ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆರವು: ಸಿ.ಟಿ. ರವಿ ಹೇಳಿದ್ದೇನು?
![ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆರವು: ಸಿ.ಟಿ. ರವಿ ಹೇಳಿದ್ದೇನು? ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆರವು: ಸಿ.ಟಿ. ರವಿ ಹೇಳಿದ್ದೇನು?](https://www.varthabharati.in/h-upload/2023/07/29/1174619-untitled-20.webp)
ಸಿ.ಟಿ. ರವಿ (Photo: twitter@CTRavi_BJP)
ಚಿಕ್ಕಮಗಳೂರು: ಬಿಜೆಪಿ ತನ್ನ ರಾಷ್ಟ್ರೀಯ ಮಂಡಳಿಯನ್ನು ಪುನರ್ ರಚಿಸಿ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಮಾಜಿ ಶಾಸಕ ಸಿಟಿ ರವಿ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆರವುಗೊಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಟಿ ರವಿ ಅವರು, “ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಜವಾಬ್ದಾರಿ ನೀಡಿ ಅವಕಾಶ ಮಾಡಿಕೊಟ್ಟ ಸನ್ಮಾನ್ಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆಪಿ ನಡ್ಡಾ ಜಿ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಈ ಜವಾಬ್ದಾರಿ ನನಗೆ ಬಹಳಷ್ಟು ಅನುಭವ ಮತ್ತು ಬದುಕಿಗೆ ಹೊಸ ಆಯಾಮಗಳನ್ನು ನೀಡಿದೆ. ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದವರೆಗಿನ ನನ್ನ ಪಯಣದಲ್ಲಿ ನಿರಂತರವಾಗಿ ಕಾರ್ಯಕರ್ತನ ಭಾವದಲ್ಲಿ ಕೆಲಸ ಮಾಡಿದ್ದೇನೆ, ಇನ್ನು ಮುಂದೆಯೂ ಅದೇ ಭಾವದಿಂದ ಕೆಲಸ, ಪಕ್ಷ ನೀಡಿದ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾ ನಡೆಸುತ್ತೇನೆ. ಭಾರತ್ ಮಾತಾ ಕಿ ಜೈ” ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಮಟ್ಟದ ಪ್ರಮುಖ ಹುದ್ದೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿರುವ ಬಿಜೆಪಿಯು ಸಿಟಿ ರವಿ, ದಿಲೀಪ್ ಘೋಷ್, ದಿಲೀಪ್ ಸೈಕಿಯಾ ಮತ್ತು ಸುನೀಲ್ ದಿಯೋಧರ್ ಅವರನ್ನು ಪ್ರಮುಖ ಹುದ್ದೆಗಳಿಂದ ಕೈಬಿಟ್ಟಿದೆ.