‘ಸಮೀಕ್ಷೆ’ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲು ಸಿಎಂಗೆ ಸಿ.ಟಿ.ರವಿ ಮನವಿ

ಸಿ.ಟಿ.ರವಿ
ಬೆಂಗಳೂರು, ಸೆ. 27: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ’ ಸಂದರ್ಭದಲ್ಲಿ ಗಣತಿದಾರರಿಗೆ ಆಗುತ್ತಿರುವ ಸಮಸ್ಯೆಗಳು ಹಾಗೂ ಆಪ್, ನೆಟ್ವರ್ಕ್ ಸೇರಿದಂತೆ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು ಎಂದು ಕೋರಿ ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಷತ್ ಸದಸ್ಯ ಸಿ.ಟಿ.ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಗಣತಿದಾರ ಶಿಕ್ಷಕರಾದ ಎಲ್ಲರಿಗೂ ತಾಂತ್ರಿಕ ಜ್ಞಾನ ಇರುವುದು, ಮೊಬೈಲ್ಫೋನ್ ಬಳಕೆಯಲ್ಲಿ ತಾಂತ್ರಿಕ ಜ್ಞಾನದ ಸಮಸ್ಯೆಯೂ ಕೆಲವೆಡೆ ಕಂಡುಬಂದಿದೆ. ಒಂದು ಮನೆಯಲ್ಲಿ ನಾಲ್ಕೈದು ಜನರಿದ್ದರೆ, ಎರಡರಿಂದ ಎರಡೂವರೆ ಗಂಟೆ ಬೇಕಾಗುತ್ತದೆ. ದಿನಕ್ಕೆ ಆರರಿಂದ 8ಮನೆ ಸಮೀಕ್ಷೆ ಮಾಡಲಷ್ಟೇ ಸಾಧ್ಯವಿದೆ. ಹೆಚ್ಚುವರಿ ಮನೆ ನೀಡಿದ್ದರ ಬಗ್ಗೆ ಪರಿಶೀಲಿಸಬೇಕಿದೆ. ಅಲ್ಲದೆ, ಒಟಿಪಿಯೂ ಬರುತ್ತಿಲ್ಲ ಎಂಬ ದೂರುಗಳಿದ್ದು ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಕೋರಿದ್ದಾರೆ.
ಸಮೀಕ್ಷೆಯನ್ನು ಮಾಡದೇ ಇದ್ದರೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಣತಿಗಾರರಿಗೆ ಧಮ್ಕಿ ಹಾಕಿದ್ದಾರೆ. ಆದರೆ, ಗಣತಿದಾರರ ಸಮಸ್ಯೆ ಬಗೆಹರಿಸುವ ಪ್ರಯತ್ನವಾದರೂ ಏನು ಮಾಡಿದ್ದೀರಿ?. ನೆಟ್ವರ್ಕ್ ಸಮಸ್ಯೆ ವ್ಯಾಪಕವಾಗಿದೆ. ಇವರು ಕೊಟ್ಟ ಆಪ್ ಸಮಸ್ಯಾತ್ಮಕವಾಗಿದೆ. ಮಾಹಿತಿ ಅಪ್ಲೋಡ್ ಮಾಡಲಾಗುತ್ತಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಮನೆಗಳ ಸಂಖ್ಯೆಯನ್ನು ಸರಿಯಾಗಿ ಕೊಟ್ಟಿಲ್ಲ. ಒಂದು ಮನೆ ಒಂದೆಡೆ, ನಂತರದ ಮನೆ ಇನ್ನೆಲ್ಲೋ ಎಂಬಂತೆ ಸಂಖ್ಯೆ ಕೊಟ್ಟಿದ್ದಾರೆ. ಒಂದು ಶಾಲೆ ಶಿಕ್ಷಕರನ್ನು ಇನ್ನೊಂದು ಪ್ರದೇಶಕ್ಕೆ ಹಾಕಿದ್ದಾರೆ. ಇದರಿಂದಲೂ ಸಮಸ್ಯೆ ಆಗುತ್ತಿದೆ. ಶಿಕ್ಷಕರ ಜೊತೆ ನೀವು ಮಾತನಾಡಿದರೆ ಸಮಸ್ಯೆ ಏನೆಂದು ಅರ್ಥವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರಾಯೋಗಿಕ ಸಮೀಕ್ಷೆ ಮಾಡಿಲ್ಲ: ಸಮೀಕ್ಷೆಗೆ ಮೊದಲು ಪೂರ್ವತಯಾರಿ ಮಾಡಬೇಕು. ಅಗತ್ಯ ತರಬೇತಿ ನೀಡಬೇಕು. ಕೆಲವು ಪ್ರದೇಶಗಳಲ್ಲಿ ಮೊದಲೇ ಪ್ರಾಯೋಗಿಕ ಸಮೀಕ್ಷೆ ಮಾಡಬೇಕಿತ್ತು. ಅಲ್ಲಿ ಬರುವ ಸಮಸ್ಯೆಗಳನ್ನು ಗಮನಿಸಿ ಪರಿಹರಿಸಬೇಕಿತ್ತು. ಆಮೇಲೆ ಸಮೀಕ್ಷಾ ಮಾದರಿ ಮಾಡಿ ಅದನ್ನು ವಿಸ್ತರಿಸಬೇಕು. ಇಲ್ಲಿ ಪ್ರಾಯೋಗಿಕ ಸಮೀಕ್ಷೆ ಮಾಡಿಲ್ಲ. ಸೂಕ್ತ ತರಬೇತಿ ನೀಡಿಲ್ಲ ಎಂದು ಅವರು ದೂರಿದ್ದಾರೆ.
ಗುಡ್ಡಗಾಡು-ಮಲೆನಾಡು ಪ್ರದೇಶಗಳಲ್ಲಿ ನೆಟ್ವರ್ಕ್ ದೊಡ್ಡ ಸಮಸ್ಯೆಯಾಗಿದೆ. 60 ಪ್ರಶ್ನೆಗಳನ್ನೂ ದಾಖಲಿಸಬೇಕಿದೆ. ಬಹಳಷ್ಟು ಮನೆಗಳಲ್ಲಿ 60 ಪ್ರಶ್ನೆಗಳಿಗೆ ಉತ್ತರಿಸಲು ತಾಳ್ಮೆ ಇರುವುದಿಲ್ಲ. ಅಲ್ಲೂ ಸಮಸ್ಯೆ ಆಗುತ್ತಿದೆ. ಅರ್ಜಿ ಅಪ್ಲೋಡ್ ಯಶಸ್ವಿಯಾಗಿಲ್ಲ ಎಂದು ತೋರಿಸುತ್ತದೆ. ಮಹಿಳಾ ಶಿಕ್ಷಕರು ಒಬ್ಬರೇ ಮನೆಗೆ ಹೋಗುವುದೂ ಕೆಲವೆಡೆ ಸಮಸ್ಯೆಗಳನ್ನು ನಿರ್ಮಾಣ ಮಾಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಒತ್ತಡ: ಒಂದೊಂದು ಅರ್ಜಿ ತುಂಬಿಸಲು ಎರಡೆರಡು ಗಂಟೆ ಬೇಕಾಗುತ್ತಿದೆ. ಇದರಿಂದ ಮಾನಸಿಕ ಒತ್ತಡ, ಕಣ್ಣಿನ ತೊಂದರೆಗೆ ಒಳಗಾಗಿದ್ದಾರೆ. ತುಂಬ ಜನರು ಸಮೀಕ್ಷೆಗೆ ಹೋದಲ್ಲೇ ಅನಾರೋಗ್ಯಕ್ಕೆ ಸಿಲುಕಿದ ದೂರುಗಳೂ ಬಂದಿವೆ. ಆದುದರಿಂದ ಈ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಅವುಗಳ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.







