ಕೋ-ಆಪರೇಟಿವ್ ಸೊಸೈಟಿ ಹಣ ದುರುಪಯೋಗ ಆರೋಪ : ಮಾಜಿ ಸಿಇಒ ಸೇರಿ ಹಲವರ ವಿರುದ್ಧ ಎಫ್ಐಆರ್

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ಕೋ-ಆಪರೇಟಿವ್ ಸೊಸೈಟಿ ಮಹಾಮಂಡಲ ನಿಯಮಿತದ 19.34 ಕೋಟಿ ರೂ. ದುರುಪಯೋಗಪಡಿಸಿಕೊಂಡ ಆರೋಪದಡಿ ಸೊಸೈಟಿಯ ಹಿಂದಿನ ಉಸ್ತುವಾರಿ ಸಿಇಒ ಸೇರಿ ಹಲವರ ವಿರುದ್ಧ ಇಲ್ಲಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ನಂದಿನಿ ಲೇಔಟ್ನಲ್ಲಿರುವ ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಸೊಸೈಟಿ ಮಹಾಮಂಡಲ ನಿಗಮದ ಅಧ್ಯಕ್ಷ ರಾಜು ವಿ. ಎಂಬಾತ ನೀಡಿದ ದೂರಿನನ್ವಯ ಸೊಸೈಟಿಯ ಹಿಂದಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ) ಪಿ.ಆಶಾಲತಾ, ಅವರ ಪತಿ ಸೋಮಶೇಖರ್, ವಿಜಯ್ ಕಿರಣ್, ಮಂಜುನಾಥ್ ಜೆ., ಸುಜಯ್, ಬಿಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು, ಕೆಎಸ್ಸಿಸಿಎಸ್ಎಫ್ ಆಡಿಟರ್ ಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ವಿವರ: ‘ಪ್ರಥಮ ದರ್ಜೆ ಸಹಾಯಕಿ ಹಾಗೂ ಅಕೌಂಟೆಂಟ್ ಹುದ್ದೆಗೆ ನೇಮಕಗೊಂಡಿದ್ದ ಪಿ.ಆಶಾಲತಾ ಅವರು 2017ರಿಂದ 2023ರವರೆಗೂ ಮಹಾಮಂಡಳದ ಪ್ರಭಾರ ಸಿಇಒ ಆಗಿದ್ದರು. ಈ ಅವಧಿಯಲ್ಲಿ ಸೊಸೈಟಿಯು, ಬೆಂಗಳೂರು ನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಬಿಡಿಸಿಸಿ) ಮತ್ತು ರಾಜ್ಯ ಅಪೆಕ್ಸ್ ಸಹಕಾರಿ ಬ್ಯಾಂಕ್ ಶಾಖೆಗಳಲ್ಲಿ ನಿಗದಿತ ಠೇವಣಿಯಲ್ಲಿ ಇರಿಸಿದ್ದ 19.34 ಕೋಟಿ ರೂ. ಮೊತ್ತವನ್ನು ತನ್ನ ಗಂಡ ಮತ್ತು ಇತರರ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಿದ್ದಾರೆ’ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
‘ಸಹಕಾರ ಸಚಿವರು 2024ರ ಅ.9ರಂದು ರಾಜ್ಯದ ಪ್ರಮುಖ ಸಹಕಾರ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆ ನಡೆಸಿದ್ದರು. ಆಗ, ಪತ್ತಿನ ಸಹಕಾರ ಮಹಾಮಂಡಳದ ಠೇವಣಿಗಳ ಬಗ್ಗೆ ಪ್ರಶ್ನಿಸಿದ್ದರು. ಬಿಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ನಲ್ಲಿ ಠೇವಣಿಗಳನ್ನು ಇರಿಸಿರುವುದಾಗಿ ಆಶಾಲತಾ ತಿಳಿಸಿದ್ದರು. ಅದೇ ಸಭೆಯಲ್ಲಿದ್ದ ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು, ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಯಾವುದೇ ಠೇವಣಿ ತಮ್ಮ ಬ್ಯಾಂಕ್ನಲ್ಲಿಲ್ಲ ಎಂದು ಹೇಳಿದ್ದರು. 111 ಎಫ್.ಡಿ. ಖಾತೆಗಳಿದ್ದು, ಮನೆಯಲ್ಲಿ ದಾಖಲೆಗಳಿವೆ. ಗಂಡ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೊರಹೋಗಿದ್ದಾರೆ. ಸೋಮವಾರ ಎಲ್ಲ ದಾಖಲೆಗಳನ್ನೂ ಕಚೇರಿಗೆ ತಲುಪಿಸಲಾಗುವುದು ಎಂಬುದಾಗಿ ಆಶಾಲತಾ ತಿಳಿಸಿದ್ದರು' ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.
ಬಳಿಕ ಸೊಸೈಟಿಯ ಹಣಕಾಸು ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಜಂಟಿ ಖಾತೆಯಾಗಿದ್ದರೂ, ಅಧ್ಯಕ್ಷರ ಸಹಿ ಇಲ್ಲದೆ ಸಿಇಒ ಒಬ್ಬರೇ ಸಹಿ ಮಾಡಿ ಹಣವನ್ನು ಪತಿ ಸೇರಿದಂತೆ ಕೆಲವು ವ್ಯಕ್ತಿಗಳ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಠೇವಣಿ ಮಾಡಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಲೆಕ್ಕಪರಿಶೋಧಕರಿಗೂ ಸಲ್ಲಿಸಿರುವುದು ಕಂಡುಬಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.







