ಧರ್ಮಸ್ಥಳ ಪ್ರಕರಣ | ದೂರು, ಮಾಹಿತಿಗಾಗಿ ವಿಶೇಷವಾದ ‘ಸಹಾಯವಾಣಿ’ ಸ್ಥಾಪಿಸುವಂತೆ ಒತ್ತಾಯ

ಬೆಂಗಳೂರು : ಧರ್ಮಸ್ಥಳ ಪ್ರದೇಶದಲ್ಲಿ ಆಗಿರುವ ಮಹಿಳೆಯರ ನಾಪತ್ತೆ ಮತ್ತು ಸಾವುಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಮಾಹಿತಿಗಾಗಿ ವಿಶೇಷವಾದ ‘ಸಹಾಯವಾಣಿ’ಯನ್ನು(ಹೆಲ್ಪ್ಲೈನ್) ಸ್ಥಾಪಿಸಬೇಕು. ಹಾಗೆಯೇ ಸಾಕ್ಷಿ ಮತ್ತು ದೂರುದಾರರಿಗೆ ಅಗತ್ಯವಾದ ರಕ್ಷಣೆ, ಸುರಕ್ಷತೆ ಮತ್ತು ಗೌಪ್ಯತೆಯನ್ನು ಒದಗಿಸಬೇಕು ಎಂದು ‘ಕೊಂದವರು ಯಾರು?’ ಎಂಬ ಸಂಘಟನೆಯು ಒತ್ತಾಯಿಸಿದೆ.
ಬುಧವಾರದಂದು ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣಗಳ ತನಿಖೆಗೆ ಸರಕಾರ ನೇಮಿಸಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಿಗೆ ಸಂಘಟನೆಯು ಪತ್ರ ಬರೆದಿದ್ದು, ದೂರುದಾರಿಗೆ, ಸಾಕ್ಷಿದಾರರಿಗೆ ತಜ್ಞ ಸಂಸ್ಥೆಗಳ ಕಾನೂನಿನ ನೆರವು ನೀಡಬೇಕು. ಜೊತೆಗೆ ಸುರಕ್ಷಿತ ವಾಸಸ್ಥಾನ ಮತ್ತು ಜೀವನೋಪಾಯ ನೀಡುವ ನಿಯಮಗಳನ್ನು ಪರಿಶೀಲಿಸಬೇಕು. ನೊಂದ ಕುಟುಂಬಗಳಿಗೆ ರಕ್ಷಣೆ, ಪರಿಹಾರ ಮತ್ತು ಪುನರ್ವಸತಿಯನ್ನು ಒದಗಿಸಬೇಕು ಎಂದು ತಿಳಿಸಿದೆ.
ಲಿಂಗ ಆಧಾರಿತ ಹಿಂಸೆ ಮತ್ತು ದೌರ್ಜನ್ಯದ ಯಾವುದೇ ಸಾಕ್ಷಿ/ಬದುಕುಳಿದವರು ತಮ್ಮ ಜೀವ, ಆಸ್ತಿ, ಜೀವನೋಪಾಯ ಮತ್ತು ಬದುಕಿನ ಘನತೆಯ ದೃಷ್ಟಿಯಿಂದ ಬೆದರಿಕೆಗಳನ್ನು ಎದುರಿಸುತ್ತಾರೆ. ದೂರುದಾರರು, ಸಾಕ್ಷಿದಾರರು ತಮ್ಮ ಹೇಳಿಕೆಗಳು ಮತ್ತು ಹಂಚಿಕೊಂಡ ಸಾಕ್ಷ್ಯಗಳನ್ನು ದಾಖಲಿಸುವಲ್ಲಿ ಮಾನದಂಡಗಳನ್ನು ಅನುಸರಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
2024ರ ಸೆ.13ರ ಹೈಕೋರ್ಟ್ನ ತೀರ್ಪಿನಂತೆ, ಸೌಜನ್ಯ ಪ್ರಕರಣದಲ್ಲಿ ಸಂಬಂಧಿತ ಅಧಿಕಾರಿಗಳು ಮತ್ತು ತನಿಖಾಕಾಧಿಕಾರಿಗಳ ನಿರ್ಲಕ್ಷ್ಯವನ್ನು ಅಪರಾಧವಾಗಿ ಪರಿಗಣಿಸಿ, ರಾಜ್ಯ ಸರಕಾರವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಕಾನೂನಿನಂತೆ ಕ್ರಮ ತೆಗೆದುಕೊಳ್ಳದ ಸಾರ್ವಜನಿಕ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿಸುವ ಐಪಿಸಿ ಸೆಕ್ಷನ್ 166ಎ(ಅಥವಾ ತತ್ಸಮಾನ ಬಿಎನ್ಎಸ್ ಸೆಕ್ಷನ್) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.
ಎಸ್ಐಟಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಲಿಂಗ ನ್ಯಾಯ ಮತ್ತು ಜವಾಬ್ದಾರಿಯನ್ನು ಖಚಿತಪಡಿಸಲು ಒಂದು ಸ್ವತಂತ್ರ ಬೆಂಬಲ ಗುಂಪನ್ನು ಸ್ಥಾಪಿಸಿ, ಅದರಲ್ಲಿ ಮಹಿಳಾ ಹಕ್ಕುಗಳ ತಜ್ಞರನ್ನು ಸೇರಿಸಬೇಕು. ಸತ್ಯವನ್ನು ಮರೆಮಾಚುವ ಅಥವಾ ಜಾತಿ/ವರ್ಗ/ಧರ್ಮ/ರಾಜಕೀಯ ಪ್ರಾಬಲ್ಯ ಬಳಸಿ ಒತ್ತಡ ಹೇರುವ ಮೂಲಕ ಯಾರಾದರೂ ತನಿಖೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಡ್ಡಿಪಡಿಸಿದದಲ್ಲಿ ಅವರನ್ನು ಶಿಕ್ಷೆಗೊಳಪಡಬೇಕು ಎಂದು ಸಂಘಟನೆಯು ಹೇಳಿದೆ.
ಧರ್ಮಸ್ಥಳ ಪ್ರದೇಶದಲ್ಲಿ ಅಸ್ವಾಭಾವಿಕ ಸಾವುಗಳ ಸಂಖ್ಯೆಯು ಅಸಾಮಾನ್ಯವಾಗಿ ಹೆಚ್ಚಾಗಿದ್ದು, ಇದನ್ನು ಉಗ್ರಪ್ಪ ಸಮಿತಿಯು ಗುರುತಿಸಿದೆ. ಎಸ್ಐಟಿ ನಡೆಸುವ ಸಮಗ್ರ ತನಿಖೆಯು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಿಗದ ನ್ಯಾಯವನ್ನು ಕೊಡಬೇಕು. ಅಲ್ಲದೇ, ಮುಂದಿನ ದಿನಗಳಲ್ಲಿ ಇಂತಹ ಅಪರಾಧಗಳು ನಡೆಯದಂತೆ ಸಮಾಜಕ್ಕೆ ಸಂದೇಶ ಕೊಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಸಾವುಗಳು, ಅತ್ಯಾಚಾರಗಳು, ನಾಪತ್ತೆ ಪ್ರಕರಣಗಳು ಮತ್ತು ದೌರ್ಜನ್ಯಗಳಿಗೆ ಸಂಬಂಧಿಸಿದ ಪೊಲೀಸ್ ತನಿಖೆಗಳು ಏಕೆ ನಿರಂತರವಾಗಿ ಕಳಪೆಯಾಗಿ ನಡೆದಿವೆ ಮತ್ತು ಅರೆಮನಸ್ಸಿನಿಂದ ಕೂಡಿದಂತಿವೆ? ಧರ್ಮಸ್ಥಳ ಪ್ರದೇಶದ ಬಹುತೇಕ ಪ್ರಕರಣಗಳಲ್ಲಿ ಸಾಕ್ಷಿಗಳ ನಾಪತ್ತೆ ಅಥವಾ ವಿವರಣೆಗೆ ನಿಲುಕದ ಸಾವುಗಳನ್ನು ಏಕೆ ತನಿಖೆ ಮಾಡಲಿಲ್ಲ? ಈ ಪ್ರಕರಣಗಳಲ್ಲಿ ಸಾಮ್ಯತೆ ಇರುವುದನ್ನು ಗಮನಿಸಿ, ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಅಧಿಕಾರಿಗಳು ವಿಫಲರಾಗಿರುವುದು ಏಕೆ ಎಂದು ಸಂಘಟನೆಯು ಸರಕಾರವನ್ನು ಪ್ರಶ್ನಿಸಿದೆ.
ಪದ್ಮಲತಾ, ಯಮುನಾ/ನಾರಾಯಣ ಮತ್ತು ಹೇಮಾವತಿ ದೇವಾಡಿಗಾ ಮುಂತಾದ ಹಳೆಯ ಪ್ರಕರಣಗಳಿಗೆ ಸರಿಯಾದ ತನಿಖೆ ಇಲ್ಲದೆ, ಪ್ರಕರಣಗಳು ಮುಚ್ಚಲ್ಪಟ್ಟಿವೆ. ಇಂತಹ ಪ್ರಕರಣಗಳಿಗೆ ಮರುಚಾಲನೆ ನೀಡಬೇಕಾಗಿದೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಸಂದೇಹಾಸ್ಪದವಾಗಿ ಸಾವಿಗೀಡಾದ ರವಿ ಪೂಜಾರಿ, ಗೋಪಾಲಕೃಷ್ಣ ಗೌಡ, ದಿನೇಶ್ ಗೌಡ, ವಾರಿಜಾ ಆಚಾರ್ಯ ಮತ್ತು ಹರೀಶ್ ಮಡಿವಾಳ ಮುಂತಾದ ಸಂದೇಹಾಸ್ಪದ ಸಾಕ್ಷಿಗಳ ಸಾವುಗಳನ್ನು ಮರುತನಿಖೆ ಮಾಡಬೇಕು ಎಂದು ‘ಕೊಂದವರು ಯಾರು?’ ಎಂಬ ಸಂಘಟನೆಯು ಆಗ್ರಹಿಸಿದೆ.







