ಮೂರು ತಿಂಗಳಲ್ಲಿ ಎರಡನೇ ಬಾರಿ ಗ್ಯಾಸ್ ದರ ಏರಿಕೆ: ಕೇಂದ್ರದ ವಿರುದ್ಧ ಈಶ್ವರ ಖಂಡ್ರೆ ವಾಗ್ದಾಳಿ

Photo: x.com/eshwar_khandre
ಬೆಂಗಳೂರು, ಜೂ.7: ಗೃಹ ಬಳಕೆಯ 14.2 ಕೆ.ಜಿ. ಅಡುಗೆ ಅನಿಲ ಸಿಲಿಂಡರ್ ದರ 29 ರೂ. ಏರಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ, ಇದೇನಾ ಅಚ್ಛೇದಿನ್ ಎಂದು ಪ್ರಶ್ನಿಸಿದ್ದಾರೆ.
ಕಳೆದ 3 ತಿಂಗಳಲ್ಲಿ 2ನೇ ಬಾರಿ ಶ್ರೀಸಾಮಾನ್ಯರು ಬಳಸುವ ಅಡುಗೆ ಅನಿಲ ದರ ಏರಿಕೆ ಮಾಡಲಾಗಿದ್ದು, ಸುಮಾರು 90 ರೂ. ಹೊರೆ ಬಿದ್ದಿದೆ. ಇದರಿಂದ ಬಡವರು, ಮಧ್ಯಮವರ್ಗದವರು ನಲುಗಿ ಹೋಗಿದ್ದಾರೆ. ಇದೆಲ್ಲವೂ ಕೇಂದ್ರ ಸರ್ಕಾರದ ದುರಾಡಳಿತದ ಫಲ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕಾಲದಲ್ಲಿ 3 -4 ರೂ. ದರ ಹೆಚ್ಚಳವಾದರೂ ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿಗರು ಈಗ ಏಕೆ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಈಗ ಇವರ ಬಡವರ ಪರ ಕಾಳಜಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ವಾಣಿಜ್ಯ ಬಳಕೆಯ ಸಿಲಿಂಡರ್ ದರ 3200 ರೂ. ದಾಟಿದ್ದು, ಹೊಟೆಲ್ ಗಳಲ್ಲಿ ಎಲ್ಲ ತಿಂಡಿ ತಿನಿಸುಗಳ ದರ ಹೆಚ್ಚಳ ಆಗಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳದಿಂದ ಜೀವನಾವಶ್ಯಕ ವಸ್ತುಗಳ ದರವೂ ಗಗನಕ್ಕೆ ಏರಿದೆ. ಬಡವರು, ಮಧ್ಯಮ ವರ್ಗದವರ ಬದುಕು ದುಸ್ತರವಾಗುತ್ತಿದೆ. ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೀಡಿರುವುದರಿಂದ ಜನ ಕೇಂದ್ರ ಸರ್ಕಾರದ ಈ ಹೊರೆ ಹೊರುವ ಶಕ್ತಿ ಪಡೆದಿದ್ದಾರೆ. ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಜನರೇ ಬೀದಿಗಿಳಿದು ಬುದ್ಧಿಕಲಿಸುವ ದಿನ ದೂರವಿಲ್ಲ ಎಂದು ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.






