ಜಿಎಸ್ಟಿ ಪರಿಷ್ಕರಣೆ-ಕೇಂದ್ರದ ಅನುದಾನ ವಿಳಂಬದಿಂದ ವಿತ್ತೀಯ ಕೊರತೆ ಬಜೆಟ್ ಮಂಡನೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ಬಿಡುಗಡೆ ವಿಳಂಬ ಹಾಗೂ ಜಿಎಸ್ಟಿ ಪರಿಷ್ಕರಣೆಯಿಂದಾಗಿ ಈ ಬಾರಿ ವಿತ್ತೀಯ ಕೊರತೆ ಬಜೆಟ್ ಮಂಡನೆ ಮಾಡುವಂತಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸೋಮವಾರ ನಗರದ ಖಾಸಗಿ ಹೊಟೇಲ್ನಲ್ಲಿ ರಾಜ್ಯ ವಿಧಾನಮಂಡಲದ ವತಿಯಿಂದ ಶಾಸಕರು ಹಾಗೂ ವಿಧಾನಪರಿಷತ್ತಿನ ಸದಸ್ಯರಿಗಾಗಿ ಆಯವ್ಯಯ ರಾಜಸ್ವಗಳ ಸಂಗ್ರಹಣೆ, ಅನುದಾನಗಳ ವರ್ಗೀಕರಣ ಮತ್ತು ಹಂಚಿಕೆ ಹಾಗೂ ಆಯವ್ಯಯ ಅನುದಾನಗಳ ಬಳಕೆ, ನಿರ್ವಹಣೆ ವಿಷಯದ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.
2025-26ರಲ್ಲಿ 4,09,018 ಕೋಟಿ ರೂ.ಗಳಿದ್ದ ಬಜೆಟ್ ಗಾತ್ರ, 2026-27ರಲ್ಲಿ 4,48,004 ಕೋಟಿ ರೂ.ಗಳಿಗೆ ತಲುಪಿದೆ. ನಾವು 2025-26ರಲ್ಲಿ ಬಜೆಟ್ ಅಂದಾಜುಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ, ಕೇಂದ್ರ ಸರಕಾರದಿಂದ ಬರಬೇಕಾದ ಅನುದಾನ ಬರಲಿಲ್ಲ. ಆದುದರಿಂದ, ನಾವು ಬಜೆಟ್ನಲ್ಲಿ ಘೋಷಣೆ ಮಾಡಿದಂತಹ ಒಟ್ಟು ಖರ್ಚು ತಲುಪಲು ಸಾಧ್ಯವಿಲ್ಲ. ಆದುದರಿಂದ, ವಿತ್ತೀಯ ಕೊರತೆ ಬಜೆಟ್ ಮಂಡಿಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಮುಖ್ಯಮಂತ್ರಿ ಹೇಳಿದರು.
ಜಿಎಸ್ಟಿ ಪರಿಷ್ಕರಣೆ ಮಾಡುವ ಮುನ್ನ ನಮಗೆ ಜಿಎಸ್ಟಿಯಿಂದ ಬರುತ್ತಿದ್ದ ತೆರಿಗೆ ಬೆಳವಣಿಗೆ ದರ ಶೇ.10ರಷ್ಟು ಇತ್ತು. ಪರಿಷ್ಕರಣೆ ಆದ ನಂತರ ಅದು ಶೇ.4ಕ್ಕೆ ಇಳಿಯಿತು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಇದರ ಪರಿಣಾಮ ಬೀರಿದೆ. ರಾಜ್ಯದ ಜಿಎಸ್ಡಿಪಿ 33,05,500 ರೂ.ಗಳು. ಈ ಮೊತ್ತದ ಶೇ.25ರಷ್ಟು ಸಾಲ ಇರಬೇಕೆಂದು ವಿತ್ತೀಯ ಹೊಣೆಗಾರಿಕೆ ಕಾಯ್ದೆ ತಿಳಿಸುತ್ತದೆ ಎಂದು ಅವರು ತಿಳಿಸಿದರು.
