ಬೆಂಗಳೂರಿನ ರಸ್ತೆ ಗುಂಡಿ, ಕಸದ ಸಮಸ್ಯೆ ಬಗ್ಗೆ ಪ್ರಶ್ನಿಸಿದ ಕಿರಣ್ ಮಜುಂದಾರ್; ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು..?

ಕಿರಣ್ ಮಜುಂದಾರ್ ಶಾ/ಡಿ.ಕೆ.ಶಿವಕುಮಾರ್
ಬೆಂಗಳೂರು, ಅ.14: ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳು ಹಾಗೂ ಕಸದ ಸಮಸ್ಯೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಇತ್ತೀಚೆಗೆ ಬೆಂಗಳೂರಿನ ನಮ್ಮ ಬಯೋಕಾನ್ ಘಟಕಕ್ಕೆ ಚೀನಾದಿಂದ ವಿದೇಶಿ ಉದ್ಯಮಿಯೊಬ್ಬರು ಬಂದಿದ್ದರು. ಈ ಊರಿನಲ್ಲಿ ಇಷ್ಟೇಕೆ ರಸ್ತೆ ಗುಂಡಿಗಳು ಇವೆ, ಕಸ ಕಣ್ಣಿಗೆ ರಾಚುತ್ತೆ ಎಂದು ಪ್ರಶ್ನಿಸಿದರು. ಭಾರತ ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿದೆ. ಆದರೆ, ಏಕೆ ದೇಶವು ಈ ಅವಕಾಶವನ್ನು ಬಳಸಿಕೊಳ್ಳುತ್ತಿಲ್ಲ ಎಂದರು' ಎಂದು ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬೆಂಗಳೂರು ನಗರವು ಲಕ್ಷಾಂತರ ಜನರಿಗೆ ಅವಕಾಶ, ಗುರುತು, ಯಶಸ್ಸು ನೀಡಿದೆಯೇ ಹೊರತು, ನಿರಂತರವಾಗಿ ತೆಗಳುವುದಕ್ಕಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಹೌದು ಬೆಂಗಳೂರು ನಗರದಲ್ಲಿ ಸವಾಲುಗಳಿವೆ. ಅವುಗಳೆಲ್ಲವನ್ನೂ ಆದ್ಯತೆ ಮೇರೆಗೆ ಬಗೆಹರಿಸುತ್ತಿದ್ದೇವೆ. ರಸ್ತೆ ಗುಂಡಿ, ಕಸದ ಸಮಸ್ಯೆಗಳನ್ನು ಕೊನೆಗಾಣಿಸುತ್ತೇವೆ. ಬೆಂಗಳೂರು ಪೂರ್ವ ವಿಭಾಗದ ಪಾಲಿಕೆಯಲ್ಲಿ 1673 ಕೋಟಿ ರೂಪಾಯಿಗಳು ಇದೆ. ಈ ಹಣದಿಂದ ಈ ಭಾಗದಲ್ಲಿ ಬರುವ ಐಟಿ-ಬಿಟಿ ಕಾರಿಡಾರ್ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
‘ಬೆಂಗಳೂರು ನಗರವನ್ನು ತೆಗಳುವ ಬದಲು ಎಲ್ಲರೂ ಒಟ್ಟುಗೂಡಿ ಕೆಲಸ ಮಾಡೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತ ದೇಶವನ್ನು ನೋಡಲು ಬಯಸುತ್ತದೆ' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್, ಕಿರಣ್ ಮಜುಂದಾರ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ಬಳಿಕ ಇದಕ್ಕೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಿರಣ್ ಮಜುಂದಾರ್ ಶಾ, ‘ನಿಮ್ಮ ವಾದವನ್ನು ನಾನು ಒಪ್ಪುತ್ತೇನೆ. ಗುಣಮಟ್ಟ ಹಾಗೂ ತ್ವರಿತ ಎಂಬ ಎರಡು ನಿಯಮಗಳನ್ನು ಅಳವಡಿಸಿಕೊಂಡು ಸಾಂಘಿಕ ಪ್ರಯತ್ನವನ್ನು ಈ ನಿಟ್ಟಿನಲ್ಲಿ ನಾವೆಲ್ಲ ಮಾಡಬೇಕಿದೆ’ ಎಂದು ಹೇಳಿದ್ದಾರೆ.







