"2028ರ ಚುನಾವಣೆಗೆ ಸಜ್ಜಾಗಿ": ಪರಾಜಿತ ಅಭ್ಯರ್ಥಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

Photo credit:X/@DKShivakumar
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಸಾಧ್ಯತೆಗಳಿವೆ ಎಂದು ನಮ್ಮ ಆಂತರಿಕ ಸಮೀಕ್ಷೆಗಳು ವರದಿ ನೀಡಿವೆ. ಈ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿಗಳ ಕಷ್ಟ ಆಲಿಸಿ, ಮುಂದಿನ 2028ರ ಚುನಾವಣೆಗೆ ಸಜ್ಜಾಗಿ ಎಂದು ಸೂಚನೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸೋತಿದ್ದ 86 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕರೆಸಿ ಅವರ ಕಷ್ಟ ಆಲಿಸಿ, ಮುಂದಿನ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಪರಾಜಿತ ಅಭ್ಯರ್ಥಿಗಳು ಸುಮ್ಮನೆ ಕೂರದೆ ಕಾರ್ಯಪ್ರವೃತ್ತರಾಗಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. ಎಐಸಿಸಿ ಜತೆ ಚರ್ಚೆ ಮಾಡಿ ಪಕ್ಷಕ್ಕೆ ಹಿನ್ನಡೆ ಇರುವ ಉಳಿದ 20 ಕ್ಷೇತ್ರಗಳಲ್ಲಿ ಪಕ್ಷವನ್ನು ಯಾವ ರೀತಿ ಕಟ್ಟಬೇಕು ಎಂದು ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರನ್ನು ಮತ್ತೊಂದು ದಿನ ಕರೆದು ಸಭೆ ಮಾಡಲಿದ್ದೇನೆ. ಚುನಾವಣೆಯಲ್ಲಿ ಸೋತ ನಂತರ ಇವರು ಲೋಕಸಭೆ ಚುನಾವಣೆ, ಸಹಕಾರಿ ಸಂಘಗಳ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಶಕ್ತಿ ತುಂಬಲು ಸಲಹೆ ನೀಡಲಾಗಿದೆ. ಮುಂದಿನ ಅಧಿವೇಶನ ನಡೆಯುವಾಗ ನಾನು ಹಾಗೂ ಮುಖ್ಯಮಂತ್ರಿ ಪರಾಜಿತ ಅಭ್ಯರ್ಥಿಗಳನ್ನು ಕರೆಸಿ ಚರ್ಚೆ ಮಾಡಲು ದಿನಾಂಕ ನಿಗದಿಪಡಿಸುವುದುಆಗಿ ತಿಳಿಸಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕರ್ತರ ಸಭೆ: ಮಾ.23ರಿಂದ ಎ.1ರವರೆಗೂ ನಾನು, ಸಿದ್ದರಾಮಯ್ಯ ಸೇರಿದಂತೆ ಎಲ್ಲ ಸಚಿವರು, ಉಸ್ತುವಾರಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕಿದೆ. ಅದಕ್ಕೂ ಮುನ್ನವೇ ಶನಿವಾರ ಅಥವಾ ರವಿವಾರ ಸಮಯ ಸಿಕ್ಕರೆ ಸಭೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.
ನಾನು ಬೆಂಗಳೂರಿನ 28 ಕ್ಷೇತ್ರಗಳನ್ನು ದಿನಕ್ಕೆ 2-3 ಕ್ಷೇತ್ರಗಳಂತೆ ಭೇಟಿ ನೀಡಿ ಕಾರ್ಯಕರ್ತರ ಸಭೆ ಮಾಡಲು ತೀರ್ಮಾನಿಸಿದ್ದೇನೆ. ಈ ಕಾರ್ಯಕರ್ತರ ಸಭೆಯಲ್ಲಿ ಮಂಡಳಿ, ಸಂಘ, ಸಂಸ್ಥೆ, ಸಮಿತಿಗಳಲ್ಲಿ ಸರಕಾರದಿಂದ ನಾಮನಿರ್ದೇಶನವಾಗಿರುವ ಕಾರ್ಯಕರ್ತರಿಗೆ ಸನ್ಮಾನ ಮಾಡಬೇಕು. ಆಮೂಲಕ ಅವರನ್ನು ಗುರುತಿಸಿ ಅವರ ಜವಾಬ್ದಾರಿ ತಿಳಿಸುವ ಕೆಲಸ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಇದರ ಒಳಗಾಗಿ ಎಲ್ಲಾ ಸಮಿತಿಗಳ ಪುನರಚನೆ ಮಾಡಬೇಕು. ಶಾಸಕರ ಮನೆಗಳಲ್ಲಿ ಪಕ್ಷದ ಸಭೆ ನಡೆಸುವಂತಿಲ್ಲ. ಬೆಳಗಾವಿಯಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಇಡೀ ವರ್ಷ ಪಕ್ಷದ ಸಂಘಟನೆಗೆ ಮೀಸಲಿಡಬೇಕು ಎಂದು ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ತೀರ್ಮಾನಿಸಿದ್ದು, ಈ ವರ್ಷ ಪಕ್ಷದ ಮರುಸಂಘಟನೆಯತ್ತ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು.
