ರೈಲ್ವೇ ಉದ್ಯೋಗಿಗಳಿಗೆ ಇಂಗ್ಲಿಷ್,ಹಿಂದಿ ಕಡ್ಡಾಯ; ಕನ್ನಡಿಗರ ಭಾಷಾ ಹಕ್ಕುಗಳ ಹರಣಕ್ಕೆ ಸಂಚು: ನಾರಾಯಣಗೌಡ

Photo: x.com/narayanagowdru
ಹುಬ್ಬಳ್ಳಿ: ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದಿಂದ ಇತ್ತೀಚೆಗೆ ಹೊರಡಿಸಲಾದ ಆಫೀಸ್ ಸೂಪರಿಂಟೆಂಡೆಂಟ್ ಲೆವೆಲ್-6, ಸೀನಿಯರ್ ಕ್ಲಾರ್ಕ್ ಲೆವೆಲ್-5 ಮತ್ತು ಇಂಟರ್ಮೀಡಿಯಟ್ ಅಪ್ರೆಂಟಿಸ್ ಮೆಕಾನಿಕ್ಸ್ ಹುದ್ದೆಗಳ ಎಲ್ ಡಿಸಿಇ ನೋಟಿಫಿಕೇಷನ್ ಗಳಲ್ಲಿ ಪರೀಕ್ಷೆಗಳನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನಡೆಸಲಾಗುವುದು ಎಂದು ತಿಳಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ X ಪೋಸ್ಟ್ ಮಾಡಿರುವ ಅವರು, ಕರ್ನಾಟಕದ ಮಣ್ಣಿನಲ್ಲಿ, ಕನ್ನಡಿಗರ ರಕ್ತ-ಬೆವರಿನಿಂದ ನಿರ್ಮಾಣವಾದ ರೈಲ್ವೇ ಇಲಾಖೆಯಲ್ಲಿ ಕನ್ನಡ ಭಾಷೆಗೆ ಸ್ಥಾನವೇ ಇಲ್ಲದಿರುವುದು ನೇರವಾಗಿ ಕನ್ನಡ ಅಸ್ಮಿತೆಯ ಮೇಲಿನ ದಾಳಿ ಮತ್ತು ಕನ್ನಡಿಗರ ಭಾಷಾ ಹಕ್ಕುಗಳ ಉಲ್ಲಂಘನೆಯಾಗಿದೆ. ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದಲ್ಲಿ 39 ಆಫೀಸ್ ಸೂಪರಿಂಟೆಂಡೆಂಟ್, 25 ಸೀನಿಯರ್ ಕ್ಲಾರ್ಕ್ ಮತ್ತು 9 ಇಂಟರ್ಮೀಡಿಯಟ್ ಅಪ್ರೆಂಟಿಸ್ ಮೆಕಾನಿಕ್ಸ್ ಹುದ್ದೆಗಳಿಗೆ ಎಲ್ ಡಿಸಿಇ ಮೂಲಕ ಆಯ್ಕೆ ನಡೆಸಲಾಗುತ್ತಿದೆ. ಪ್ರಶ್ನೆಪತ್ರಿಕೆಯ ಭಾಷೆಗಳ ಆಯ್ಕೆಯಲ್ಲಿ ಕನ್ನಡವನ್ನು ಉಲ್ಲೇಖಿಸದೆ ಇರುವುದು ಸ್ಪಷ್ಟ ಭಾಷಾ ದ್ರೋಹವಾಗಿದೆ. ಇದು ಕರ್ನಾಟಕದ ಅಧಿಕೃತ ನುಡಿಯಾದ ಕನ್ನಡಕ್ಕೆ ಮಾಡಿದ ಅಪಮಾನವಾಗಿದ್ದು, ಕನ್ನಡಿಗ ರೈಲ್ವೇ ಉದ್ಯೋಗಿಗಳು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಿತ್ತುಕೊಂಡು ಹಿಂದಿ ರಾಜ್ಯದವರಿಗೆ ನೀಡುವ ಸ್ಪಷ್ಟ ಹುನ್ನಾರವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡವನ್ನು ಅಧಿಕೃತ ಭಾಷೆಯಾಗಿ ಘೋಷಿಸಲಾಗಿದ್ದು, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಕಡ್ಡಾಯವಾಗಿದೆ. ಆದರೆ ಕೇಂದ್ರ ಸರ್ಕಾರದ ಅಡಿಯಲ್ಲಿರುವ ನೈರುತ್ಯ ರೈಲ್ವೇ ಇಲಾಖೆಯು ಕರ್ನಾಟಕದಲ್ಲಿ ಕನ್ನಡವನ್ನು ಪೂರ್ಣವಾಗಿ ಕಡೆಗಣಿಸುತ್ತಿರುವುದು ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕನ್ನಡಿಗರ ಸ್ವಾತಂತ್ರ್ಯಹರಣದ ಉದಾಹರಣೆಯಾಗಿದೆ. ಇದು ಕನ್ನಡಿಗರ ಭಾವನೆಗಳನ್ನು ತಿರಸ್ಕಾರದಿಂದ ನೋಡುವ, ಅವರ ಗೌರವವನ್ನು ಕುಗ್ಗಿಸುವ ಕೆಟ್ಟ ಬೆಳವಣಿಗೆಯಾಗಿದೆ. ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದ ಸಾವಿರಾರು ಕನ್ನಡಿ ರೈಲ್ವೇ ಉದ್ಯೋಗಿಗಳು ಇಂದು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅಸಮರ್ಥರಾಗುತ್ತಿದ್ದಾರೆ. ಅವರಲ್ಲಿ ಅನೇಕರು ಗ್ರಾಮೀಣ ಹಿನ್ನೆಲೆಯಿಂದ ಬಂದವರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು. ಅವರಿಗೆ ಇಂಗ್ಲಿಷ್-ಹಿಂದಿ ಪರೀಕ್ಷೆಯು ತುಂಬಾ ಕಷ್ಟಕರವಾಗುತ್ತದೆ. ಇದರಿಂದಾಗಿ ಅವರ ಉದ್ಯೋಗಾವಕಾಶಗಳು ಕುಂಠಿತವಾಗುತ್ತವೆ. ಇದು ಕನ್ನಡಿಗರನ್ನು ತಮ್ಮದೇ ರಾಜ್ಯದಲ್ಲಿ ಎರಡನೇ ದರ್ಜೆಯ ಪ್ರಜೆಯನ್ನಾಗಿ ಮಾಡುವ ಷಡ್ಯಂತ್ರವಾಗಿದೆ ಎಂದು ನಾರಾಯಣಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಳವಳಿಯು ನಾಡು-ನುಡಿ ರಕ್ಷಣೆಗಾಗಿ ದಶಕಗಳ ಕಾಲ ಹೋರಾಡಿದೆ. ಆ ಹೋರಾಟದ ಫಲವಾಗಿ ಇಂದು ಕರ್ನಾಟಕದಲ್ಲಿ ಕನ್ನಡಕ್ಕೆ ಗೌರವ ಸಿಕ್ಕಿದೆ. ಆದರೆ ನೈರುತ್ಯ ರೈಲ್ವೇ ಇಲಾಖೆಯು ಈ ಹೋರಾಟದ ಫಲವನ್ನು ಕಸಿದುಕೊಳ್ಳುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಇಂತಹ ದ್ರೋಹವನ್ನು ಎಂದಿಗೂ ಸಹಿಸುವುದಿಲ್ಲ. ಕನ್ನಡವನ್ನು ರೈಲ್ವೇ ಪರೀಕ್ಷೆಗಳಲ್ಲಿ ತ್ರಿಭಾಷಾ (ಕನ್ನಡ-ಇಂಗ್ಲಿಷ್-ಹಿಂದಿ) ವ್ಯವಸ್ಥೆಯಲ್ಲಿ ಅಳವಡಿಸದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಈ ತಕ್ಷಣವೇ ರೈಲ್ವೇ ಬೋರ್ಡ್, ನೈರುತ್ಯ ರೈಲ್ವೇ ಮುಖ್ಯ ಕಚೇರಿ ಮತ್ತು ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಈ ಮೂರು ನೋಟಿಫಿಕೇಷನ್ಗಳನ್ನು ಸರಿಪಡಿಸಿ, ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸುವಂತೆ ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕನ್ನಡಿಗರ ಭಾಷಾ ಹಕ್ಕುಗಳು ಅಪಹರಣಗೊಳ್ಳುತ್ತಿರುವುದನ್ನು ಕರ್ನಾಟಕ ಸರ್ಕಾರವೂ ಮೌನವಾಗಿ ನೋಡುತ್ತಿರುವುದು ಖಂಡನೀಯ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ, ನೈರುತ್ಯ ರೈಲ್ವೇ ಪರೀಕ್ಷೆಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಂತೆ ಮಾಡಬೇಕು. ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು, ವಿಶೇಷವಾಗಿ ಕೇಂದ್ರ ಸಚಿವರುಗಳು ಕೂಡಲೇ ಮೌನ ಮುರಿಯಬೇಕು. ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿರುವ ವಿ.ಸೋಮಣ್ಣ ಅವರು ತಕ್ಷಣ ಕ್ರಿಯಾಶೀಲರಾಗಿ ಈ ಅನ್ಯಾಯವನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ರೈಲ್ವೆ ಇಲಾಖೆ ತನ್ನ ತಪ್ಪು ತಿದ್ದಿಕೊಳ್ಳದೇ ಇದ್ದಲ್ಲಿ, ಕನ್ನಡಿಗರ ಮೇಲೆ ಇದೇ ರೀತಿ ಅಪಮಾನ ಎಸಗುತ್ತಿದ್ದಲ್ಲಿ ಇಡೀ ಕರ್ನಾಟಕದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸ್ಥಗಿತಗೊಳಿಸುವ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಅತಿ ಶೀಘ್ರದಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ನಿರ್ಣಾಯಕ ಹೋರಾಟದ ಕುರಿತು ಘೋಷಣೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.






