ಧರ್ಮಸ್ಥಳ ಪ್ರಕರಣ| ಅನಾಮಿಕ ವ್ಯಕ್ತಿಯ ಕುರಿತು ತನಿಖೆ ಆಗಬೇಕು : ಡಾ.ಅಶ್ವತ್ಥನಾರಾಯಣ್

ಬೆಂಗಳೂರು, ಆ. 15: ನಿಜಕ್ಕೂ ಮಂಜುನಾಥೇಶ್ವರನನ್ನು ನಂಬಿದ್ದರೆ, ಶ್ರೀಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಹಿಂದೆ ನಿಂತಿರುವ ವ್ಯಕ್ತಿಗಳ ತನಿಖೆ ಮಾಡಿ ಬಯಲಿಗೆಳೆಯಬೇಕು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ಜನರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದೀರಾ? ಸರಕಾರ ಬದುಕಿದೆಯೇ ಇಲ್ಲವೇ ಎಂದು ಗೊತ್ತಾಗಬೇಕಲ್ಲವೇ?. ಕಾಂಗ್ರೆಸ್ ಸರಕಾರ ಬದುಕಿದ್ದರೆ ತೋರಿಸಲಿ. ಅನಾಮಿಕ ವ್ಯಕ್ತಿಯ ಕುರಿತಂತೆಯೂ ತನಿಖೆ ಆಗಬೇಕು ಎಂದು ಕೋರಿದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ, ಪೊಲೀಸರ ಮೇಲೆ ಹಲ್ಲೆ, ಪೊಲೀಸ್ ಜೀಪಿಗೆ ಬೆಂಕಿ, ಶಾಸಕರ ಮನೆಗೆ ಬೆಂಕಿ ಇಟ್ಟಿದ್ದನ್ನು ಕಾಂಗ್ರೆಸ್ನವರು ಸಮರ್ಥಿಸಿದ್ದರು. ಧರ್ಮಸ್ಥಳದಲ್ಲಿ ಇಂತಹ ಘಟನೆ ನಡೆದಿದೆಯೇ? ಯೂಟ್ಯೂಬರ್ಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಾಮಾಜಿಕ ಜಾಲತಾಣದಲ್ಲಿ ತನಿಖೆ ನಡೆಸಿ ಇವರೇ ತೀರ್ಪು ಕೊಡುತ್ತಾರೆ. ಇದರಿಂದ ಮಂಜುನಾಥೇಶ್ವರನನ್ನು ನಂಬುವ ಭಕ್ತರಿಗೆ ನೋವಾಗಿದೆ. ಧರ್ಮಾಧಿಕಾರಿಗಳ ಮೇಲೂ ಆಪಾದನೆ ಮಾಡಿದ್ದಾರೆ ಎಂದು ದೂರಿದರು.







