ಪಿಟಿಸಿಎಲ್ ಕಾಯ್ದೆ ಅನುಷ್ಠಾನಕ್ಕೆ ರಿಯಲ್ ಎಸ್ಟೇಟ್ ಮಾಫಿಯಾಗಳೇ ಅಡ್ಡಿ: ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ

ಬೆಂಗಳೂರು: ‘ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ’(ಪಿಟಿಸಿಎಲ್)ಯ ಸಮರ್ಪಕ ಅನುಷ್ಠಾನಕ್ಕೆ ರಾಜಕೀಯ ಪಕ್ಷಗಳು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾಗಳು ಅಡ್ಡಿಪಡಿಸುತ್ತಿವೆ. ಆದುದರಿಂದ ಈ ಸನ್ನಿವೇಶದಲ್ಲಿ ಕೋರ್ಟ್ಗಳ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಶಾಸಕರ ಭವನದಲ್ಲಿ ನ್ಯಾಯಕ್ಕಾಗಿ ಅಖಿಲ ಭಾರತ ವಕೀಲರ ಸಂಘ, ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ, ಮಂಥನ್ ಲಾ ಹಾಗೂ ಆಲ್ಟರ್ನೇಟಿವ್ ಲಾ ಫೋರಂ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಜಮೀನುಗಳ ವರ್ಗಾವಣೆ ನಿಷೇಧ-1978(ಪಿಟಿಸಿಎಲ್) ಕಾಯ್ದೆ ಅನುಷ್ಟಾನ ಕುರಿತಾದ ತೀರ್ಪುಗಾರರ ವರದಿ’ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪಿಟಿಸಿಎಲ್ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಕಂದಾಯ ಸಚಿವರೊಂದಿಗೆ ಕೂಡಲೇ ಸಭೆ ನಡೆಸಬೇಕು. ದಲಿತ ಸಮುದಾಯಗಳಿಗೆ ನ್ಯಾಯ ಪಡೆಯುವ ಹಕ್ಕನ್ನು ಹೆಚ್ಚಿಸಲು ವಿಶೇಷ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳನ್ನು ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಕಾರ್ಯಪ್ರವೃತ್ತವಾಗಬೇಕು ಎಂದು ಅವರು ತಿಳಿಸಿದರು.
ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ದಲಿತರು ಮತ್ತು ಆದಿವಾಸಿಗಳ ಭೂಹಕ್ಕಿನ ಪ್ರಶ್ನೆಯು ನಮ್ಮೆಲ್ಲರನ್ನು ಒಗ್ಗೂಡಿಸಬೇಕಾದ ಮಹತ್ವದ ಪ್ರಶ್ನೆಯಾಗಿದೆ. ನಮ್ಮ ಜನಸಂಖ್ಯೆ ಹೆಚ್ಚಾಗಿದ್ದರೂ, ಕೇವಲ ಶೇ.2ರಷ್ಟು ಭೂಮಿ ಮಾತ್ರ ನಮ್ಮ ಒಡೆತನದಲ್ಲಿದೆ. ನಮ್ಮ ಹೋರಾಟದಿಂದಲೇ ಅಲ್ಪಸ್ವಲ್ಪ ಭೂಮಿ ಉಳಿದಿದೆ. ಈ ಹೋರಾಟಕ್ಕೆ ನಾನು ಬದ್ಧನಾಗಿದ್ದೇನೆ. ಸೂಕ್ತ ವೇದಿಕೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ಪರಿಷತ್ ಸದಸ್ಯ ಕೆ.ಶಿವಕುಮಾರ್ ಮಾತನಾಡಿ, ‘ಪಿಟಿಸಿಎಲ್ ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ನ್ಯಾಯಾಲಯಗಳು ಪ್ರಕರಣಗಳನ್ನು ಪದೇಪದೇ ವಜಾಗೊಳಿಸುತ್ತಿವೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಕಲ್ಯಾಣ ಸಮಿತಿಯ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ವರದಿಯ ಶಿಫಾರಸುಗಳನ್ನು ಸಮಿತಿ ವಿವರವಾಗಿ ಚರ್ಚಿಸಲಿದೆ. ನಂತರ ಈ ಕುರಿತು ಸರಕಾರಕ್ಕೆ ಪತ್ರ ಬರೆಯಲಿದೆ ಎಂದು ಭರವಸೆ ನೀಡಿದರು.
