ಕೆಪಿಸಿಸಿ ಅಧ್ಯಕ್ಷನಾಗಿ ಆತ್ಮತೃಪ್ತಿ ಇದೆ, ನನ್ನ ಅವಧಿಯಲ್ಲಿ ಸಾಕ್ಷಿಗುಡ್ಡೆ ಬಿಟ್ಟಿದ್ದೇನೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಆರು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಆತ್ಮತೃಪ್ತಿಯಿದೆ. ಸಿದ್ದರಾಮಯ್ಯ ಅವರೊಂದಿಗೆ ಕೈಜೋಡಿಸಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು 2023ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದೆವು. ನನ್ನ ಅಧಿಕಾರಾವಧಿಯಲ್ಲಿ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹಾಗೂ ನಿಕಟಪೂರ್ವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಪದಗ್ರಹಣ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮ ಮಾಡುವುದಕ್ಕೆ ಆಗಲಿಲ್ಲ. ಕಾರಣ ಅಂದು ಬಿಜೆಪಿ ಸರಕಾರ ಅವಕಾಶ ಕೊಡಲಿಲ್ಲ. ದಿನೇಶ್ ಗುಂಡೂರಾವ್ ಅವರಿಂದ ನಾನು ಅಧಿಕಾರ ಸ್ವೀಕಾರ ಮಾಡಿದ್ದೆ. ಕೆಲವೊಂದು ತಪ್ಪು ಆಗಿರಬಹುದು. ಆದರೆ, ನನ್ನ ಕೆಲಸ ಆತ್ಮ ತೃಪ್ತಿ ತಂದಿದೆ ಎಂದರು.
ಇಂದು ಬಿ.ಕೆ.ಹರಿಪ್ರಸಾದ್ ಅವರಿಗೆ ಅಧಿಕಾರ ಕೊಟ್ಟಿದ್ದೇನೆ. ನಾನು ಸಿದ್ದರಾಮಯ್ಯ ಜೊತೆ ಸೇರಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದೆವು. ಸೋನಿಯಾ ಗಾಂಧಿಯವರ ಆಶೀರ್ವಾದದಿಂದ ಅಧಿಕಾರ ಪಡೆದೆ. 75 ಲಕ್ಷ ಸದಸ್ಯತ್ವ ನೋಂದಣಿ ಮಾಡಿ ದೇಶಕ್ಕೆ ಸಂದೇಶ ಕಳಿಸಿದ್ದೆವು. ಕೋವಿಡ್ನಲ್ಲೇ ಮೇಕೆದಾಟು ಪಾದಯಾತ್ರೆ ಮಾಡಿದ್ದೆವು. ಪ್ರಜಾಧ್ವನಿ ಬಸ್ ಯಾತ್ರೆ, ಉದ್ಯೋಗಕ್ಕೆ ಹೋರಾಟ ಮಾಡಿದ್ದೇವೆ. ನಾನು ಸಿದ್ದರಾಮಯ್ಯ ಅವರು ಮಾತ್ರ ಹೋರಾಟ ಮಾಡಿಲ್ಲ. ಕಾರ್ಯಕರ್ತರೆಲ್ಲರೂ ಹೋರಾಟ ಮಾಡಿದ್ದಕ್ಕೆ 2023ರಲ್ಲಿ ನಮಗೆ 138 ಸ್ಥಾನಗಳು ಬಂದಿವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಪಕ್ಷ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಕೊಟ್ಟಿದೆ. ಖಾತೆಗಳನ್ನು ಮಾಡಿ ಆಸ್ತಿಯನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಸಂವಿಧಾನದ ರೀತಿಯಲ್ಲೇ ಕೆಲಸ ಮಾಡುತ್ತಿದ್ದೇವೆ. ಎಲ್ಲ ಜಿಲ್ಲಾ ಮಂತ್ರಿಗಳು, ಪ್ರತಿ ತಾಲೂಕಿಗೆ ಭೇಟಿ ಕೊಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಾಂಗ್ರೆಸ್ ಕಚೇರಿ ಅಂದರೆ ದೇವಸ್ಥಾನ ನಮಗೆ. 100 ಕಡೆ ಗಾಂಧೀ ಭಾರತ್ ಹೆಸರಿನಲ್ಲಿ ಹೊಸ ಕಚೇರಿ ಮಾಡಲು ಜಾಗ ಮಂಜೂರು ಮಾಡಿಸಿದ್ದೇವೆ. ಇದಕ್ಕೆ ಸಹಕಾರ ಕೊಟ್ಟ ಸಿದ್ದರಾಮಯ್ಯ, ಸಹೋದ್ಯೋಗಿಗಳಿಗೆ ಅಭಿನಂದನೆಗಳು. ನೀವೆಲ್ಲರೂ ಕಾಂಗ್ರೆಸ್ ಪಕ್ಷದ ದೇವಸ್ಥಾನಕ್ಕೆ ಅಡಿಗಲ್ಲನ್ನು ಹಾಕಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸಮಾವೇಶದ ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ ಬಹುತ್ವವನ್ನು ಕಾಪಾಡುವುದು, ಅದಕ್ಕೆ ಗೌರವ ಕೊಡುವುದು ಅವಶ್ಯಕವಾಗಿದೆ. ಬಿಜೆಪಿಯವರು ಧರ್ಮ, ಜಾತಿ, ಸಂಸ್ಕೃತಿ ಹೆಸರಲ್ಲಿ ದೇಶವನ್ನು ಒಡೆಯುವಂಥ ಕೆಲಸ ಮಾಡುತ್ತಿದ್ದಾರೆ. ಇದೊಂದು ಸವಾಲು ಎಂದರು.
