ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ: ಮುಖ್ಯ ನ್ಯಾಯಮೂರ್ತಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು : ʼದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಬೇಕು’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರಾವಳಿ ಭಾಗದ ಜನರಿಗೆ ತ್ವರಿತ ನ್ಯಾಯದಾನ ಕಲ್ಪಿಸಲು ಹಾಗೂ ಸರ್ವರಿಗೂ ನ್ಯಾಯದ ಲಭ್ಯತೆಯನ್ನು ಖಾತ್ರಿಪಡಿಸಲು ರಾಜ್ಯ ಸರಕಾರವು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಿಂದ ನ್ಯಾಯದಾನದ ವಿಕೇಂದ್ರೀಕರಣ, ಸಕಾಲಿಕ ಹಾಗೂ ಕೈಗೆಟುಕುವ ನ್ಯಾಯದ ಸಾಂವಿಧಾನಿಕ ಭರವಸೆಯನ್ನು ಬಲಪಡಿಸಿದಂತಾಗಲಿದೆ. ಜೊತೆಗೆ ಪ್ರಧಾನ ಪೀಠದ ಮೇಲಿನ ಬಾಕಿ ಪ್ರಕರಣಗಳ ಒತ್ತಡವು ಗಣನೀಯವಾಗಿ ತಗ್ಗಲಿದೆ. ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಸುಮಾರು 50,000 ಚದರ ಅಡಿ ವಿಸ್ತೀರ್ಣದ ಭೂಮಿ ಲಭ್ಯವಿದೆ. ಪೀಠವು ಸುಗಮವಾಗಿ ಕಾರ್ಯನಿರ್ವಹಿಸಲು ನಾಗರಿಕ, ಆಡಳಿತಾತ್ಮಕ ಮತ್ತು ಲಾಜಿಸ್ಟಿಕ್ ಮೌಲ್ಯಸೌಕರ್ಯವನ್ನು ಒದಗಿಸಲು ನಮ್ಮ ಸರಕಾರ ಸಿದ್ಧವಿದೆ ಎನ್ನುವುದನ್ನು ಸಹ ಪತ್ರದ ಮೂಲಕ ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.






