ಬೆಂಗಳೂರು | 4 ಸಾವಿರ ಕೋಟಿ ರೂ. ವೆಚ್ಚದಲ್ಲಿ 500 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್ ಡಿಪಿಆರ್ ಸಿದ್ಧತೆ : ಡಿ.ಕೆ.ಶಿವಕುಮಾರ್

ಬೆಂಗಳೂರು : ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 500 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಡಿಪಿಆರ್ ಸಿದ್ಧಪಡಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ 1,650 ಕಿ.ಮೀ ಉದ್ದದ ಪ್ರಮುಖ ರಸ್ತೆಗಳಿದ್ದು, ಹೊಸದಾಗಿ 104 ಕಿಮೀ ರಸ್ತೆಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ ಎಂದು ಹೇಳಿದರು.
ವೈಟ್ ಟಾಪಿಂಗ್ ರಸ್ತೆಗಳು ಸುಮಾರು 25-30 ವರ್ಷಗಳ ಕಾಲ ಬಾಳಿಕೆ ಬರುತ್ತವೆ. ಈಗಾಗಲೇ 148 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 83 ರಸ್ತೆಗಳ ಅಭಿವೃದ್ದಿಗೆ 1,800 ಕೋಟಿ ರೂ. ಹಣ ವ್ಯಯಿಸಲಾಗುತ್ತಿದೆ. 350 ಕಿ.ಮೀ. ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದಕ್ಕೆ 695 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಮುಖ್ಯಮಂತ್ರಿಯವರು ಹೊಸದಾಗಿ 1,100 ಕೋಟಿ ರೂಪಾಯಿ ಅನುದಾನ ನೀಡಿದ್ದು, ಇದರಿಂದ 550 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣ ಕೈಗೆತ್ತಿಕೊಂಡಿದ್ದೇವೆ ಎಂದು ಅವರುವ ವಿವರಿಸಿದರು.
ಹಿಂದಿನ ಸಚಿವ ಸಂಪುಟ ಸಭೆಯಲ್ಲಿ 117 ಕಿ.ಮೀ. ಉದ್ದದ ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಬಿಡಿಎ ಕಾಯ್ದೆ ಪ್ರಕಾರ ದುಪ್ಪಟ್ಟು ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ನಮ್ಮ ಸರಕಾರ ರೈತರಿಗೆ ಬಂಪರ್ ಪರಿಹಾರ ನೀಡಲು ಮುಂದಾಗಿದೆ. ಮೂರು ಪಟ್ಟು ಪರಿಹಾರ, ಟಿಡಿಆರ್ ಅಥವಾ ಎಫ್ಎಆರ್ ನೀಡಲು ತೀರ್ಮಾನ ಮಾಡಿದ್ದೇವೆ. ಹಿಂದಿನ ಯಾವ ಸರಕಾರವೂ ಈ ವಿಚಾರದಲ್ಲಿ ಧೈರ್ಯ ತೋರಿಸಿರಲಿಲ್ಲ. 2007-08ರಲ್ಲಿ ತೀರ್ಮಾನವಾಗಿದ್ದರೂ, ಅನುಷ್ಠಾನ ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದರು.
ನಗರದಲ್ಲಿ 113 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣಕ್ಕೆ ಸರಕಾರ ತೀರ್ಮಾನ ತೆಗೆದುಕೊಂಡಿದೆ. ಮೊದಲ ಹಂತದಲ್ಲಿ 40 ಕಿಲೋಮೀಟರ್ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕೆ ಖಾಲಿಡಬ್ಬ ಸಂಸದನೊಬ್ಬ ಬರೀ ಟ್ವೀಟ್ ಮಾಡಿಕೊಂಡು ಟೀಕೆ ಮಾಡುತ್ತಿದ್ದಾನೆ ಎಂದು ಅವರು ವ್ಯಂಗ್ಯವಾಡಿದರು.