ಪರಿಷತ್ತಿನ ಸದಸ್ಯ ಸುಧಾಮ ದಾಸ್ ಮಾತನಾಡಿ, ದಲಿತರನ್ನು ಶೋಷಣೆಗೆ ಒಳಪಡಿಸುವ ಸಾಮಾಜಿಕ-ಆರ್ಥಿಕ ವ್ಯವಸ್ಥೆಯನ್ನು ಪ್ರಶ್ನಿಸಬೇಕು. ದಲಿತ ಸಮುದಾಯದ ಸಬಲೀಕರಣದ ಆಶಯದಿಂದಲೇ ಈ ಕಾಯ್ದೆಗಳು ರೂಪುಗೊಂಡಿವೆ. ಈ ಆಶಯಗಳನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.
ಇದೇ ವೇಳೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯ ಮುಖಂಡರಾದ ವೆಂಕಟೇಶ್, ಮಂಜುನಾಥ್ ಮತ್ತು ಶಾಂತರಾಜು, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ನ ಪ್ರಧಾನ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಸಾರಿಯೋ, ಆಲ್ಟರ್ನೇಟಿವ್ ಲಾ ಫೆÇೀರಂನ ವಿನಯ್ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಶಿಫಾರಸುಗಳು: ಸುಪ್ರೀಂ ಕೋರ್ಟ್ನಲ್ಲಿ ಬಾಕಿಯಿರುವ ‘ನೆಕ್ಕಂಟಿ ರಾಮಲಕ್ಷ್ಮೀ’ ಪ್ರಕರಣದಲ್ಲಿ ರಾಜ್ಯ ಸರಕಾರ ಪ್ರತಿನಿಧಿಸಬೇಕು. ಕಾಯ್ದೆಯ ಮೂಲ ಉದ್ದೇಶವನ್ನು ಪುನಃ ಸ್ಥಾಪಿಸಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ‘ನೆಕ್ಕಂಟಿ ರಾಮಲಕ್ಷ್ಮೀ’ ತೀರ್ಪಿನ ವಿಳಂಬದ ಆಧಾರದ ಮೇಲೆ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಪರ್ಯಾಯ ಭೂಮಿ ಒದಗಿಸಬೇಕು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪಿಟಿಸಿಎಲ್ ಪ್ರಕರಣಗಳನ್ನು ಆದ್ಯತಾ ವರ್ಗವನ್ನಾಗಿ ಪರಿಗಣಿಸಿ ಕಾನೂನು ನೆರವನ್ನು ನೀಡಬೇಕು.
ಪಿಟಿಸಿಎಲ್ ಕಾಯ್ದೆಯಲ್ಲಿ ವಿಶೇಷ ತರಬೇತಿ ಪಡೆದ ವಕೀಲರನ್ನು ನೇಮಿಸಿ, ಸಹಾಯಕ ಆಯುಕ್ತ, ಉಪ ಆಯುಕ್ತ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಹಂತಗಳಲ್ಲಿ ಫಲಾನುಭವಿಗಳು ಹಾಗೂ ಅವರ ಕಾನೂನುಬದ್ಧ ವಾರಸುದಾರರಿಗೆ ನೆರವು ಒದಗಿಸಬೇಕು. ಸಾಮಾಜಿಕ ಕಲ್ಯಾಣ ಇಲಾಖೆಯೊಳಗೆ ಪಿಟಿಸಿಎಲ್ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುವ ಪ್ರತ್ಯೇಕ ಕಾನೂನು ಘಟಕವನ್ನು ಸ್ಥಾಪಿಸಬೇಕು.
ಕಾಯ್ದೆಯ ಸೆಕ್ಷನ್ 8 ಅನ್ನು ಹಾಗೂ ಸೆಕ್ಷನ್ 6ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಕಂದಾಯ ಅಧಿಕಾರಿಗಳಿಗೆ ಪಿಟಿಸಿಎಲ್ ಕಾಯ್ದೆಯ ಉದ್ದೇಶ ಮತ್ತು ಸಾಮಾಜಿಕ ಹಿನ್ನೆಲೆಯ ಕುರಿತು ವಿಶೇಷ ತರಬೇತಿ ನೀಡಬೇಕು.






