಬಿಫಾರ್ಮ, ನರ್ಸಿಂಗ್ ಸೇರಿ ವೃತ್ತಿಪರ ಕೋರ್ಸ್ನ ವಿದ್ಯಾರ್ಥಿ ಗಳಿಗೆ 7,500 ರೂ. ಹಾಗೂ ವಿದ್ಯಾರ್ಥಿನಿಯರಿಗೆ 8 ಸಾವಿರ ರೂ.ಗಳನ್ನು, ಎಂಬಿಬಿಎಸ್, ಬಿಇ, ಬಿಟೆಕ್ ಸೇರಿದಂತೆ ಎಲ್ಲ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿ ಗಳಿಗೆ 10 ಸಾವಿರ ರೂ. ಹಾಗೂ ವಿದ್ಯಾರ್ಥಿನಿಯರಿಗೆ 11 ಸಾವಿರ ರೂ.ಗಳನ್ನು ರೈತ ಕುಟುಂಬಗಳ ಮಕ್ಕಳಿಗೆ ಪಾವತಿ ಮಾಡಲಾಗುತ್ತಿದೆ.
ಆದರೆ 2023-24ನೇ ಶೈಕ್ಷಣಿಕ ವರ್ಷ ಆರಂಭವಾದರೂ ಹಿಂದಿನ ವರ್ಷದ ವಿದ್ಯಾರ್ಥಿವೇತನ ಪಾವತಿ ಮಾಡದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
2022-23ನೇ ಸಾಲಿನ ಬಾಕಿ ಹಣವನ್ನು ಬಿಡುಗಡೆ ಮಾಡುವ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳಲ್ಲಿ ಈಗ ಗೊಂದಲ ಉಂಟಾಗಿದ್ದು, ಸರಕಾರ ಹಣ ಬಿಡುಗಡೆ ಮಾಡಲು ಸೂಚನೆ ನೀಡಿದರೆ ಉಳಿದ ವಿದ್ಯಾರ್ಥಿಗಳಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಆಧಾರ್ ಕಾರ್ಡ್ ಅಕೌಂಟ್ಗೆ ಸರಿಯಾಗಿ ಲಿಂಕ್ ಆಗಿಲ್ಲದ ವಿದ್ಯಾರ್ಥಿಗಳಿಗೂ ಹಣವನ್ನು ಇನ್ನೂ ಪಾವತಿ ಮಾಡಿಲ್ಲ. ಹಾಗಾಗಿ ಉನ್ನತ ಮಟ್ಟದ ಸಭೆಯ ಬಳಿಕವೇ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಕೃಷಿ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಯೋಜನೆ ಸ್ಥಗಿತವಾಗುವ ಸಾಧ್ಯತೆ: 2023-24ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಎಸ್ಎಸ್ಪಿ ಪೋರ್ಟಲ್ನಲ್ಲಿ ಈಗಾಗಲೇ ವಿವಿಧ ಇಲಾಖೆಗಳ ವಿದ್ಯಾರ್ಥಿ ವೇತನಕ್ಕಾಗಿ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ವರ್ಷದ ಬಜೆಟ್ನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಗೆ ಪ್ರತ್ಯೇಕ ಹಣವನ್ನು ಮೀಸಲಿಡದ ಕಾರಣ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಶೈಕ್ಷಣಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಹಿಂದಿನ ಶೈಕ್ಷಣಿಕ ವರ್ಷ ಮುಗಿದರೂ ಅರ್ಹರಿಗೆ ಇನ್ನೂ ಹಣ ಪಾವತಿ ಮಾಡದಿರುವುದು ಇದಕ್ಕೆ ಪುಷ್ಟಿ ನೀಡಿದೆ.
ʼʼಮೊದಲನೇ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಾಗ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಹಣವನ್ನು ರಾಜ್ಯ ಸರಕಾರ ಸಕಾಲದಲ್ಲಿ ಅಕೌಂಟ್ಗೆ ಜಮೆ ಮಾಡಿತ್ತು. ಆದರೆ ಈ ವರ್ಷ ಅಂತಿಮ ಪರೀಕ್ಷೆಗಳು ಮುಗಿಯುವ ಹಂತದಲ್ಲಿದ್ದರೂ ಹಣವನ್ನು ಪಾವತಿ ಮಾಡುತ್ತಿಲ್ಲ. 2021-2022ನೇ ವರ್ಷದಂತೆ ಈ ವರ್ಷವೂ ಎಸ್ಎಸ್ಪಿ ಪೋರ್ಟಲ್ನಲ್ಲಿಯೇ ಅರ್ಜಿ ಸಲ್ಲಿಕೆ ಮಾಡಲಾಗಿತ್ತುʼʼ
- ಗೌತಮ್, ಎರಡನೇ ವರ್ಷದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿ
------------------------------------------------------------------------
ʼʼಸರಕಾರದ ಎಲ್ಲ ವಿದ್ಯಾರ್ಥಿವೇತನಗಳಿಗೆ ಎಸ್ಎಸ್ಪಿ ಪೋರ್ಟಲ್ನಲ್ಲಿಯೇ ಅರ್ಜಿ ಸಲ್ಲಿಸಲಾಗುತ್ತಿದೆ. ಹಿಂದುಳಿದ ವರ್ಗದ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಇಲಾಖೆ ವಿದ್ಯಾರ್ಥಿವೇತನವನ್ನು ಪಾವತಿ ಮಾಡಿದೆ. ಇಲ್ಲಿ ಆಧಾರ್ ಲಿಂಕ್, ಬ್ಯಾಂಕ್ ಪಾಸ್ಬುಕ್ ಲಿಂಕ್ನಂತಹ ಯಾವುದೇ ಸಮಸ್ಯೆಗಳು ಬಂದಿಲ್ಲ. ಹಣವನ್ನೂ ಸಕಾಲದಲ್ಲಿ ಮಂಜೂರು ಮಾಡಲಾಗಿದೆ. ಆದರೆ ಕೃಷಿ ಇಲಾಖೆಯು ಮಂಜೂರು ಮಾಡಬೇಕಾದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯ ಹಣವನ್ನು ಆಯ್ಕೆಯಾದವರಿಗೆ ಮಂಜೂರು ಮಾಡಬೇಕಾದರೆ ಆಧಾರ್ ಕಾರ್ಡ್ ಲಿಂಕ್ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಎಲ್ಲ ರೀತಿಯಲ್ಲೂ ದೃಢೀಕರಣವಾಗಿದ್ದು, ಹಣ ಪಾವತಿ ಮಾತ್ರ ಬಾಕಿ ಇದೆ ಎಂದು ಎಸ್ಎಸ್ಪಿ ಪೋರ್ಟಲ್ನಲ್ಲಿ ಸೂಚಿಸುತ್ತಿದೆʼʼ
<ರಮ್ಯಾ, ಬೆಂಗಳೂರು ಉತ್ತರ ವಿವಿ ವಿದ್ಯಾರ್ಥಿನಿ
2022-23ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆಯ ಬಾಕಿ ಹಣ ಪಾವತಿಯ ಕುರಿತು ಹಾಗೂ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಯೋಜನೆಯಡಿ ವಿದ್ಯಾರ್ಥಿವೇತನ ನೀಡುವ ಕುರಿತು ಕೃಷಿ ಇಲಾಖೆಯ ಮುಖ್ಯ ಆಯುಕ್ತ ಪಾಟೀಲ್ ಯಲಗೌಡ ಶಿವನಗೌಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.