ಐದು ಜನ ಸಂಸದರನ್ನು ಬೆಂಗಳೂರು ಜನತೆ ಗೆಲ್ಲಿಸಿದ್ದಾರೆ. ನಿರ್ಮಲ ಸೀತಾರಾಮನ್ ಕೇಂದ್ರ ಹಣಕಾಸು ಸಚಿವರಾಗಿದ್ದಾರೆ. ಒಬ್ಬನೇ ಒಬ್ಬ ಸಂಸದ ಹತ್ತು ರೂಪಾಯಿ ಅನುದಾನವನ್ನು ಕರ್ನಾಟಕಕ್ಕೆ ತಂದಿದ್ದರೆ, ಜನರು ನೀಡುವ ಶಿಕ್ಷೆಗೆ ನಾನು ತಲೆಬಾಗುತ್ತೇನೆ ಎಂದು ಅವರು ಹೇಳಿದರು.
ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜೆ- ನರ್ಮ್ ಯೋಜನೆಯಡಿ ಎಲ್ಲದಕ್ಕೂ ಅನುದಾನ ಬರುತ್ತಿತ್ತು. ಈಗಿನ ಸಂಸದರು ಒಂದು ಯೋಜನೆಗೂ ಅರ್ಜಿ ಕೊಟ್ಟಿಲ್ಲ. ಒಬ್ಬರಾದರೂ ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆಯೇ? ಬಿಜೆಪಿ ಸಂಸದರ ಕೊಡುಗೆ ರಾಜ್ಯಕ್ಕೆ ಶೂನ್ಯ. ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಅವರು ಮಂಗಳವಾರ (ಇಂದು) ನನ್ನನ್ನು ಭೇಟಿ ಮಾಡಿದ್ದರು. ದೇಶಕ್ಕೆ ಬೆಂಗಳೂರು ಇಷ್ಟೆಲ್ಲಾ ಕೊಡುಗೆ ನೀಡುತ್ತಿದೆ. ಕೇಂದ್ರ ಸರಕಾರಕ್ಕೆ ಸೂಕ್ತ ಅನುದಾನ ನೀಡುವಂತೆ ಹೇಳಿ ಎಂದು ಅವರಿಗೆ ಹೇಳಿದೆ ಎಂದರು.
ಇತ್ತೀಚಿಗೆ ಮೋದಿ ಅವರು ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದು ಕರೆದರು. ವಾಜಪೇಯಿ ಅವರು ಬೆಂಗಳೂರು ಮೂಲಕ ಭಾರತವನ್ನು ನೋಡಲಾಗುತ್ತಿದೆ ಎಂದರು. ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಬೆಂಗಳೂರು ಅಮೆರಿಕಾದ ಜೊತೆ ಸ್ಪರ್ಧಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಜನರ ಮನೆಯ ಬಾಗಿಲಿಗೆ ಸರಕಾರದ ಆಡಳಿತ ತಲುಪಬೇಕು ಎಂದು ಬೆಂಗಳೂರನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸಿ ಐತಿಹಾಸಿಕ ತೀರ್ಮಾನ ಕೈಗೊಂಡು ಜಿಬಿಎ ರಚಿಸಿದ್ದೇವೆ. ನಮ್ಮ ಈ ತೀರ್ಮಾನ ಭವಿಷ್ಯದಲ್ಲಿ ಉತ್ತಮ ಫಲ ನೀಡುತ್ತದೆ. ಬೆಂಗಳೂರು ಡಿ.ಕೆ. ಶಿವಕುಮಾರ್ಗೆ ಸೇರಿದ್ದಲ್ಲ, ಜನರಿಗೆ ಸೇರಿದ್ದು ಎಂದರು.