ವಿಪಕ್ಷದವರು ಆರೋಪ ಮಾಡುತ್ತಿರುವಂತೆ ನಾವು ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಿ ಸಾಲ ಮಾಡಿಲ್ಲ. ಇದು ನಾನು ಮಂಡಿಸಿದ 17ನೆ ಬಜೆಟ್. 2013-2018ರವರೆಗೆ ನಾನು ಮಂಡಿಸಿದ ಬಜೆಟ್ ಗಳಲ್ಲಿ ರಾಜಸ್ವ ಹೆಚ್ಚಳ ಇತ್ತು. ಎಂದಿಗೂ ವಿತ್ತೀಯ ಕೊರತೆ ಎದುರಾಗಿರಲಿಲ್ಲ. ಈಗ ವಿತ್ತೀಯ ಕೊರತೆ ಇದೆ. ಕಳೆದ ವರ್ಷ ವಿತ್ತೀಯ ಕೊರತೆ 19 ಸಾವಿರ ಕೋಟಿ ರೂ. ಇತ್ತು, ಮುಂದಿನ ವರ್ಷಕ್ಕೆ 22 ಸಾವಿರ ಕೋಟಿ ರೂ.ಗಳಾಗುತ್ತದೆ. ಕೇಂದ್ರದಿಂದ ಬರಬೇಕಾದ ಬಾಕಿ ಹಣ ಬಂದಿದ್ದರೆ, ವಿತ್ತೀಯ ಕೊರತೆಯನ್ನು ನಿವಾರಿಸಲು ಸಾಧ್ಯವಾಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
2025-26ರಲ್ಲಿ ಜಿಎಸ್ಟಿಯನ್ನು ಪರಿಷ್ಕರಣೆ ಮಾಡಿದರು. 2017ರಲ್ಲಿ ಜಿಎಸ್ಟಿ ಜಾರಿಗೆ ಬಂತು. ಅದಕ್ಕಿಂತ ಮುಂಚೆ ನಮ್ಮ ಆರ್ಥಿಕ ಬೆಳವಣಿಗೆ ಶೇ.14ರಷ್ಟು ಇತ್ತು. 2022ರವರೆಗೆ ಕೇಂದ್ರ ಸರಕಾರ ಪರಿಹಾರ ನೀಡುತ್ತಿತ್ತು. ಆನಂತರ ಅದನ್ನು ನಿಲ್ಲಿಸಿದರು. ಇದು ಸಹ ವಿತ್ತೀಯ ಕೊರತೆಗೆ ಕಾರಣವಾಯಿತು ಎಂದು ಮುಖ್ಯಮಂತ್ರಿ ಉಲ್ಲೇಖಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಕೇಂದ್ರ ಸರಕಾರ ನಮಗೆ 19 ಸಾವಿರ ಕೋಟಿ ರೂ.ಗಳನ್ನು ಕೊಡಬೇಕಿತ್ತು. ಆದರೆ, ಕೊಟ್ಟಿದ್ದು 11 ಸಾವಿರ ಕೋಟಿ ರೂ.ಮಾತ್ರ. ನಾವು ಈ ಯೋಜನೆಗೆ 27 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇವೆ. ರಾಜ್ಯದ ಜಿಎಸ್ಡಿಪಿ 2025-26ರಲ್ಲಿ ಶೇ.8.1ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ ಶೇ.7.4ಕ್ಕೆ ಹೆಚ್ಚಿದೆ ಎಂದು ಸಿದ್ದರಾಮಯ್ಯ ಹೇಳಿದರು.
