ಕ್ಷೇತ್ರ ವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾದರೆ ರಾಜಕೀಯ ಅಸ್ತಿತ್ವಕ್ಕೆ ಸಂಚಕಾರ: ದಿನೇಶ್ ಗುಂಡೂರಾವ್

ಬೆಂಗಳೂರು : ಕೇಂದ್ರ ಸರಕಾರ ಕ್ಷೇತ್ರ ವಿಂಗಡಣೆ ಮಾಡುವ ಮೂಲಕ ದಕ್ಷಿಣದ ರಾಜ್ಯಗಳಿಗೆ ತಾರತಮ್ಯ ಮಾಡುವುದನ್ನು ಮೊದಲು ನಿಲ್ಲಿಸಬೇಕು. ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡಿದರೆ ಭವಿಷ್ಯದಲ್ಲಿ ನಮ್ಮ ರಾಜ್ಯಗಳ ರಾಜಕೀಯ ಅಸ್ತಿತ್ವಕ್ಕೆ ಸಂಚಕಾರ ಬರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಎಚ್ಚರಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರವು ಮಳೆ ಹಾನಿ ಪರಿಹಾರ, ತೆರಿಗೆ ವಿಷಯಗಳಲ್ಲಿ ನಮಗೆ ಅನ್ಯಾಯವಾಗುತ್ತಿದೆ. ಜನಸಂಖ್ಯೆ ನಿಯಂತ್ರಣ, ಆರ್ಥಿಕ ಪ್ರಗತಿ ಮುಂತಾದವುಗಳಲ್ಲಿ ನಾವು ಮುನ್ನಡೆ ಸಾಧಿಸಿದ್ದೇವೆ. ಇವರು ಜನಸಂಖ್ಯೆ ಆಧಾರದಲ್ಲಿ ತೆರಿಗೆ ಪಾಲು ನೀಡುತ್ತೇವೆ ಎನ್ನುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯ ಅಗುವುದರೊಂದಿಗೆ, ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ಬಜೆಟ್ನಲ್ಲಿ ಘೋಷಣೆ ಮಾಡುತ್ತಾರೆ, ಹಣ ಬಿಡುಗಡೆ ಮಾಡುವುದಿಲ್ಲ. ಹೀಗೆ ಅವರ ರಾಜ್ಯ ಸರಕಾರಗಳು ತೊಂದರೆಗೆ ಸಿಲುಕುತ್ತದೆ. ಈಗ ಆರ್ಥಿಕ ನಷ್ಟ ಆಗುತ್ತದೆ, ಹೀಗೆ ಮುಂದುವರೆದರೆ ರಾಜಕೀಯವಾಗಿಯೂ ಸಮಸ್ಯೆ ಆಗುತ್ತದೆ. ಮೋದಿಯವರ ಮಾತನ್ನು ನಂಬಿ ಹೋದರೆ ಮುಂದೆ ದಕ್ಷಿಣದ ರಾಜ್ಯಗಳಿಗೆ ಬೆಲೆಯೆ ಇರುವುದಿಲ್ಲ ನೆನಪಿಡಿ ಎಂದು ಅವರು ಎಚ್ಚರಿಸಿದರು.
ಅನಿಲ ಸಮಸ್ಯೆ: ದೇಶದಲ್ಲಿ ಗ್ಯಾಸ್ ಸಮಸ್ಯೆ ಇರುವುದು ನಿಜ. ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಕೇಂದ್ರ ಸರಕಾರ ಸರಿಯಾದ ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಸಾರಿಗೆ, ಕೈಗಾರಿಕೆಗಳು ತೊಂದರೆಗೆ ಸಿಲುಕಿದೆ. ಫಾರ್ಮಾ ಕಂಪೆನಿಗಳು ತಮಗೆ ಆಗುತ್ತಿರುವ ಸಮಸ್ಯೆ ಕುರಿತು ನನಗೆ ಪತ್ರ ಬರೆದಿದ್ದಾರೆ.
ಔಷಧ ತಯಾರಿಕೆಗೆ ಕಚ್ಚಾ ವಸ್ತುಗಳು ಸಮಯಕ್ಕೆ ಸಿಗುತ್ತಿಲ್ಲ. ಸದ್ಯ ಪೂರೈಕೆಗೆ ಸಮಸ್ಯೆ ಇಲ್ಲ, ಹೀಗೆ ಮುಂದುವರಿದರೆ ಪೂರೈಕೆಗೆ ಕಾಲಾವಕಾಶ ಹೆಚ್ಚಿಸಬೇಕು ಎಂದಿದ್ದಾರೆ. ಈಗಾಗಲೇ ಔಷಧಗಳ ಬೆಲೆ ಹೆಚ್ಚಾಗಿದೆ. ಇದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲೆ ಆಗುತ್ತದೆ. ಕೇಂದ್ರವು ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿದೆ. ಯುದ್ಧ ಪ್ರಾರಂಭವಾದ ತಕ್ಷಣ ಕೇಂದ್ರ ಈ ಕುರಿತು ಆಲೋಚಿಸಬೇಕಿತ್ತು. ಈಗ ಪೆಟ್ರೋಲ್, ಕಟ್ಟಿಗೆ ಬಳಸಿ ಎನ್ನುತ್ತಿದ್ದಾರೆ. ಹೋಟೆಲ್, ರೈತರು, ಸಣ್ಣ ವ್ಯಾಪಾರಸ್ಥರು ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಟೀಕಿಸಿದರು.
ಅಸ್ಸಾಂ ಸಿಎಂ ಆಡುವ ಮಾತುಗಳನ್ನು ಕೇಳಿದರೆ ವಿಷಕಾರಿ ಅಂತಲೇ ಅನಿಸುವುದಿಲ್ಲವೇ?. ಲಂಗು-ಲಗಾಮು ಇಲ್ಲದೇ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುವುದರಿಂದ ಈ ರೀತಿಯಾಗುತ್ತಿದೆ. ಮೋದಿ ಆಡಳಿತದಲ್ಲಿ ಎಲ್ಲ ಸ್ವಾಯತ್ತ ಸಂಸ್ಥೆಗಳ ಸ್ಥಿತಿ ದೇಶದಲ್ಲಿ ಹೇಗಿದೆ ಎಂದು ಜನರಿಗೆ ಗೊತ್ತಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಇವುಗಳ ಅಸ್ತಿತ್ವವನ್ನು ಮೋದಿಯವರು ತಮ್ಮ ಸರ್ವಾಧಿಕಾರಿ ಧೋರಣೆಯಿಂದ ಹಾಳುಮಾಡಿದ್ದಾರೆ ಎಂದು ಅವರು ದೂರಿದರು.







