ಬಾಣಂತಿಯರ ಸರಣಿ ಸಾವಿನ ಡೆತ್ ಆಡಿಟ್ ವರದಿ ಬಿಡುಗಡೆ
ಅಗತ್ಯ ಔಷಧ ಸಲಕರಣೆ, ವೈದ್ಯರ ನಿರ್ವಹಣೆ ಸರಿಯಿದ್ದಿದ್ದರೇ ಶೇ.70ರಷ್ಟು ಸಾವು ತಡೆಯಬಹುದಿತ್ತು: ದಿನೇಶ್ ಗುಂಡೂರಾವ್

ಬೆಂಗಳೂರು : ರಾಜ್ಯದಲ್ಲಿ ಹಿಂದಿನ ಒಂದು ವರ್ಷದಿಂದ ಆತಂಕ ಮೂಡಿಸಿದ್ದ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡೆತ್ ಆಡಿಟ್ ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಬಾಣಂತಿಯರ ಸರಣಿ ಸಾವಿನ ಬಗ್ಗೆ ಟೆಕ್ನಿಕಲ್ ಕಮಿಟಿ ರಚನೆಯಾಗಿತ್ತು. ಈಗ ಟೆಕ್ನಿಕಲ್ ಕಮಿಟಿ ವರದಿಯ ಶಿಫಾರಸು ಸರಕಾರ ಪಡೆದಿದೆ. ಅಗತ್ಯ ಔಷಧ ಸಲಕರಣೆ, ವೈದ್ಯರು ಜವಾಬ್ದಾರಿಯಿಂದ ನಿರ್ವಹಿಸಿದ್ದರೇ ಶೇ.70ರಷ್ಟು ಬಾಣಂತಿಯರ ಸಾವುಗಳನ್ನು ನಾವು ತಡೆಯಬಹುದಿತ್ತು ಎಂದು ತಿಳಿಸಿದರು.
ರಿಂಗರ್ ಲ್ಯಾಕ್ಟೇಟ್ ಸಮಸ್ಯೆಯಿಂದ 18 ಮಂದಿ ಬಾಣಂತಿಯರ ಸಾವಾಗಿದೆ. ಡಿಸೆಂಬರ್ನಿಂದ ಇದನ್ನು ಸರಿಪಡಿಸಲು ತಯಾರಿ ಮಾಡಿದ್ದೇವೆ. ಫ್ರೆಷ್ ಫ್ರೋಜನ್ ಪ್ಲಾಸ್ಮಾ ಇದ್ದಿದ್ದರೆ ಸಾವಿನ ಸಂಖ್ಯೆ ತಡೆಯಬಹುದಿತ್ತು. ಹೀಗಾಗಿ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯದಲ್ಲಿ ಬಳ್ಳಾರಿ ಸೇರಿದಂತೆ 13 ಕಡೆಗಳಲ್ಲಿ ಈ ರೀತಿಯ ಪ್ರಕರಣಗಳು ಗಮನಕ್ಕೆ ಬಂದಿದ್ದು, ಈಗಾಗಲೇ ನಿರ್ಲಕ್ಷ್ಯತೆ ತೋರಿದ ಸುಮಾರು 10 ವೈದ್ಯರಿಗೆ ನೋಟಿಸ್ ನೀಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಇನ್ನು ಡೆತ್ ಆಡಿಟ್ ವರದಿಗೆ ಸಂಬಂಧಪಟ್ಟಂತೆ ವಿಶ್ಲೇಷಣೆ ಪ್ರಕ್ರಿಯೆಯಲ್ಲಿ ಕಂಡುಬಂದ ಅಂಶಗಳ ಆಧಾರದ ಮೇಲೆ 27 ಶಿಫಾರಸುಗಳನ್ನು ಸಲ್ಲಿಸಲಾಗಿದೆ. ಈ ಶಿಫಾರಸುಗಳು ಆರೋಗ್ಯ ಸಂಸ್ಥೆಗಳಲ್ಲಿ ಪ್ರಸವ ಪೂರ್ವ ಮತ್ತು ಪ್ರಸವಾನಂತರದ ಸೇವೆಗಳ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಈ ಶಿಫಾರಸುಗಳಲ್ಲಿ ಸಾಮರ್ಥ್ಯ ವೃದ್ಧಿ, ಉಪಕರಣಗಳು ಮತ್ತು ಔಷಧಿಗಳೊಂದಿಗೆ ಸೌಲಭ್ಯಗಳನ್ನು ಬಲಪಡಿಸುವುದು. ರಕ್ತ ಸಂಗ್ರಹ ಘಟಕಗಳನ್ನು ಬಲಪಡಿಸುವುದು, ಸಾಮಾನ್ಯ ಹೆರಿಗೆಯ ನಂತರ ಬಾಣಂತಿಯರು 3 ದಿನಗಳು ಮತ್ತು ಸಿಸೇರಿಯನ್ ಹೆರಿಗೆಗಳ ನಂತರ 7 ದಿನಗಳ ಕಡ್ಡಾಯ ಆಸ್ಪತ್ರೆ ವಾಸ್ತವ್ಯ ಮಾಡಲು ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಸಾವಿಗೆ ಕಾರಣ ಸ್ಪಷ್ಟವಾಗಿಲ್ಲದ ಕೆಲವು ಸಂದರ್ಭಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಶಿಫಾರಸ್ಸು ಮಾಡಲಾಗಿದೆ. ಹೆರಿಗೆಯ ಸ್ಥಳ ಅಥವಾ ಜನನ ಯೋಜನೆಯನ್ನು ಗರ್ಭಿಣಿಯರು ಮತ್ತು ಕುಟುಂಬ ಸದಸ್ಯರೊಂದಿಗೆ ಮಾಡಬೇಕು. ಹೆರಿಗೆಗೆ ನಿಯೋಜಿಸಿರುವ ಮಹಿಳೆಯರ ಪಟ್ಟಿಯನ್ನು ಸಂಬಂಧ ಪಟ್ಟ ಆಸ್ಪತ್ರೆಯೊಂದಿಗೆ ಮುಂಚಿತವಾಗಿ ಹಂಚಿಕೊಳ್ಳಲು ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದರು.
ಡೆತ್ ಆಡಿಟ್ ವರದಿಯ ಮುಖ್ಯಾಂಶಗಳು.!
ಶೇ.63ರಷ್ಟು ತಾಯಂದಿರು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಶೇ.37ರಷ್ಟು ಮಂದಿ ಬಾಣಂತಿಯರಿಗೆ ಸಾಮಾನ್ಯ ಹೆರಿಗೆಗಳಾಗಿವೆ.
ರಿಂಗರ್ ಲ್ಯಾಕ್ಟೇಟ್ ಸಮಸ್ಯೆಗೆ ಸಂಬಂಧಿಸಿದ 18 ಬಾಣಂತಿಯರ ಸಾವುಗಳಾಗಿವೆ. ಅದರಲ್ಲಿ 5 ಬಳ್ಳಾರಿ, 4 ರಾಯಚೂರು, 4 ಬೆಂಗಳೂರು ನಗರ, 3 ಉತ್ತರ ಕನ್ನಡ ಮತ್ತು ಯಾದಗಿರಿ ಮತ್ತು ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಬಾಣಂತಿಯರ ಸಾವಿನ ಸಂಖ್ಯೆ
2020-21 : 714
2021-22 : 635
2022-23 : 594
2023-24 : 550
2024-25 : 530







