ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಒಂದೇ ತಿಂಗಳಿನಲ್ಲಿ 30ಕ್ಕೂ ಅಧಿಕ ತೀರ್ಮಾನ ಕೈಗೊಂಡ ಡಿ.ಕೆ. ಶಿವಕುಮಾರ್

ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದ್ದು, ಈ ಅವಧಿಯಲ್ಲಿ 30ಕ್ಕೂ ಅಧಿಕ ಮಹತ್ವದ ತೀರ್ಮಾನ ಕೈಗೊಂಡು ಗಮನ ಸೆಳೆದಿದ್ದಾರೆ.
ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಬೆನ್ನಲ್ಲೇ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಜ್ಯದ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಮಾಡಿದ್ದರು. ಜತೆಗೆ, ರಾಜ್ಯದ ಎಲ್ಲ ಪಂಚಾಯತಿ, ವಾರ್ಡ್ಗಳಲ್ಲಿ ಭಾರತ ಜೋಡೋ ಯುವಕರ ಸಂಘ ಸ್ಥಾಪಿಸಲು ತಲಾ 10 ಲಕ್ಷ ರೂ., 2500 ಅಡಿವರೆಗಿನ ನೂತನ ವಸತಿ ಕಟ್ಟಡಗಳ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಒಸಿ ವಿನಾಯಿತಿ ಹಾಗೂ ರಾಜ್ಯದೆಲ್ಲೆಡೆ ‘ಬಿ’ ಯಿಂದ ‘ಎ’ ಖಾತಾ ಪರಿವರ್ತನೆ ಮಾಡುವುದಾಗಿ ಪ್ರಕಟಿಸಿದ್ದರು.
ಅದೇ ರೀತಿ, ಈ ಮೂವತ್ತು ದಿನದಲ್ಲಿ ಬೆಂಗಳೂರಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು 2 ಸಾವಿರ ಕೋಟಿ ರೂ. ಯೋಜನೆ. ಖಾಸಗಿ ವಲಯದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, 72 ಸಾವಿರ ಸರಕಾರಿ ಹುದ್ದೆಗಳ ನೇಮಕಾತಿಗೆ 6 ತಿಂಗಳ ಗಡವು. ಸಾರ್ವಜನಿಕರ ಕುಂದುಕೋರತೆ, ಅಹವಾಲು ಆಲಿಸಲು 'ಪ್ರಜಾಸೇವೆ' ಎಂಬ ಪ್ರತ್ಯೇಕ ಸಚಿವಾಲಯ. ಶಾಸಕರು, ಮಂತ್ರಿಗಳ ಒತ್ತಡಕ್ಕೆ ಮಣಿಯದೇ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸೂಚನೆ ಸೇರಿದಂತೆ ಹಲವು ಹೊಸ ಕ್ರಮಗಳನ್ನು ಕೈಗೊಂಡಿದ್ದಾರೆ.
ಗ್ಯಾರಂಟಿ ಯೋಜನೆಗಳು ಕರ್ನಾಟಕ ರಾಜ್ಯದವರಿಗೆ ಮಾತ್ರ ಸಿಗಬೇಕು ಹಾಗೂ ಸೋರಿಕೆ ತಪ್ಪಿಸಲು ಕ್ರಮ. ರೌಡಿಗಳ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚನೆಗೆ ಸೂಚನೆ.ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ನಿರ್ದೇಶನ. ನೂತನ ಸಿಎಸ್ಆರ್ ನೀತಿ ತರಲು ಅಧಿಕಾರಿಗಳಿಗೆ ಸೂಚನೆ. ಬರ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆಗೆ ಅಧಿಕಾರಿಗಳ ಜೊತೆ ಸಭೆ. ಮಾವು ಬೆಳೆಗಾರರಿಗೆ ಕಳೆದ ವರ್ಷದಂತೆ ಪ್ರೋತ್ಸಾಹ ಧನ ಮುಂದುವರಿಸಲು ತೀರ್ಮಾನ. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ನಿರ್ದೇಶನ. ಕರಾವಳಿಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿವಿಧ ಕ್ರಮ. ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ತೀರ್ಮಾನ ಮಾಡಿ ಗಮನ ಸೆಳೆದಿದ್ದಾರೆ.