2026-27ನೆ ಸಾಲಿನಲ್ಲಿ ವಾಣಿಜ್ಯ ತೆರಿಗೆಯಿಂದ 1.25 ಲಕ್ಷ ಕೋಟಿ ರೂ., ಮೋಟಾರು ವಾಹನ ತೆರಿಗೆ-15,500 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ-29 ಸಾವಿರ ಕೋಟಿ ರೂ., ಅಬಕಾರಿ-45 ಸಾವಿರ ಕೋಟಿ ರೂ. ಹಾಗೂ ಇತರೆ-5500 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರಕ್ಕೆ ನಮ್ಮ ರಾಜ್ಯದಿಂದ 4.50 ಲಕ್ಷ ಕೋಟಿ ರೂ.ಗಳನ್ನು ವಿವಿಧ ತೆರಿಗೆಗಳ ಮೂಲಕ ನೀಡುತ್ತೇವೆ. 2026-27ರಲ್ಲಿ ಕೇಂದ್ರದಿಂದ ನಮಗೆ 73 ಸಾವಿರ ಕೋಟಿ ರೂ.ತೆರಿಗೆ ಹಂಚಿಕೆ ಬರಲಿದೆ. 14ನೆ ಹಣಕಾಸು ಆಯೋಗದಲ್ಲಿ ಕೇಂದ್ರದಿಂದ ನಮಗೆ ತೆರಿಗೆ ಹಂಚಿಕೆ ಪ್ರಮಾಣ ಶೇ.4.7, 15ನೆ ಹಣಕಾಸು ಆಯೋಗದಲ್ಲಿ ಶೇ.3.6 ಹಾಗೂ 16ನೆ ಹಣಕಾಸು ಆಯೋಗದಲ್ಲಿ ಶೇ.4.131 ನಿಗದಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಬಜೆಟ್ ಯಾವ ರೀತಿ ಖರ್ಚು ಆಗುತ್ತಿದೆ ಎಂದು ನೋಡಬೇಕಾದದ್ದು ಶಾಸಕರ ಕರ್ತವ್ಯ. ರೆವಿನ್ಯೂ ಸರಪ್ಲಸ್, ರೆವಿನ್ಯೂ ಡಿಫಿಸಿಟ್, ಸಂಚಿತ ನಿಧಿ, ಭದ್ಧತಾ ವೆಚ್ಚ, ಪೂರಕ ಅಂದಾಜು, ಆರ್ಥಿಕ ವರದಿಗಳು, ಸಮೀಕ್ಷಾ ವರದಿಗಳ ಬಗ್ಗೆಯೂ ಶಾಸಕರು ಗಮನ ಹರಿಸಬೇಕು. ಅಧ್ಯಯನ ಮಾಡಬೇಕು ಎಂದು ಅವರು ಹೇಳಿದರು.
ವೇದಿಕೆ ಮೇಲೆ ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಎನ್.ಎಸ್.ಭೊಸರಾಜು ಉಪಸ್ಥಿತರಿದ್ದರು.
ನಾವೆಲ್ಲರೂ ಶಾಸಕರಾಗಿ ಬಂದಿದ್ದೇವೆ. ಬಜೆಟ್ ಸಂದರ್ಭದಲ್ಲಿ ಇದರ ಸಂಪೂರ್ಣ ಅರಿವು ಇರುವುದಿಲ್ಲ. ಆರ್ಥಿಕ ವ್ಯವಸ್ಥೆ, ವಿತ್ತೀಯ ಕೊರತೆ, ಸರ್ಪ್ಲಸ್ ಬಜೆಟ್ ಇವುಗಳ ಕುರಿತು ತಿಳಿದುಕೊಳ್ಳಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಶಾಸಕರಿಗೆ ಈ ಕಾರ್ಯಾಗಾರವನ್ನು ಆಯೋಜಿಸಿದ್ದು, 17 ಬಾರಿ ಬಜೆಟ್ ಮಂಡಿಸಿ, ಅನುಭವವಿರುವ ಮುಖ್ಯಮಂತ್ರಿ ಅವರಿಂದ ಶಾಸಕರಿಗೆ ತರಬೇತಿ ನೀಡಲು ನಿರ್ಧರಿಸಲಾಯಿತು.
ಯು.ಟಿ.ಖಾದರ್, ಸ್ಪೀಕರ್
ಪ್ರತಿ ಬಾರಿ ಬಜೆಟ್ ಮಂಡಿಸುತ್ತೇವೆ. ಎಲ್ಲರಿಗೂ ಸವಿಸ್ತಾರವಾಗಿ ಶಾಸಕರಿಗೆ ಬಜೆಟ್ ಬಗ್ಗೆ ತಿಳಿಸಲು, ಇದೇ ಮೊಟ್ಟಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಮಾಡಿದ್ದೇವೆ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ, ಇಡೀ ದೇಶದಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಮೊದಲನೆ ಸ್ಥಾನಕ್ಕೆ ಬರಲಿ ಎಂದು ಹಾರೈಸುತ್ತೇನೆ. ಬಜೆಟ್ ಮೇಲೆ ಚರ್ಚೆ ಮಾಡುವಾಗ ಅಂಕಿ ಅಂಶಗಳನ್ನು ಕ್ರೋಢೀಕರಿಸಿ, ಸದನದಲ್ಲಿ ಚರ್ಚೆ ಮಾಡುವಾಗ ಪ್ರಸ್ತಾವ ಮಾಡಿ.
ಬಸವರಾಜ ಹೊರಟ್ಟಿ, ಸಭಾಪತಿ







