ಕೆಪಿಎಸ್ಸಿ ರದ್ದು ಮಾಡಲು ಸಿಎಂಗೆ ಈಶ್ವರ್ ಖಂಡ್ರೆ ಮನವಿ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದ ಮೇಲೆ 1998ರಿಂದಲೂ ಗುರುತರ ಆರೋಪಗಳು ಬರುತ್ತಿದ್ದು, ಇದನ್ನು ರದ್ದು ಮಾಡಿ ಯುಪಿಎಸ್ಸಿ ಮಾದರಿ ರೂಪಿಸಬೇಕು ಅಥವಾ ಕೆಇಎಯಿಂದ ನೇಮಕಾತಿ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ವಿವಿಧ ಇಲಾಖೆಯ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಬೇಕಾದ್ದು ಅದರ ಅಧ್ಯಕ್ಷರು ಮತ್ತು ಸದಸ್ಯರ ಜವಾಬ್ದಾರಿ. ಈ ನಿಟ್ಟಿನಲ್ಲಿ ವಿಫಲವಾಗಿರುವ ಆಯೋಗ ರದ್ದು ಮಾಡಬೇಕು ಎಂದು ಸಿಎಂಗೆ ಮನವಿ ಮಾಡಲಾಗಿದೆ ಎಂದರು.
ಪಶುವೈದ್ಯರ ನೇಮಕಾತಿ ಹಗರಣದ ಬಗ್ಗೆ ಸರಕಾರ ಪಾರದರ್ಶಕವಾಗಿ ತನಿಖೆ ಮಾಡಿಸುತ್ತಿದೆ. ಅಕ್ರಮದಲ್ಲಿ ಭಾಗಿಯಾದ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ಅವರಿಗೆ ದಂಡನೆ ಆಗುತ್ತದೆ. ಸತ್ಯ ಹೊರಬಂದೇ ಬರುತ್ತದೆ. ಕೆಪಿಎಸ್ಸಿ ರದ್ದು ಮಾಡಿದರೆ ಯುಪಿಎಸ್ಸಿ ಮಾದರಿಯಲ್ಲಿ ಪುನಾರಚನೆ ಮಾಡಬಹುದು. ಅಥವಾ ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕೆಇಎಗೆ ಹೊಣೆಗಾರಿಕೆ ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕಷ್ಟಪಟ್ಟ ಓದಿದ ಕರ್ನಾಟಕದ ಅಭ್ಯರ್ಥಿಗಳಿಗೆ ಅನ್ಯಾಯ ಆಗದಂತೆ ಮತ್ತು ಪ್ರತಿಭಾವಂತರು ಸರಕಾರಿ ಅಧಿಕಾರಿಗಳಾಗಬೇಕು, ಹಗರಣ ಮುಕ್ತವಾಗಿ ಮತ್ತು ಪಾರದರ್ಶಕವಾಗಿ ನೇಮಕಾತಿ ಆಗಬೇಕು ಎಂಬ ನಿಟ್ಟಿನಲ್ಲಿ ಉತ್ತಮವಾದ ವ್ಯವಸ್ಥೆ ಬರಬೇಕು ಎಂಬುದು ಸರಕಾರದ ಹಾಗೂ ನಮ್ಮೆಲ್ಲರ ಒಮ್ಮತದ ನಿಲುವಾಗಿದೆ ಎಂದರು.
ಕೆಇಎ ಹಲವು ಹುದ್ದೆಗಳಿಗೆ ಈಗಾಗಲೇ ಪರೀಕ್ಷೆ ನಡೆಸಿ ನೇಮಕಾತಿ ಮಾಡಿದ ಅನುಭವ ಹೊಂದಿದೆ. ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ, ಪರೀಕ್ಷೆ, ಮೌಲ್ಯಮಾಪನ ಪಾರದರ್ಶಕವಾಗಿ ನಡೆಯುವಂತೆ, ಮೌಖಿಕ ಸಂದರ್ಶನವೂ ಪಾರದರ್ಶಕವಾಗಿರುವಂತೆ ಮಾಡಿದಲ್ಲಿ ಇದಕ್ಕೆ ಶಾಶ್ವತ ಪರಿಹಾರ ದೊರಕುತ್ತದೆ ಎಂದು ಈಶ್ವರ ಖಂಡ್ರೆ ನುಡಿದರು.
ಈಗಾಗಲೇ ತಾವೂ ಸೇರಿದಂತೆ ಹಲವು ಸಚಿವರು ಈ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದೂ ಈಶ್ವರ್ ಖಂಡ್ರೆ ತಿಳಿಸಿದರು.