ಕಸ ವಿಲೇವಾರಿಗೆ, ಜಾಹೀರಾತು ನೀತಿಗೆ, ಬಿಜೆಪಿ ಸಮಯದಲ್ಲಿ ತೀರ್ಮಾನ ಮಾಡಿದ ಪ್ರೀಮಿಯಂ ಎಫ್ಎಆರ್ಗೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಆದರೂ ನಮ್ಮ ಸರಕಾರ ಧೈರ್ಯ ಕಳೆದುಕೊಳ್ಳದೆ, ನ್ಯಾಯಾಲಯದ ಮುಂದೆ ಪ್ರಸ್ತಾವವನ್ನು ಸಲ್ಲಿಸಿದ್ದೇವೆ ಎಂದು ಅವರು ವಿವರಿಸಿದರು.
10 ಸಾವಿರ ಗುಂಡಿ ಮುಚ್ಚಿದ್ದೇವೆ: ನಗರದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಮುಚ್ಚಿದ್ದೇವೆ. ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ನಗರದಾದ್ಯಂತ 20 ಸಾವಿರ ಗುಂಡಿಗಳಿವೆ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ನ್ಯಾಯಾಲಯ ಇದರ ಬಗ್ಗೆ ಪರಿಶೀಲನೆ ಮಾಡುತ್ತಿತ್ತು. ಆದರೆ ನಿಮ್ಮ ಕಾಂಗ್ರೆಸ್ ಸರಕಾರ ಸಮಸ್ಯೆ ತಿಳಿಸುವ ಅಧಿಕಾರವನ್ನು ಜನರಿಗೆ ನೀಡಿದೆ. ನೀವು ಓಡಾಡುವ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ, ನಿಮ್ಮ ಮನೆ ಬಳಿ ಕಸವಿದ್ದರೆ ಅದರ ಫೋಟೋ ತೆಗೆದು ಸರಕಾರದ ಗಮನಕ್ಕೆ ತನ್ನಿ ಎಂದು ಇದುವರೆಗೂ ಯಾರು ಹೇಳಿದ್ದಾರೆ. ಈ ಕೆಲಸವನ್ನು ನಿಮ್ಮ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸರಕಾರ ಮಾಡಿದೆ ಎಂದು ಅವರು ವಿವರಿಸಿದರು.
ನಿಮ್ಮ ಭೂಮಿ ದಾಖಲೆ ನೀಡುವುದು ನಮ್ಮ 6ನೆ ಗ್ಯಾರಂಟಿ: ಸಚಿವರಾದ ಕೃಷ್ಣಬೈರೇಗೌಡ ಹಾಗೂ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಹಟ್ಟಿ, ತಾಂಡಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ. ಜನಸಾಮಾನ್ಯರ ಆಸ್ತಿಗಳನ್ನು ರಕ್ಷಣೆ ಮಾಡುವುದೇ ಕಾಂಗ್ರೆಸ್ ಸರಕಾರದ ಆರನೇ ಗ್ಯಾರಂಟಿ ಎಂದರು.
ಈ ಹಿಂದೆ ‘ಬಿ’ ಖಾತೆ ನೀಡುತ್ತಿದ್ದರು. ಇದರಿಂದ ಯಾರಿಗೂ ಬ್ಯಾಂಕ್ನಲ್ಲಿ ಸಾಲ ದೊರೆಯುತ್ತಿರಲಿಲ್ಲ. ಆದಕಾರಣಕ್ಕೆ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರಿಗೂ ‘ಎ’ ಖಾತೆ ನೀಡುವ ಐತಿಹಾಸಿಕ ತೀರ್ಮಾನವನ್ನು ಸರಕಾರ ಮಾಡಿದೆ. ಈ ಕೆಲಸವನ್ನು ನೋಡಿದ ಕೇಂದ್ರ ಸರಕಾರವು ನಮ್ಮ ಅಧಿಕಾರಿಗಳನ್ನು ಕರೆಸಿ ಇಡೀ ದೇಶಕ್ಕೆ ಮಾದರಿ ಕೆಲಸ ಮಾಡುತ್ತಿದ್ದೀರಾ ಎಂದು ಶ್ಲಾಘಿಸಿದ್ದಾರೆ ಎಂದರು.







