ವಿದೇಶಿಯರು ಪ್ರವಾಸಿ ವೀಸಾ ಪಡೆದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿಲ್ಲ : ಡಾ.ಜಿ.ಪರಮೇಶ್ವರ್

ಬೆಂಗಳೂರು, ಸೆ.3 : ವಿದೇಶಿಯರು ಪ್ರವಾಸಿ ವೀಸಾ ಪಡೆದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು, ಪ್ರಚಾರ ಮಾಡಲು ನಮ್ಮ ದೇಶದ ಕಾನೂನಿನಲ್ಲಿ ಅವಕಾಶವಿಲ್ಲ. ಈ ವಿಚಾರವನ್ನು ಪೊಲೀಸ್ ಇಲಾಖೆ ಮೂಲಕ ಮೀಲಾದುನ್ನಬಿ ಕಾರ್ಯಕ್ರಮದ ಆಯೋಜಕರ ಗಮನಕ್ಕೆ ತರಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೆ.5ರಂದು ಆಯೋಜಿಸಿರುವ ಅಂತರ್ ರಾಷ್ಟ್ರೀಯ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ವಿದೇಶಗಳ ಧಾರ್ಮಿಕ ನಾಯಕರು ಭಾಗವಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿರುವ ಕುರಿತು ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ವಿದೇಶಿ ಧಾರ್ಮಿಕ ನಾಯಕರನ್ನು ಕಾರ್ಯಕ್ರಮದ ಆಯೋಜಕರು ಆಹ್ವಾನಿಸಿರುತ್ತಾರೆ. ಆದರೆ, ನಾವು ಈಗಾಗಲೇ ಅವರಿಗೆ ವಿದೇಶಿಯರ ಕಾಯ್ದೆ ಹಾಗೂ ವೀಸಾ ನಿಯಮಾವಳಿಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ವಿದೇಶಿಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಂತೆಯೂ ತಿಳಿಸಿದ್ದೇವೆ. ಆಯೋಜಕರು ಈಗ ಅದನ್ನು ಸರಿಪಡಿಸಿಕೊಳ್ಳಬೇಕು. ಕಾನೂನು ಉಲ್ಲಂಘನೆಯಾಗದಂತೆ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ವಿದೇಶಿಯರ ನೋಂದಣಿ ಕಚೇರಿ(ಎಫ್ಆರ್ಆರ್)ಯವರು ನಿಗಾ ವಹಿಸಿರುತ್ತಾರೆ ಎಂದು ಅವರು ಹೇಳಿದರು.
ವಿದೇಶಿ ಧಾರ್ಮಿಕ ನಾಯಕರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯೂ ಪಾಲ್ಗೊಳ್ಳುತ್ತಿದ್ದಾರೆ. ಇದು ಕಾನೂನಿನ ಉಲ್ಲಂಘನೆ ಯಾಗುವುದಿಲ್ಲವೇ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಕಾನೂನು ಉಲ್ಲಂಘನೆ ಮಾಡಿದಾಗ ತಾನೇ ಕ್ರಮ ಕೈಗೊಳ್ಳುವ ವಿಚಾರ ಬರೋದು ಎಂದರು.
ಕಾನೂನು ಪಾಲನೆ ಮಾಡುವ ವಿಚಾರದಲ್ಲಿ ವಿರೋಧ ಪಕ್ಷದವರಿಗಿಂತ ಹತ್ತು ಪಟ್ಟು ಹೆಚ್ಚಿನ ಜವಾಬ್ದಾರಿ ಸರಕಾರ ನಡೆಸುತ್ತಿರುವವರ ಮೇಲಿರುತ್ತದೆ. ವಿದೇಶಿ ಧಾರ್ಮಿಕ ನಾಯಕರು ಕೇವಲ ಭಾಷಣಕ್ಕಷ್ಟೇ ಅಲ್ಲ, ಅವರ ಉಪಸ್ಥಿತಿಯೂ ಕಾರ್ಯಕ್ರಮದಲ್ಲಿ ಇರಬಾರದು ಎಂದು ಸ್ಪಷ್ಟವಾಗಿ ಆಯೋಜಕರಿಗೆ ತಿಳಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ವೀಸಾ ನಿಯಮಾವಳಿಯಲ್ಲಿ ಏನಿದೆ?: ವಿದೇಶಿಯರು ಧಾರ್ಮಿಕ ಸ್ಥಳಗಳಿಗೆ ಭೇಟಿ ಹಾಗೂ ಸಾಮಾನ್ಯ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಯಾವುದೆ ನಿರ್ಬಂಧವಿಲ್ಲ. ಆದರೆ, ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ಭಾಷಣ ಮಾಡುವುದು, ಧಾರ್ಮಿಕ ವಿಚಾರಗಳನ್ನು ಪ್ರಚಾರ ಮಾಡುವಂತಿಲ್ಲ. ಅಲ್ಲದೇ, ಆಡಿಯೋ, ವಿಡಿಯೋ ಹಾಗೂ ಹಸ್ತಪ್ರತಿಗಳನ್ನು ಹಂಚುವುದು ನಿರ್ಬಂಧಿಸಲಾಗಿದೆ.
ಯಾರಿಗೆಲ್ಲ ಆಹ್ವಾನ?: ಸೌದಿ ಅರೇಬಿಯಾದ ಶೇಖ್ ಅಬ್ದುಲ್ಲಾ ಅಬ್ದುಲ್ ಕಬೀರ್ ಅಬ್ದುಲ್ ಕರೀಮ್, ಸಯ್ಯದ್ ಅಬ್ತಾನ್ ಅಲ್ ಶಾಮಿರಿ, ಇರಾಕ್ ದೇಶದ ಸಯ್ಯದ್ ಹಾಶಿಮ್ ಅಬ್ದುಲ್ ಖಾದಿರ್ ಅಲ್ ಜೀಲಾನಿ ಹಾಗೂ ಯಮನ್ ದೇಶದ ಸಯ್ಯದ್ ಹಬೀಬ್ ಉಮರ್ ಬಿನ್ ಹಫೀಝ್ ಅವರನ್ನು ಅಂತರ್ ರಾಷ್ಟ್ರೀಯ ಮೀಲಾದುನ್ನಬಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.
ಇವರಲ್ಲದೆ, ಕೇರಳದ ಸುಲ್ತಾನುಲ್ ಉಲಮಾ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್, ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ.
ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ: ಝಮೀರ್ ಅಹ್ಮದ್ ಖಾನ್
ಬೆಂಗಳೂರಿನಲ್ಲಿ ಪ್ರತಿ ವರ್ಷ ಮೂರು ಸಮಿತಿಗಳು ಪ್ರತ್ಯೇಕವಾಗಿ ಮೀಲಾದುನ್ನಬಿ ಆಚರಣೆ ಮಾಡುತ್ತಿದ್ದವು. ಆದರೆ, ಈ ಬಾರಿ ಪ್ರವಾದಿ ಮುಹಮ್ಮದ್(ಸ)ರವರ 1500ನೆ ಜನ್ಮದಿನಾಚರಣೆ ಆಗಿರುವ ಕಾರಣಕ್ಕೆ ಎಲ್ಲರೂ ಸೇರಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧರಿಸಿದ್ದೇವೆ. ವಿದೇಶದಿಂದ ಪ್ರವಾಸಿ ವೀಸಾದಲ್ಲಿ ಬರುತ್ತಿರುವ ಧರ್ಮಗುರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾನೂನು ಪ್ರಕಾರ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಅವರು ಕಾರ್ಯಕ್ರಮದಲ್ಲಿ ಭಾಗಿ ಆಗುವುದಿಲ್ಲ.







