ಮುಟ್ಟುಗೋಲು ಹಾಕಿದ್ದ 3.82 ಕೋಟಿ ರೂ. ಕರ್ನಾಟಕ ವಕ್ಫ್ ಮಂಡಳಿಗೆ ಹಿಂದಿರುಗಿಸಿದ ಈಡಿ

ಬೆಂಗಳೂರು: ಕರ್ನಾಟಕ ವಕ್ಫ್ ಮಂಡಳಿಗೆ ಸೇರಿದ್ದ 4ಕೋಟಿ ರೂ.ಹಣವನ್ನು ಖಾಸಗಿ ಕಂಪೆನಿಗಳ ವಿವಿಧ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಈ.ಡಿ) ಮುಟ್ಟುಗೋಲು ಹಾಕಿಕೊಂಡಿದ್ದ 3.82 ಕೋಟಿ ರೂ.ಗಳನ್ನು ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಂಡಳಿಗೆ ಹಿಂದಿರುಗಿಸಿದೆ.
2017ರಲ್ಲಿ ತಾನು ವಿಜಯ ಬ್ಯಾಂಕ್ ನೌಕರ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ವಕ್ಫ್ ಮಂಡಳಿಗೆ ಭೇಟಿ ನೀಡಿ, ‘ತಮ್ಮ ಬ್ಯಾಂಕ್ನಲ್ಲಿ ಠೇವಣಿ ಇರಿಸಿದರೆ ಹೆಚ್ಚಿನ ಬಡ್ಡಿ ಬರುತ್ತದೆ' ಎಂದು ಆಸೆ ತೋರಿಸಿ ವಕ್ಫ್ ಮಂಡಳಿ ಅಧಿಕಾರಿಗಳಿಂದ ಚೆಕ್ ಪಡೆದಿದ್ದ. ಆದರೆ, ಚೆಕ್ ನೀಡಿ ಹಲವು ದಿನಗಳಾದರೂ, ಠೇವಣಿಯ ರಸೀದಿಯನ್ನು ಬ್ಯಾಂಕ್ ಒದಗಿಸಿರಲಿಲ್ಲ ಎಂದು ಈಡಿ ತಿಳಿಸಿದೆ.
ವಕ್ಫ್ ಮಂಡಳಿಯ ಅಧಿಕಾರಿಗಳು ಬ್ಯಾಂಕ್ನಲ್ಲಿ ವಿಚಾರಿಸಿದಾಗ, ಅಜಯ್ ಶರ್ಮಾ ಟ್ರೇಡಿಂಗ್ ಕಾರ್ಪೋರೇಷನ್ ಎಂಬ ಕಂಪೆನಿಯ ಖಾತೆಗೆ ಆ ಹಣ ವರ್ಗಾವಣೆಯಾಗಿತ್ತು. ಅಧಿಕಾರಿಗಳು ನೀಡಿದ್ದ ದೂರಿನನ್ವಯ ಪೆÇಲೀಸರು ಪ್ರಕರಣ ದಾಖಲಿಸಿದ್ದರು. ಬಹುಕೋಟಿ ಹಗರಣವಾಗಿದ್ದ ಕಾರಣ ಇಸಿಐಆರ್ ದಾಖಲಿಸಿ, ಈಡಿ ತನಿಖೆ ಕೈಗೊಂಡಿತ್ತು.
ಈ ಸಂದರ್ಭದಲ್ಲಿ 3.82 ಕೋಟಿ ರೂ.ಗಳನ್ನು ಈಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಅರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ವಕ್ಫ್ ಮಂಡಳಿಯು, ಹಣವನ್ನು ಹಿಂದಿರುಗಿಸುವಂತೆÉ ಈ.ಡಿ.ಗೆ ನಿರ್ದೇಶನ ನೀಡಲು ಕೋರಿತ್ತು. ಮಂಡಳಿಯ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್, ಹಣವನ್ನು ವಾಪಸ್ ಮಾಡಿ ಎಂದು ಜುಲೈ 1ರಂದು ಈ.ಡಿಗೆ ಸೂಚಿಸಿತ್ತು.
ಆ ಹಿನ್ನೆಲೆಯಲ್ಲಿ ಈಡಿ ಜು.7ರಂದು ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿಲಾನಿ ಮೊಕಾಶಿ ಅವರಿಗೆ 3.82 ಕೋಟಿ ರೂಪಾಯಿ ಮೊತ್ತದ ಚೆಕ್ ಅನ್ನು ಹಸ್ತಾಂತರ ಮಾಡಿದೆ ಎಂದು ಮೂಲಗಳು ತಿಳಿಸಿವೆ.







