ಮಾಜಿ ಸಚಿವ, ಶಾಸಕ ಮುನಿರತ್ನ ವಿರುದ್ಧ FIR ದಾಖಲು
ಅಕ್ರಮ ಗಣಿಗಾರಿಕೆ ಪ್ರಕರಣ
![ಮಾಜಿ ಸಚಿವ, ಶಾಸಕ ಮುನಿರತ್ನ ವಿರುದ್ಧ FIR ದಾಖಲು ಮಾಜಿ ಸಚಿವ, ಶಾಸಕ ಮುನಿರತ್ನ ವಿರುದ್ಧ FIR ದಾಖಲು](https://www.varthabharati.in/h-upload/2023/07/13/1166635-fb1.webp)
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ, ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಸಹಿತ ನಾಲ್ವರ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿಕ್ಕಜಾಲ ಠಾಣೆಯಲ್ಲಿ FIR ದಾಖಲಾಗಿದೆ.
ಮುನಿರತ್ನ ಅವರನ್ನು A4 ಆರೋಪಿ ಎಂದು ಗುರುತಿಸಲಾಗಿದೆ. ಉಳಿದಂತೆ ಆನಂದನ್, ಗಣೇಶ್, ರಾಧಮ್ಮ ಎಂಬವರು ಆರೋಪಿಗಳಾಗಿದ್ದು, ಇವರೆಲ್ಲರ ವಿರುದ್ಧ ಸ್ಫೋಟಕ ಕಾಯ್ದೆ 1884 US 9B(1b) , ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಡಿ ಕೇಸ್ ದಾಖಲಾಗಿದೆ.
ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿದ ಆರೋಪದಡಿ ಯಲಹಂಕ ತಹಶೀಲ್ದಾರ್ ಅನಿಲ್ ಅರಳೋಕರ್ ಶಾಸಕ ಮುನಿರತ್ನ ಸಹಿತ ನಾಲ್ವರ ವಿರುದ್ಧ ದೂರು ದಾಖಲು ಮಾಡಿದ್ದರು. ದೂರಿನ ಮೇರೆಗೆ ಇದೀಗ ಎಫ್ಐಆರ್ ದಾಖಲಾಗಿದೆ.
ಸರ್ಕಾರಿ ಜಮೀನು ಸೇರಿದಂತೆ ಖಾಸಗಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಮಾಡಿದ್ದು, ಜೊತೆಗೆ ಹುಣಸಮಾರನಹಳ್ಳಿಯ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಜು.10ರಂದು ಜಿಲೆಟಿನ್ ಸ್ಫೋಟ ಮಾಡಿದ ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ಹುಣಸಮಾರನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಧರಣಿ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ್ದ ತಹಶೀಲ್ದಾರ್ ದೂರು ದಾಖಲು ಮಾಡಿದ್ದರು.