ಬಿ.ಕೆ.ಹರಿಪ್ರಸಾದ್ ಜತೆ ನೀವು ನಿಲ್ಲಬೇಕು. ನಮ್ಮ ಸಿದ್ಧಾಂತ, ಸಂವಿಧಾನದ ಮೂಲ ಆಶಯಗಳ ಜಾರಿ ಮಾಡುವ ಪ್ರಯತ್ನ ಮಾಡಬೇಕು. ಬಿ.ಕೆ.ಹರಿಪ್ರಸಾದ್ ಅವರು ಬಿಜೆಪಿ, ಆರೆಸ್ಸೆಸ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆ ಪ್ರಯತ್ನ ನಮ್ಮ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬರಬೇಕು. ಈ ಪ್ರಯತ್ನ ಮಾಡಿದರೆ ಮಾತ್ರ ನಮ್ಮ ದೇಶ ಮತ್ತು ಸಂವಿಧಾನ ಉಳಿಸಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.
2028ರಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿದೆ. ಜನರು ಖುಷಿಯಾಗಿದ್ದಾರೆ. ಐದು ಉಪಸಮರದಲ್ಲಿ ಗೆಲ್ಲಬೇಕಾದರೆ ಜನರ ಪ್ರೀತಿ, ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂದರ್ಥ. 2029ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಸಂಕಲ್ಪವನ್ನು ನಾವು ಮಾಡಬೇಕು. ಹರಿಪ್ರಸಾದ್ ನಾಯಕತ್ವದಲ್ಲಿ ಪಕ್ಷ ಸದೃಢವಾಗಲಿ, ಬಲವಾಗಿ ಬೆಳೆಯಲಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಗ್ಯಾರಂಟಿ ಸಮಿತಿಗಳ ರಚನೆ: ಡಿ.ಕೆ.ಶಿವಕುಮಾರ್
ಇಡೀ ಸರಕಾರವು ಬಿ.ಕೆ.ಹರಿಪ್ರಸಾದ್ ಜತೆಯಲ್ಲಿರುತ್ತದೆ. ನಾನು ಸಿಎಂ ಆಗಿರಬಹುದು, ಆದರೆ, ಕಾರ್ಯಕರ್ತನಾಗಿ ಇರುತ್ತೇನೆ. 2028ಕ್ಕೆ ಮತ್ತೆ ಅಧಿಕಾರಕ್ಕೆ ಬರಬೇಕು. ಈ ದೃಷ್ಟಿಯಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿ ಸದಸ್ಯರು ಗ್ಯಾರಂಟಿ ಫಲಾನುಭವಿಗಳ ದಾಖಲೆ ಮರುಪರಿಶೀಲನೆ ಮಾಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಹಿಂದೂ ರಾಷ್ಟ್ರ ಮಾಡಲು ಬಿಡಕೂಡದು: ಸಿದ್ದರಾಮಯ್ಯ
ಬಿಜೆಪಿ ಸುಳ್ಳುಗಳ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡಲಿದೆ. ಬಿಜೆಪಿ ಅವರು ಸರ್ವಾಧಿಕಾರದ ಮೇಲೆ ನಂಬಿಕೆ ಇಟ್ಟವರು. ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ. ಇದನ್ನು ಮಾಡಲು ಸಾಧ್ಯವಿಲ್ಲ. ಇದನ್ನು ಮಾಡಲು ನಮ್ಮ ಕಾರ್ಯಕರ್ತರು ಬಿಡಕೂಡದು. ನಾವು ಯಾವತ್ತೂ ಬಹುತ್ವದ ಪರವಾಗಿ ಇರುವವರು ಎಂದು ಸಿದ್ದರಾಮಯ್ಯ ತಿಳಿಸಿದರು.






