ʼರೋಹಿತ್ ವೇಮುಲಾ ಕಾಯ್ದೆʼಯ ಕರಡು ರಚನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ಆಧಾರದಲ್ಲಿ ತಾರತಮ್ಯ ತಡೆಗಟ್ಟುವ ʼರೋಹಿತ್ ವೇಮುಲಾ ಕಾಯ್ದೆʼ ಕರ್ನಾಟಕದಲ್ಲಿ ಜಾರಿ ಸಂಬಂಧಿಸಿದಂತೆ ಕರಡು ರಚನೆಯನ್ನು ಪ್ರಾರಂಭಿಸಲು ಕಾನೂನು ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು. ಇದನ್ನು ಖಾತ್ರಿಪಡಿಸುವುದಕ್ಕಾಗಿ ʼರೋಹಿತ್ ವೇಮುಲಾ ಕಾಯ್ದೆʼ ಹೆಸರಿನ ಕಾನೂನನ್ನು ಕರ್ನಾಟಕದಲ್ಲೂ ರೂಪಿಸುವಂತೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪತ್ರದ ಮೂಲಕ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ, ರಾಹುಲ್ ಗಾಂಧಿಯವರೇ ನಿಮ್ಮ ಸಹಾನುಭೂತಿಯ ಪತ್ರ ಮತ್ತು ನ್ಯಾಯಕ್ಕಾಗಿ ಅಚಲ ಧ್ವನಿಗೆ ಧನ್ಯವಾದಗಳು. ಜಾತಿ, ವರ್ಗ ಅಥವಾ ಗುರುತಿನ ಹೆಸರಿನಲ್ಲಿ ಯಾವುದೇ ವಿದ್ಯಾರ್ಥಿ ಎಂದಿಗೂ ತಾರತಮ್ಯ ಅಥವಾ ಬಹಿಷ್ಕಾರವನ್ನು ಎದುರಿಸದಂತೆ ನೋಡಿಕೊಳ್ಳಲು ನಮ್ಮ ಸರಕಾರ ಬದ್ಧ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ರೋಹಿತ್ ವೇಮುಲಾ ಕಾಯ್ದೆಯ ಕರಡು ರಚನೆಯನ್ನು ಪ್ರಾರಂಭಿಸಲು ನಾನು ನನ್ನ ಕಾನೂನು ತಂಡಕ್ಕೆ ನಿರ್ದೇಶನ ನೀಡಿದ್ದೇನೆ ಎಂದು ರಾಹುಲ್ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಸಿಎಂ ಉಲ್ಲೇಖಿಸಿದ್ದಾರೆ.







