‘ಒಂದು ರಾಷ್ಟ್ರ ಒಂದು ಚುನಾವಣೆ' ಪ್ರಸ್ತಾವನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರೋಧ

ಬೆಂಗಳೂರು : ಕೇಂದ್ರ ಸರಕಾರದ ಉದ್ದೇಶಿತ ‘ಒಂದು ರಾಷ್ಟ್ರ ಒಂದು ಚುನಾವಣೆ' ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರವಾಗಿ ವಿರೋಧಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ಜಂಟಿ ಸಂಸದೀಯ ಅಧ್ಯಯನ ಸಮಿತಿಯು ಆಯೋಜಿಸಿದ್ದ ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಿದ ಅವರು, ಇದೊಂದು ಅಧಿಕಾರ ಕೇಂದ್ರೀತ, ರಾಜಕೀಯ ಪ್ರೇರಿತ ಯೋಜನೆಯಾಗಿದ್ದು, ರಾಜ್ಯಗಳನ್ನು ದುರ್ಬಳಗೊಳಿಸುವುದರ ಮೂಲಕ ಒಕ್ಕೂಟ ವ್ಯವಸ್ಥೆಗೆ ತೀವ್ರ ಧಕ್ಕೆ ತರಲಿದೆ ಎಂದು ಪ್ರತಿಪಾಸಿದರು.
‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಅಪಾಯವಿದೆ. ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವವರ ಅನುಕೂಲಕ್ಕೆ ತಕ್ಕಂತೆ ಹೆಣೆಯಲಾಗುತ್ತಿರುವ ಈ ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿ ಆಗಿ ಸರಸಗಟಾಗಿ ತಿರಸ್ಕರಿಸುತ್ತೇನೆ ಎಂದು ಅವರು ಹೇಳಿದರು.
‘ಒಂದು ದೇಶ ಒಂದು ಚುನಾವಣೆ' ವಿರೋಧಿಸಿ ಕರ್ನಾಟಕ ವಿಧಾನಸಭೆಯು ಈಗಾಗಲೇ ನಿರ್ಣಯವನ್ನೂ ಅಂಗೀಕರಿಸಿದೆ. ಒಂದೊಮ್ಮೆ ರಾಜಕೀಯ ಅಸ್ಥಿರತೆ, ಅವಿಶ್ವಾಸ, ಬಹುಮತದ ಕೊರತೆಯಿಂದ ಒಂದು ಸರಕಾರ ಅರ್ಧಾವಧಿಯಲ್ಲೇ ಉರುಳಿ ಹೋದರೆ ಆಗ ಏನು ಮಾಡುವುದು? ಇದಕ್ಕೆ ಪರಿಹಾರ ಎಲ್ಲಿದೆ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಒಂದೊಂದು ರಾಜ್ಯದಲ್ಲಿ ಒಂದೊಂದು ಅವಧಿಗೆ ಚುನಾವಣೆ ನಡೆಯುತ್ತದೆ. ಕರ್ನಾಟಕದಲ್ಲಿ ಮೂರು ವರ್ಷಗಳ ಹಿಂದೆ ಚುನಾವಣೆ ಆಗಿತ್ತು. ತಮಿಳುನಾಡು, ಕೇರಳದಲ್ಲಿ ಮೊನ್ನೆಯಷ್ಟೇ ಚುನಾವಣೆ ಆಗಿದೆ. ಪಂಜಾಬ್, ತೆಲಂಗಾಣದಲ್ಲಿ ಬೇರೆ ಕಾಲದಲ್ಲಿ ಆಗಿದೆ. ವಿವಿಧ ಕಾಲಾವಧಿಯ ಈ ಚುನಾವಣೆಗಳನ್ನು ಸಮೀಕರಿಸುವುದು ಹೇಗೆ? ಎಂದು ಅವರು ಕೇಳಿದರು.
ಇದು ಕಾರ್ಯಸಾಧು ಯೋಜನೆಯಲ್ಲ, ವಾಸ್ತವದಲ್ಲಿ ಇದು ನಡೆಸಲು ಅಸಾಧ್ಯ. ಇದು ಪ್ರಾದೇಶಿಕ ಪಕ್ಷಗಳು ಹಾಗೂ ಪ್ರತಿಪಕ್ಷಗಳ ಧ್ವನಿ ಅಡಗಿಸುವ ಹುನ್ನಾರವಾಗಿದೆ. ಈ ಪ್ರಸ್ತಾವನೆ ಬಗ್ಗೆ ಕರ್ನಾಟಕ ಸರಕಾರದ ಸಹಮತವಿಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಮುಖಂಡರ ಒಟ್ಟಾರೆ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಶಿವಕುಮಾರ್ ನುಡಿದರು.






