ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ರಾಜ್ಯದ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾಗೆ 15 ಲಕ್ಷ ರೂ.ನಗದು ಬಹುಮಾನ, ಗ್ರೂಪ್ ‘ಬಿ’ ಹುದ್ದೆ

ಬೆಂಗಳೂರು: ಗ್ಲಾಸ್ಗೋನಲ್ಲಿ ನಡೆದ 2026ರ ಪ್ಯಾರಾ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಶಾರ್ಟ್ಪುಟ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕೆ.ಎಸ್. ಶಿಲ್ಪಾ ಅವರು ಈ ನಾಡಿನ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಪರಿಷತ್ ಸದಸ್ಯ ಹಾಗೂ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ. ಗೋವಿಂದರಾಜು ಹರ್ಷ ವ್ಯಕ್ತಪಡಿಸಿದರು.
ಗುರುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಎಸ್.ಶಿಲ್ಪಾ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಜೇತರು ತಾಯಿ ನಾಡಿಗೆ ಆಗಮಿಸಿದಾಗ ಈ ರೀತಿಯ ಗೌರವ ಸಲ್ಲಿಸುವ ಮೂಲಕ ಕ್ರೀಡಾ ಇಲಾಖೆ ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬಿದೆ ಎಂದರು.
ಈಗಾಗಲೇ ಕ್ರೀಡಾ ಇಲಾಖೆ ಒಲಂಪಿಕ್ಸ್ ಪದಕ ಗೆದ್ದವರಿಗೆ ಮೊದಲ ಬಹುಮಾನ 6 ಕೋಟಿ ರೂ., ಎರಡನೆ ಸ್ಥಾನ ಪಡೆದವರಿಗೆ 5ಕೋಟಿ ರೂ.ಹಾಗೂ ತೃತೀಯ ಸ್ಥಾನಕ್ಕೆ 3 ಕೋಟಿ ರೂ.ಬಹುಮಾನ ಘೋಷಿಸಿದೆ. ಜೊತೆಗೆ ಸರಕಾರಿ ಉದ್ಯೋಗವನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರೆ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ವಿಜೇತರಿಗೆ ಅನೇಕ ಆಕರ್ಷಕ ಕೊಡುಗೆಗಳನ್ನು ಕರ್ನಾಟಕ ರಾಜ್ಯ ಘೋಷಿಸಿದೆ ಎಂದರು.
ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾಪಟುಗಳಿಗೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಹೆಚ್ಚಿನ ಯುವಕ ಯುವತಿಯರು ಕ್ರೀಡೆಯಲ್ಲಿ ಹೆಚ್ಚಿನ ಶ್ರಮ ಪಟ್ಟು ಗೆಲ್ಲುವ ಮೂಲಕ ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಕೆ.ಗೋವಿಂದರಾಜು ಕರೆ ನೀಡಿದರು.
ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್.ಅನುಚೇತ್ ಮಾತನಾಡಿ, ಈ ಚಿಕ್ಕ ಕಾರ್ಯಕ್ರಮ ಕ್ರೀಡಾಪಟುಗಳಿಗೆ ನವ ಚೈತನ್ಯ ತುಂಬಲಿದೆ. ಶಿಲ್ಪ ಕೆ.ಎಸ್. ಅವರ ಈ ಸಾಧನೆ ಎಲ್ಲರಿಗೂ ಮಾದರಿ. ಈಗಾಗಲೇ ಗ್ಲಾಸ್ಗೋನಲ್ಲಿ ನಡೆದ 2026ರ ಪ್ಯಾರಾ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ 8 ಜನರಿಗೆ ಸರಕಾರದ ವತಿಯಿಂದ ತಲಾ 5ಲಕ್ಷ ರೂ.ನೀಡಲಾಗಿದೆ ಎಂದರು.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ಶಿಲ್ಪ್ಪಾ ಕೆ.ಎಸ್. ಅವರಿಗೆ 15ಲಕ್ಷ ರೂ. ನಗದು ಬಹುಮಾನ ಹಾಗೂ ಸರಕಾರದ ಗ್ರೂಪ್ ‘ಬಿ’ ಹುದ್ದೆ ನೀಡಿ ಗೌರವಿಸಲಾಗುವುದು. ಉಳಿದಂತೆ ಸರಕಾರದ ಎಲ್ಲ ಸವಲತ್ತುಗಳನ್ನು ಒದಗಿಸಲಾಗುವುದು. ಶೀಘ್ರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಂದ ಶಿಲ್ಪ್ಪಾಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಕ್ರೀಡಾಪಟು ಶಿಲ್ಪಾ ಕೆ.ಎಸ್. ಅವರು ಮಾತನಾಡಿ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಬಂದಿರುವುದು ತುಂಬಾ ಖುಷಿಯಾಗಿದೆ ಈ ರೀತಿಯ ಸ್ವಾಗತ ನೀಡಿ ಸನ್ಮಾನಿಸಿದ್ದಕ್ಕೆ ಸರಕಾರಕ್ಕೆ ಧನ್ಯವಾದಗಳು. ಈ ನನ್ನ ಸಾಧನೆಗೆ ನನ್ನ ಕೋಚ್ಗಳು ಮುಖ್ಯ ಕಾರಣ. ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಕಷ್ಟ ಪಟ್ಟರೆ ಪ್ರತಿಫಲ ಗ್ಯಾರಂಟಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ರಾಜ್ ಸಿಂಗ್, ಅಂತರರಾಷ್ಟ್ರೀಯ ಕೋಚ್ ಎಸ್.ಡಿ. ಈಶನ್, ಕ್ರೀಡಾಪಟುಗಳಾದ ಎಮ್.ಮಹಾದೇವ್, ಅರ್ಜುನ್ ಹಾಲಪ್ಪ ಸೇರಿದಂತೆ ಅನೇಕ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.






