ದೇಶದ ಆರ್ಥಿಕತೆಯ ಕ್ರಾಂತಿಗೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಂಗಳೂರು, ನ.2: ಸರಕಾರ ಕೈಗೊಂಡಿರುವ ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಉಪಕ್ರಮಗಳಿಂದ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಉತ್ತೇಜನ ದೊರೆತಿದ್ದು, ದೇಶದ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಗುರುವಾರ ಬೆಂಗಳೂರು ಅಂತರ್ ರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಲಘು ಉದ್ಯೋಗ ಭಾರತಿ, ಐಎಂಎಸ್ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ ಮತ್ತು ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯ ಸಹಕಾರದಿಂದ ಆಯೋಜಿಸಿರುವ ಮೂರು ದಿನಗಳ ಭಾರತ ಉತ್ಪಾದನಾ ಪ್ರದರ್ಶನ-2023 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕತೆಯಲ್ಲಿ ಕ್ರಾಂತಿಯಾಗುತ್ತಿದೆ ಅಂದರೆ ಅದು ಸಣ್ಣ ಕೈಗಾರಿಕೆಗಳ ಕೊಡುಗೆ. ರಕ್ಷಣಾ ವಲಯದ ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರಕಾರವು ಹಲವಾರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡ ಪರಿಣಾಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ರಕ್ಷಣಾ ವಲಯದ ಬೇಡಿಕೆ ಬಹುಪಾಲನ್ನು ದೇಶಿಯ ಕಂಪೆನಿಗಳಿಗೆ ಆದ್ಯತೆ ನೀಡಬೇಕು. ರಕ್ಷಣಾ ವಲಯದ ಅಗತ್ಯ 4666 ಉಪಕರಣ ಮತ್ತು ಸಲಕರಣೆಗಳನ್ನು ಆಮದು ಮಾಡಿಕೊಳ್ಳದೆ, ದೇಶದಲ್ಲೆ ಖರೀದಿಸಬೇಕು ಎಂಬ ನಿಭಂದನೆ ಹೇರಲಾಗಿದೆ. ದೇಶಿಯ ಕೈಗಾರಿಕೆಗಳು ಉಪಕರಣ ತಯಾರಿಸಲು ಆರ್ಥಿಕ ನೆರವು ನೀಡಲಾಗುತ್ತದೆ ಹಾಗೂ ಬಿಡಿ ಭಾಗಗಳು ಖರೀದಿಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಮೇಲೆ ಅವಲಂಭಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಸರಕಾರದ ನೀತಿ ನಿರೂಪಣೆ ಮತ್ತು ನಿಯಮಗಳ ಸಡಿಲಿಕೆಯಿಂದ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ದೊರೆತ್ತಿದ್ದು, ಇದರಿಂದ ದೇಶದಲ್ಲಿಂದು 1 ಲಕ್ಷಕ್ಕೂ ಹೆಚ್ಚು ನವೋದ್ಯಮ ಮತ್ತು 100ಕ್ಕೂ ಹೆಚ್ಚು ಯೂನಿಕಾರ್ನ್ಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಉದ್ಯಮಗಳು ಸಮಾಜದ ಏಳಿಗೆ, ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಅಲ್ಪ ಬೆಲೆಯ ಉತ್ಪನ್ನಗಳನ್ನು ಪೂರೈಸುವತ್ತಾ ಗಮನ ಹರಿಸಬೇಕು. ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸಿ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಅಭಿವೃದ್ಧಿಗೆ ಸರಕಾರದೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.







