‘ನಾಯಕತ್ವ ಬದಲಾವಣೆ’ ವಿಚಾರ | ಜನರನ್ನು ಗೊಂದಲಗೊಳಿಸುವುದು ಸರಿಯಲ್ಲ: ಸಚಿವ ಡಾ.ಮಹದೇವಪ್ಪ ಆಕ್ಷೇಪ

ಎಚ್.ಸಿ.ಮಹದೇವಪ್ಪ
ಬೆಂಗಳೂರು : ‘ಸರಕಾರವೊಂದು ತಾನು ಜನರಿಗೆ ನೀಡಿದ ಆಶ್ವಾಸನೆಗಳನ್ನು ಜಾರಿಗೊಳಿಸಿ, ಜನಸಾಮಾನ್ಯರ ಬದುಕು ಹಸನಾಗುವ ನಿಟ್ಟಿನಲ್ಲಿ ಆಡಳಿತವನ್ನು ನೀಡುತ್ತಿದೆ. ಹೀಗಿರುವಾಗ, ಕೆಲ ಮಾಧ್ಯಮಗಳು ಆಡಳಿತಾತ್ಮಕ ಸ್ಥಿರತೆ, ಜನರ ನಂಬಿಕೆಗೆ ವಿರುದ್ಧವಾಗಿ, ಜನರನ್ನು ಗೊಂದಲಗೊಳಿಸುವ ಪ್ರಶ್ನೆಗಳನ್ನು ಕೇಳುವುದು ಆಡಳಿತಾತ್ಮಕ ದೃಷ್ಟಿಯಿಂದ ಸಮಂಜಸವಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ಷೇಪಿಸಿದ್ದಾರೆ.
ಶುಕ್ರವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ‘ನಾಯಕತ್ವ ಬದಲಾವಣೆಯ ಕುರಿತಾಗಿ ಕಾಂಗ್ರೆಸ್ ಪಕ್ಷದ ಒಳಗೆ ಯಾವುದೇ ಪ್ರಶ್ನೆಗಳು ಏಳದಿದ್ದರೂ, ಮಾಧ್ಯಮ ಪ್ರತಿನಿಧಿಗಳು ಪ್ರತಿದಿನ ಅದೇ ಪ್ರಶ್ನೆಗಳನ್ನು ಸರಕಾರದ ಮುಖ್ಯಸ್ಥರು, ಸಚಿವರು ಹಾಗೂ ನಾಯಕರ ಬಳಿ ಕೇಳುತ್ತಿರುವುದು ಮುಜುಗರ ತರುವಂತಿದೆ’ ಎಂದು ಹೇಳಿದ್ದಾರೆ.
‘ಒಂದು ರಾಜಕೀಯ ಪಕ್ಷವು ಕಾಲದ ಅಗತ್ಯಕ್ಕೆ ತಕ್ಕಂತೆ, ಜನರ ಅಭಿಪ್ರಾಯವನ್ನು ಆಧರಿಸಿ, ನಾಯಕರ ಸಾಮರ್ಥ್ಯವನ್ನು ಅರ್ಥೈಸಿ ಪಕ್ಷದ ವ್ಯಾಪ್ತಿಯ ಒಳಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದು ಯಾವುದೇ ಬಹಿರಂಗ ಒತ್ತಡದಿಂದ ಅಥವಾ ವ್ಯಕ್ತಿಗತ ಆಸೆಗಳಿಂದ ಜರುಗುವಂತಹ ಪ್ರಕ್ರಿಯೆ ಅಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ನಾಯಕತ್ವ ಬದಲಾವಣೆಯ ನಿರ್ಧಾರ ಏನಾದರೂ ಇದ್ದರೆ ಅದನ್ನು ಕಾಂಗ್ರೆಸ್ ಹೈಕಮಾಂಡ್ ತಿಳಿಸುತ್ತದೆ. ಹೀಗಾಗಿ ಹೋದಲ್ಲಿ-ಬಂದಲ್ಲಿ ರಚ್ಚೆ ಹಿಡಿದವರಂತೆ ನಾಯಕತ್ವ ಬದಲಾವಣೆಯ ಪ್ರಶ್ನೆ ಕೇಳುವ ಬದಲು, ಜನರ ನಂಬಿಕೆಯನ್ನು ಹೆಚ್ಚಿಸುವಂತಹ ಮತ್ತು ಜನರ ಬದುಕಿಗೆ ಪ್ರಯೋಜನ ಆಗುವಂತಹ ಮತ್ತು ಆಡಳಿತಾತ್ಮಕವಾಗಿ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು ಎಂದು ಮಹದೇವಪ್ಪ ಕೋರಿದ್ದಾರೆ.
‘ಸಾರ್ವಜನಿಕ ಜೀವನದಲ್ಲಿ ಜನರ ಸುಭದ್ರ ಬದುಕಿಗೇ ಮೊದಲ ಪ್ರಾಶಸ್ತ್ಯ ಇದ್ದು, ಇದಕ್ಕೆ ಪೂರಕವಾಗಿಯೇ ನಮ್ಮ ಸರಕಾರ ಸಮರ್ಥವಾಗಿ ಕೆಲಸ ಮಾಡುತ್ತಿರುವಾಗ, ಸುಮ್ಮನೇ ಸೃಷ್ಟಿಸುವ ಒತ್ತಡಗಳು ಜನರಲ್ಲಿ ಗೊಂದಲ ಮೂಡಿಸದಿರಲಿ’ ಎಂದು ಮಹದೇವಪ್ಪ, ಮಾಧ್ಯಮ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದಾರೆ.
ನಾಯಕತ್ವ ಬದಲಾವಣೆಯ ಕುರಿತಾಗಿ ಕಾಂಗ್ರೆಸ್ ಪಕ್ಷದ ಒಳಗೆ ಯಾವುದೇ ಪ್ರಶ್ನೆಗಳು ಏಳದಿದ್ದರೂ ನಮ್ಮ ಮಾಧ್ಯಮ ಮಿತ್ರರು ಪ್ರತಿದಿನ ಅದೇ ಪ್ರಶ್ನೆಗಳನ್ನು ಸರ್ಕಾರದ ಮುಖ್ಯಸ್ಥರು, ಸಚಿವರು ಹಾಗೂ ನಾಯಕರ ಬಳಿ ಕೇಳುತ್ತಿರುವುದು ಮುಜುಗರ ತರುವಂತಿದೆ.
— Dr H C Mahadevappa(Buddha Basava Ambedkar Parivar) (@CMahadevappa) November 21, 2025
ಸರ್ಕಾರವೊಂದು ತಾನು ಜನರಿಗೆ ನೀಡಿದ ಪ್ರಣಾಳಿಕೆಗಳನ್ನು ಸಮರ್ಥವಾಗಿ ಜಾರಿಗೊಳಿಸಿ, ಜನ ಸಾಮಾನ್ಯರ… pic.twitter.com/zvVwx7wzCk







