ಕಾಂಗ್ರೆಸ್ ನೇತೃತ್ವದಲ್ಲೇ ಡಿ.5ಕ್ಕೆ ಹಾಸನದಲ್ಲಿ ಸಮಾವೇಶ: ಡಿ.ಕೆ. ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲೇ ಹಾಸನದಲ್ಲಿ ಡಿ.5ರಂದು ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ನನ್ನ ನೇತೃತ್ವದಲ್ಲಿಯೇ ಜರುಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ರವಿವಾರ ಇಲ್ಲಿನ ಕ್ವೀನ್ಸ್ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಅನೇಕ ನಾಯಕರು ಹಾಸನದಲ್ಲಿ ಸಮಾವೇಶ ಮಾಡುವುದಾಗಿ ತಿಳಿಸಿದ್ದಾರೆ. ಪಕ್ಷದ ವತಿಯಿಂದ ಸಚಿವರುಗಳು, ಜಿಲ್ಲಾ ಮಂತ್ರಿಗಳು ಸಮಾವೇಶದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಸಮಾವೇಶಕ್ಕೆ ಅನೇಕ ಸಂಘಟನೆಗಳು ಸಮುದಾಯಗಳು ಬೆಂಬಲ ಸೂಚಿಸಿದ್ದು, ಆ ಬೆಂಬಲವನ್ನು ಸ್ವೀಕರಿಸುತ್ತೇವೆ ಎಂದರು.
ನಾನು ನಾಲ್ಕು ದಿನಗಳ ಕಾಲ ದಿಲ್ಲಿ ಪ್ರವಾಸದಲ್ಲಿದ್ದೆ. ಸಿಎಂ ಅವರೂ ದಿಲ್ಲಿ ಪ್ರವಾಸದಲ್ಲಿದ್ದರು. ದೇಶದಲ್ಲಾಗುತ್ತಿರುವ ವಿದ್ಯಮಾನ ಹಾಗೂ ಸಂವಿಧಾನ ರಕ್ಷಣೆಗೆ ಕಾರ್ಯಕ್ರಮ ರೂಪಿಸಲು ಎಐಸಿಸಿ ನಾಯಕರು ಮಾರ್ಗದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ನಾಲ್ಕು ಜಿಲ್ಲೆಗಳ ನಾಯಕರು ಹಾಗೂ ಪದಾಧಿಕಾರಿಗಳ ಜತೆ ಇದರ ಪೂರ್ವಭಾವಿ ಸಭೆಯನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾಗಿದೆ. ಸಮಾವೇಶಕ್ಕೆ ಪಕ್ಷದ ಎಲ್ಲ ನಾಯಕರಿಗೂ ಆಹ್ವಾನ ನೀಡಲಾಗುವುದು ಎಂದರು.
ಅರಿವು ಮೂಡಿಸಲು ಸಮಾವೇಶ: ಸಮಾನತೆ, ಸಂವಿಧಾನದ ಬಗ್ಗೆ ಗೌರವ ಹೊಂದಿರುವವರು, ಸ್ವಾಭಿಮಾನಿಗಳಿಗೆ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಸಧ್ಯದಲ್ಲೇ ನಾನು ಹಾಗೂ ಕೆಪಿಸಿಸಿ ತಂಡ ಸಮಾವೇಶ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ತಯಾರಿಯನ್ನು ಪರಿಶೀಲಿಸಿ, ಮಾರ್ಗದರ್ಶನ ನೀಡಲಾಗುವುದು. ಜನರ ಕಲ್ಯಾಣ, ಸಂವಿಧಾನ ರಕ್ಷಣೆ, ಸ್ವಾಭಿಮಾನ ರಕ್ಷಣೆ, ಸರಕಾರದ ವಿರುದ್ಧ ಮಾಡುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಮಾಡಲಾಗುತ್ತಿದೆ ಎಂದರು.
ಈಗಿನಿಂದಲೇ ಪಕ್ಷ ಸಂಘಟನೆ: ಎಐಸಿಸಿ ನಾಯಕರ ನಿರ್ದೇಶನದಂತೆ ಮುಂದಿನ ಎರಡು ತಿಂಗಳ ಕಾಲ ಒಂದಲ್ಲಾ ಒಂದು ರೀತಿ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉಪ ಚುನಾವಣೆಯಲ್ಲಿನ ಯಶಸ್ಸು ಮುಂದುವರೆಸಿಕೊಂಡು ಹೋಗಲು ಪಕ್ಷ ಸಂಘಟನೆ ಮಾಡಲಾಗುವುದು. ಚುನಾವಣೆ ಬಂದಾಗ ಸಿದ್ಧತೆ ಮಾಡಿಕೊಳ್ಳುವುದಲ್ಲ. ಚುನಾವಣೆ ಮುಗಿದ ಮರು ದಿನದಿಂದಲೇ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಸರಕಾರದ ಸಾಧನೆಗಳನ್ನು ಪ್ರತಿ ವಿಭಾಗವಾರು ತಲುಪಿಸಲು ತೀರ್ಮಾನ ಮಾಡಿದೆ ಎಂದರು.
ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೇ ಅದನ್ನು ಹುಡುಕಬೇಕು ಎನ್ನುವುದು ನಮ್ಮ ತತ್ವ. ಹಾಸನದಲ್ಲಿ ಒಂದು ಕ್ಷೇತ್ರವನ್ನು ಗೆದ್ದಿದ್ದೆವು. ಆದರೆ ಲೋಕಸಭೆಯಲ್ಲಿ ಜನ ಶಕ್ತಿ ತುಂಬಿದರು. ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಅತ್ಯಂತ ಹೆಚ್ಚು ಕ್ಷೇತ್ರಗಳನ್ನು ಗೆದ್ದಿದ್ದೇವೆ. ಒಂದಷ್ಟು ಕಡೆ ಲೋಕಸಭೆಯಲ್ಲಿ ಸೋತಿದ್ದೇವೆ. ಶೀಘ್ರದಲ್ಲಿಯೇ ಸಂಡೂರು, ಶಿಗ್ಗಾವಿಯಲ್ಲಿ ಮತದಾರರ ಕೃತಜ್ಞತಾ ಸಮಾವೇಶವನ್ನು ಆಯೋಜಿಸುವ ಕುರಿತು ಸಿಎಂ ಬಳಿ ಚರ್ಚೆ ಮಾಡಲಾಗಿದೆ. ಅಧಿವೇಶನ ನಡೆಯುವ ಮಧ್ಯಲ್ಲಿಯೇ ರವಿವಾರದಂದು ಚನ್ನಪಟ್ಟಣದಲ್ಲಿ ಅಭಿನಂದನಾ ಸಮಾವೇಶ ಆಯೋಜಿಸುವಂತೆ ಸುರೇಶ್ ಹಾಗೂ ಯೋಗೇಶ್ವರ್ ಗೆ ಸೂಚಿಸಿದ್ದೇವೆ ಎಂದರು.
ಹಾಸನ ಸಮಾವೇಶದ ಸ್ವರೂಪ ಎಲ್ಲಿ ನಿರ್ಧಾರವಾಗಿತ್ತು? ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳೇ ಹೊರತು ಮೈತ್ರಿ ಪಕ್ಷದ ಸಿಎಂ ಅಲ್ಲ. ಇಲ್ಲಿ ಒಂದೇ ಪಕ್ಷ, ಒಂದೇ ಚಿಹ್ನೆ ಇದೆ. ಕೆಲವರ ವೈಯಕ್ತಿಕ ಅಭಿಪ್ರಾಯವೇ ಬೇರೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷರು, ಸಿಎಂ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಚರ್ಚೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಮೈಸೂರು ಜಿಲ್ಲಾಧ್ಯಕ್ಷರ ಸಭೆ ಕೊನೆ ಘಳಿಗೆಯಲ್ಲಿ ತೀರ್ಮಾನ ಮಾಡಲಾಗಿದೆ. ನಿನ್ನೆ ದಿಲ್ಲಿಯಿಂದ ಆಗಮಿಸಿ ಗಾಂಧೀಜಿ ಕಾರ್ಯಕ್ರಮದ ಸಭೆ ಮಾಡಿದ್ದೇನೆ. ನಮ್ಮ ಬಳಿ ಅನುಮತಿ ಪಡೆದೆ ಆ ನಾಯಕರು ಮೈಸೂರಿನಲ್ಲಿ ಸಭೆ ಮಾಡುತ್ತಿದ್ದಾರೆ. ನಾವುಗಳು ಪಕ್ಷಕ್ಕಿಂತ ದೊಡ್ಡವರಲ್ಲ. ಎಲ್ಲರಿಗಿಂತ ಪಕ್ಷ ದೊಡ್ಡದು ಎಂದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು...
‘ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ವೇದಿಕೆ ಸಿದ್ಧ ಮಾಡಬೇಕಲ್ಲವೇ?. ಚುನಾವಣೆ ಸಧ್ಯದಲ್ಲೇ ನಡೆಯಲಿರುವುದಂತೂ ನಿಜ. ಅದನ್ನು ನಿಲ್ಲಿಸಲು ಆಗುವುದಿಲ್ಲ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಫೆಬ್ರವರಿ ವೇಳೆಗೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಯಾವುದೇ ಸ್ಥಾನ ಖಾಲಿ ಇಲ್ಲ: ನಾನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯೇ ಹೊರತು, ಮುಖ್ಯಮಂತ್ರಿಯಲ್ಲ. ಸಧ್ಯಕ್ಕೆ ಈ ಬಗ್ಗೆ ಚರ್ಚೆ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ಸಧ್ಯದಲ್ಲೇ ವಿಧಾನ ಮಂಡಲ ಅಧಿವೇಶನವಿದೆ. ಒಂದು ಸಚಿವ ಸ್ಥಾನ ಮಾತ್ರ ಬಾಕಿ ಇದೆ. ಈ ಬಗ್ಗೆ ಸಿಎಂ ಉತ್ತರ ನೀಡಿದ್ದಾರೆ. ಬೇರೆ ಯಾವುದೇ ಸ್ಥಾನ ಖಾಲಿ ಇಲ್ಲ’
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ







