ಸುದ್ದಿಗೋಷ್ಠಿಗೆ ಅಡ್ಡಿ | ತಮಿಳು ನಟ ಸಿದ್ಧಾರ್ಥ್ ಬಳಿ ಕ್ಷಮೆ ಕೇಳಿದ ನಟ ಶಿವರಾಜ್ಕುಮಾರ್

ಬೆಂಗಳೂರು: ʼʼತಮಿಳು ನಟ ಸಿದ್ಧಾರ್ಥ್ ಅವರು ಗುರುವಾರ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಸುದ್ದಿಗೋಷ್ಠಿಗೆ ಅಡ್ಡಿಪಡಿಸಿದವರು ಯಾರು ಎಂದು ನನಗೆ ಗೊತ್ತಿಲ್ಲ, ಆದರೆ ಅದು ಸರಿಯಲ್ಲ, ಅವರ ಪರವಾಗಿ ನಾನು ನಟ ಸಿದ್ಧಾರ್ಥ್ ಗೆ ಕ್ಷಮೆ ಕೇಳುತ್ತೇನೆʼʼ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ ಬಂದ್ ಹಿನ್ನೆಲೆ ನಗರದ ಗುರುರಾಜ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಕಾವೇರಿ ಪರ ಹೋರಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼಕನ್ನಡಿಗರೆಂದರೆ ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುವವರು, ಎಲ್ಲರನ್ನೂ ಸ್ವಾಗತಿಸುವವರು ಎಂಬ ಭಾವನೆ ಎಲ್ಲರಲ್ಲೂ ಇದೆ, ಅದಕ್ಕೆ ನಾವು ಚ್ಯುತಿ ತರಬಾರದುʼʼ ಎಂದು ಮನವಿ ಮಾಡಿದರು.
“ಸಮಸ್ಯೆ ಅಂತ ಬಂದಾಗ ಕಲಾವಿದರು ಬರಲ್ಲ ಅಂತೀರಿ. ಸಿನಿಮಾದವರು ಬಂದು 5 ನಿಮಿಷ ಮಾತಾಡಿದ್ರೆ ಸಮಸ್ಯೆ ಬಗೆಹರಿಯುತ್ತಾ? ನಾವು ಮನುಷ್ಯರು. ಪ್ರತಿಭಟನೆಗೆ ಒಬ್ಬ ಕಲಾವಿದ ಭಾಗವಹಿಸಿದರೂ, ಇಡೀ ಚಿತ್ರರಂಗವೇ ಭಾಗವಹಿಸಿದಂತೆ ನಾವೆಲ್ಲರೂ ಒಂದೇ. ಅವರು ಬಂದಿಲ್ಲ. ಇವರು ಬಂದಿಲ್ಲ ಅಂತ ದೂರುವುದು ಸರಿಯಲ್ಲ” ಎಂದು ಹೇಳಿದರು.
ತಮ್ಮ ಹೊಸ ಚಿತ್ರ (ಚಿಕ್ಕು) ಪ್ರಚಾರಕ್ಕಾಗಿ ತಮಿಳು ನಟ ಸಿದ್ದಾರ್ಥ್ ಅವರು ಗುರುವಾರ ಬೆಂಗಳೂರಿಗೆ ಬಂದಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತು ಆರಂಭಿಸುತ್ತಿದ್ದಂತೆಯೇ ಕನ್ನಡ ಪರ ಸಂಘಟನೆಯ ಸದಸ್ಯರು ವಾಗ್ದಾಳಿ ನಡೆಸಿ ಕಾರ್ಯಕ್ರಮ ನಿಲ್ಲಿಸುವಂತೆ ಒತ್ತಾಯಿಸಿದ್ದರು. ಈ ವೇಳೆ ನಟ ಸಿದ್ದಾರ್ಥ್ ಅರ್ಧಕ್ಕೆ ಮಾತು ನಿಲ್ಲಿಸಿ ವೇದಿಕೆಯಿಂದ ಹೊರನಡೆದು ಕಾರಿನಲ್ಲಿ ತೆರಳಿದ್ದರು.







