ಪರೀಕ್ಷಾ ಮೌಲ್ಯಮಾಪನ ವ್ಯವಸ್ಥೆ ಪರಿಷ್ಕರಣೆ ಕೋರಿಕೆ: ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವು ಪ್ರಕರಣಗಳಲ್ಲಿ ಮರುಮೌಲ್ಯಮಾಪನ ಶುಲ್ಕ ವಾಪಸ್ ನೀಡಿಕೆ ಮತ್ತು ಅಗತ್ಯ ಹಾಜರಾತಿ ವಿಚಾರಗಳಲ್ಲಿ ಸಡಿಲಿಕೆ ಸೇರಿದಂತೆ ಹಲವು ಕೋರಿಕೆಗಳನ್ನು ಒಳಗೊಂಡಿದ್ದ ಅರ್ಜಿಯನ್ನು ಮಾನ್ಯ ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಈ ರೀತಿಯ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಏನು ಹೇಳಲು ಸಾಧ್ಯ ಎಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಈ ವಿಚಾರಗಳು ತಜ್ಞರು ಮತ್ತು ವಿವಿಗಳಿಗೆ ಸಂಬಂಧಿಸಿದ ಸಂಗತಿಗಳಾಗಿವೆ. ಒಂದು ವಿಷಯಕ್ಕೆ ಮರುಮೌಲ್ಯಮಾಪನ ಶುಲ್ಕ ಇಷ್ಟೇ ಇರಬೇಕೆಂದು ಹೇಳಲು ನಾವು ಯಾರು ಎಂದು ಸಿಜೆ ವರಾಳೆ ಪ್ರಶ್ನಿಸಿದರು.
ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ವಿಚಾರಕ್ಕೆ ಬಂದಾಗ ಅದನ್ನು ತಜ್ಞರು ಮಾಡಬೇಕಾಗುತ್ತದೆ. ಇದಕ್ಕೆ ಅವರಿಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅರ್ಜಿ ಸಲ್ಲಿಸುವುದಕ್ಕೂ ಮುನ್ನ ತಜ್ಞರ ಸಂಪರ್ಕ ಮಾಡಲಾಗಿತ್ತೇ ಎಂದು ನ್ಯಾಯಾಲಯವು ಅರ್ಜಿದಾರರನ್ನು ಕೇಳಿದೆ.
ಸಾಕಷ್ಟು ಸಂಶೋಧನೆ ನಡೆಸಿದ, ತಜ್ಞರ ಅಭಿಪ್ರಾಯಗಳನ್ನು ಒಳಗೊಂಡ ಪಿಐಎಲ್ ಸಲ್ಲಿಸಲು ಅವಕಾಶ ಮಾಡಿ, ಹಾಲಿ ಪಿಐಎಲ್ ಹಿಂಪಡೆಯಲು ಅನುಮತಿಸಿತು. ಅಲ್ಲದೇ, ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿತು.
ಮರು-ಮೌಲ್ಯಮಾಪನದ ಅಂಕಗಳು ಗಣನೀಯವಾಗಿ ಭಿನ್ನವಾಗಿರುವುದು ಕಂಡುಬಂದಾಗ ಪರೀಕ್ಷೆಯ ಮರುಮೌಲ್ಯಮಾಪನ ಶುಲ್ಕದ ಮರುಪಾವತಿಗಾಗಿ ನಿಯಮಾವಳಿಗಳನ್ನು ರೂಪಿಸಲು ನಿರ್ದೇಶಿಸಬೇಕು. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗಾಗಿ ಹಾಜರಾತಿ ಮಾನದಂಡವನ್ನು ಶೇ.51 ಅಥವಾ ಅದಕ್ಕಿಂತ ಕಡಿಮೆಗೆ ಸಡಿಲಗೊಳಿಸಿ ಮತ್ತು ಎಲ್ಲ ಕಾಲೇಜುಗಳಲ್ಲಿ ಒಂದೇ ಹಾಜರಾತಿ ಮಾನದಂಡವನ್ನು ನಿಗದಿಪಡಿಸುವುದು ಸೇರಿದಂತೆ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಪರಿಹರಿಸಲು ವಿಶ್ವವಿದ್ಯಾಲಯದ ಪ್ರಭಾವದಿಂದ ಮುಕ್ತವಾದ ಸಮಿತಿಗಳನ್ನು ಸ್ಥಾಪಿಸಬೇಕು ಎಂದು ಕೋರಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಒಕ್ಕೂಟ ಅರ್ಜಿ ಸಲ್ಲಿಸಿತ್ತು.







