ಬಾಬಾ ಬುಡಾನ್ ಸಾಬ್ ಪ್ರಯತ್ನದಿಂದ ಕರ್ನಾಟಕದಲ್ಲಿ ಕಾಫಿ ಕ್ರಾಂತಿ: ಕೇಂದ್ರ ಸಚಿವ ಪಿಯೂಶ್ ಗೋಯಲ್
ಬೆಂಗಳೂರಿನಲ್ಲಿ 5ನೇ ವಿಶ್ವ ಕಾಫಿ ಸಮ್ಮೇಳನ ಮತ್ತು ವಸ್ತು ಪ್ರದರ್ಶನಕ್ಕೆ ಚಾಲನೆ
![ಬಾಬಾ ಬುಡಾನ್ ಸಾಬ್ ಪ್ರಯತ್ನದಿಂದ ಕರ್ನಾಟಕದಲ್ಲಿ ಕಾಫಿ ಕ್ರಾಂತಿ: ಕೇಂದ್ರ ಸಚಿವ ಪಿಯೂಶ್ ಗೋಯಲ್ ಬಾಬಾ ಬುಡಾನ್ ಸಾಬ್ ಪ್ರಯತ್ನದಿಂದ ಕರ್ನಾಟಕದಲ್ಲಿ ಕಾಫಿ ಕ್ರಾಂತಿ: ಕೇಂದ್ರ ಸಚಿವ ಪಿಯೂಶ್ ಗೋಯಲ್](https://www.varthabharati.in/h-upload/2023/09/25/1195147-5th-world-coffee-conference-2023-at-palace-grounds-bnp-6.webp)
ಬೆಂಗಳೂರು, ಸೆ.25: ಭಾರತವು ಇಡೀ ವಿಶ್ವದ ಅತಿದೊಡ್ಡ ಕಾಫಿ ಉತ್ಪಾದಕ, ರಫ್ತು ಮಾಡುವ ದೇಶವಾಗಿದೆ. ಅದಾಗ್ಯೂ, ಕಾಫಿ ಪ್ಲಾಂಟೇಷನ್ಗಳನ್ನು ಮತ್ತಷ್ಟು ವಿಸ್ತರಣೆ ಮಾಡುವುದು ಸೇರಿದಂತೆ ಹಲವು ಅವಕಾಶಗಳಿವೆ. ಅಂತರ್ರಾಷ್ಟ್ರೀಯ ಸಹಭಾಗಿತ್ವದೊಂದಿಗೆ ಕಾಫಿ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಶ್ ಗೋಯಲ್ ಹೇಳಿದರು.
ಸೋಮವಾರ ಬೆಂಗಳೂರು ಅರಮನೆ ಆವರಣದಲ್ಲಿ ಇಂಟರ್ ನ್ಯಾಷನಲ್ ಕಾಫಿ ಆರ್ಗನೈಸೇಶನ್ ವತಿಯಿಂದ ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾಫಿ ಬೋರ್ಡ್ ಆಫ್ ಇಂಡಿಯಾ, ರಾಜ್ಯ ಸರಕಾರ ಮತ್ತು ಕಾಫಿ ಉದ್ಯಮದ ಸಹಯೋಗದಲ್ಲಿ ಆಯೋಜಿಸಿದ್ದ 5ನೆ ವಿಶ್ವ ಕಾಫಿ ಸಮ್ಮೇಳನ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ʼʼಹದಿನೇಳನೆ ಶತಮಾನದಲ್ಲಿ ಬಾಬಾಬುಡಾನ್ ಸಾಬ್ ಯಮನ್ ದೇಶದಿಂದ ಕಾಫಿ ಬೀಜವನ್ನು ತಂದು ಚಿಕ್ಕಮಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಕಾಫಿ ಬೆಳೆಸಿದರು. ಇವತ್ತು ಇಡೀ ದೇಶದಲ್ಲಿನ ಶೇ.70ರಷ್ಟು ಕಾಫಿ ಬೆಳೆ ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಬಾಬಾ ಬುಡಾನ್ ಸಾಬ್ ಪ್ರಯತ್ನದಿಂದ ಕರ್ನಾಟಕದಲ್ಲಿ ಕಾಫಿ ಕ್ರಾಂತಿಯಾಗಿದೆ. ಕಾಫಿ ನಮ್ಮ ಪಾಲಿಗೆ ಕೇವಲ ಪಾನಿಯ ಅಷ್ಟೇ ಅಲ್ಲ, ಭಾವನಾತ್ಮಕ ನಂಟಾಗಿದೆʼʼ ಎಂದು ಸ್ಮರಿಸಿದರು.
ʼʼ10 ಸಾವಿರಕ್ಕೂ ಅಧಿಕ ವೀಕ್ಷಕರುʼʼ
ಏಷ್ಯಾದಲ್ಲಿ ಅದೂ ಭಾರತದ ನವೋದ್ಯಮಗಳ, ಆವಿಷ್ಕಾರಗಳ ನಾಡು ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ದಿನಗಳ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸುಮಾರು 80 ದೇಶಗಳು, 2400 ಪ್ರತಿನಿಧಿಗಳು, 128 ಉಪನ್ಯಾಸಕರು, 208 ಪ್ರದರ್ಶಕರು ಹಾಗೂ 10 ಸಾವಿರಕ್ಕೂ ಅಧಿಕ ವೀಕ್ಷಕರು ಭಾಗವಹಿಸಿದ್ದಾರೆ ಎಂದು ಅವರು ಹೇಳಿದರು.
‘ವ್ಯೂಹಾತ್ಮಕ ಆರ್ಥಿಕತೆ ಮತ್ತು ಪುನರುತ್ಪಾದಕ ಕೃಷಿಯ ಮೂಲಕ ಸುಸ್ಥಿರತೆ’ ಈ ಸಮ್ಮೇಳನದ ವಿಷಯವಾಗಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಪ್ರದರ್ಶನ, ಕೌಶಲ್ಯ ನಿರ್ಮಾಣ ಕಾರ್ಯಾಗಾರಗಳು, ಸಿಇಒಗಳು ಮತ್ತು ಜಾಗತಿಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಬೆಳೆಗಾರರ ಸಮಾವೇಶ ಮತ್ತು ಅಸಂಖ್ಯಾತ ನೆಟ್ವರ್ಕಿಂಗ್ ಕಾರ್ಯಕ್ರಮಗಳ ಆಯೋಜನೆಯೂ ಆಗಲಿದೆ. ಕಾಫಿ ಉದ್ಯಮದಲ್ಲಿ ಸುಸ್ಥಿರತೆಯನ್ನು ಕಾಯ್ದುಕೊಳ್ಳುವತ್ತ ಗಮನಹರಿಸಲು ಈ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಕಾಫಿ ಉದ್ಯಮವನ್ನು ಬೆಳೆಸುವುದನ್ನು ಒಂದು ಅಭಿಯಾನದ ರೂಪದಲ್ಲಿ ಕೈಗೊಳ್ಳಲಾಗುವುದು. ಕಾಫಿ ಬೆಳೆಗಾರರು, ಉದ್ದಿಮೆಗಳು, ನವೋದ್ಯಮಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಕಾಫಿ ಕೃಷಿ, ಸಂಸ್ಕರಣೆ, ಮಾರುಕಟ್ಟೆ ವಿಸ್ತರಣೆ, ಪರಿಸರ ಸಂರಕ್ಷಣೆಗೆ ಒಂದಕ್ಕೊಂದು ಪೂರಕವಾಗಿರಬೇಕು ಎಂದು ಪಿಯೂಶ್ ಗೋಯಲ್ ಪ್ರತಿಪಾದಿಸಿದರು.
ಈ ಸಮ್ಮೇಳನದಲ್ಲಿ ಜ್ಞಾನ ಹಂಚಿಕೆ, ಜಾಲದ ಬಗ್ಗೆ ಮಾಹಿತಿ ಮತ್ತು ಕಾಫಿ ವ್ಯವಸಾಯ ಮತ್ತು ಉತ್ಪಾದನೆ ಸಂಸ್ಕರಣೆಯಲ್ಲಿ ತೊಡಗಿರುವವರಿಗೆ ಪರಸ್ಪರ ಸಹಭಾಗಿತ್ವ ಸಾಧಿಸಲು ಒಂದು ವೇದಿಕೆಯನ್ನು ಕಲ್ಪಿಸಲಾಗುತ್ತದೆ. ಬ್ರೆಝಿಲ್, ಮೆಕ್ಸಿಕೊ, ವಿಯೆಟ್ನಾಂ, ಕೊಲಂಬಿಯಾ, ಯುರೋಪ್ ಇತ್ಯಾದಿ ದೇಶಗಳು ಸೇರಿದಂತೆ ವಿಶ್ವದಾದ್ಯಂತ ಆಗಮಿಸಿರುವ ಉಪನ್ಯಾಸಕರಿಂದ ಜಾಗತಿಕ ದೃಷ್ಟಿಕೋನದ ಮಾಹಿತಿಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಟರ್ ನ್ಯಾ ಷನಲ್ ಕಾಫಿ ಕೌನ್ಸಿಲ್ ಅಧ್ಯಕ್ಷ ಮಸ್ಸಿಮಿಲಿಯಾನೊ ಫ್ಯಾಬಿಯನ್, ನೆಸ್ಲೆ ಇಂಡಿಯಾದ ಅಧ್ಯಕ್ಷ ಸುರೇಶ್ ನಾರಾಯಣನ್, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ನ ಸಿಇಒ ಸುನೀಲ್ ಡಿ’ಸೋಜಾ, ಸಿಸಿಎಲ್ ಪ್ರಾಡಕ್ಟ್ಸ್ ಲಿಮಿಟೆಡ್ ಅಧ್ಯಕ್ಷ ಚಲ್ಲಾ ಶ್ರೀಕಾಂತ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಉಪಾಧ್ಯಕ್ಷ ಶಿವಕೃಷ್ಣಮೂರ್ತಿ, ಎಸ್ಎಲ್ಎನ್ ಕಾಫಿ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಎನ್.ಸತ್ತಪ್ಪನ್, ಕಾಫಿ ಬೋರ್ಡ್ ಆಫ್ ಇಂಡಿಯಾದ ಸಿಇಒ ಡಾ.ಕೆ.ಜಿ.ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.