ಬಹಳ ವರ್ಷಗಳಿಂದ ಜವಾಬ್ದಾರಿ ಹೊತ್ತಿರುವವರಿಗೆ ಬೇರೆ ಜವಾಬ್ದಾರಿ ನೀಡಿ ಅಲ್ಲಿಗೆ ಬೇರೆಯವರನ್ನು ನೇಮಿಸಲಾಗುವುದು. ನಾವು ಯಾರನ್ನೂ ಅಧಿಕಾರ ಕಸಿದು ಕಳುಹಿಸುವುದಿಲ್ಲ. ಎಲ್ಲೆಲ್ಲಿ ಪಕ್ಷದ ಸಮಿತಿಗಳು ರಚನೆಯಾಗಬೇಕೋ, ಪದಾಧಿಕಾರಿಗಳ ನೇಮಕವಾಗಬೇಕೋ ಅದೆಲ್ಲವನ್ನು ಶೀಘ್ರವೇ ಭರ್ತಿ ಮಾಡಬೇಕು ಎಂದು ಶಿವಕುಮಾರ್ ಎಂದರು.
ಪಕ್ಷದ ಕಚೇರಿ ಇರಬೇಕು: ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಗೆ ನೂತನ ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿದ್ದೇನೆ. ಅವರು ಬೆಂಗಳೂರಿಗೆ ಆಗಮಿಸಿ ಶಂಕುಸ್ಥಾಪನೆ ಮಾಡಲಿದ್ದಾರೆ. ನೂರಕ್ಕೂ ಹೆಚ್ಚು ಕಡೆಗಳಲ್ಲಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸರಕಾರದಿಂದ ಮಂಜೂರಾದ ಜಾಗಗಳಲ್ಲಿ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆಲವು ಕಡೆ ಜಮೀನು ಖರೀದಿ ಮಾಡಲು ಸೂಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿಗಳು ಇರಬೇಕು. ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿರುವ ಜಾಗದಲ್ಲಿ ಮಾತ್ರ ಕಾಂಗ್ರೆಸ್ ಕಚೇರಿ ಕಟ್ಟಲು ಶಂಕುಸ್ಥಾಪನೆ ಮಾಡಲಾಗುವುದು. ನಾನು ರಾಮನಗರ ಪಕ್ಷದ ಕಚೇರಿಗೆ ಜಾಗ ಖರೀದಿ ಮಾಡಿಕೊಟ್ಟಿದ್ದೇನೆ. ನಾವೆಲ್ಲರೂ ಪಕ್ಷದ ನಾಯಕತ್ವದ ಫಲಾನುಭವಿಗಳು ಹೀಗಾಗಿ ಪಕ್ಷಕ್ಕಾಗಿ ನಾವು ನೆರವು ನೀಡಬೇಕು ಎಂದು ಶಿವಕುಮಾರ್ ತಿಳಿಸಿದರು.
ಕಳೆದ 5 ವರ್ಷಗಳಿಂದ ಸಂಯೋಜಕರಾಗಿ ಕೆಲಸ ಮಾಡುತ್ತಿರುವವರಿಗೆ ಭಡ್ತಿ ನೀಡಲಾಗುವುದು. ಬ್ಲಾಕ್ ಅಧ್ಯಕ್ಷರಿಗೆ ಸರಕಾರಿ ನಾಮನಿರ್ದೇಶನ ಮಾಡಲು ಸೂಚಿಸಲಾಗಿದೆ. ಪರಮೇಶ್ವರ್ ನೇತೃತ್ವದ ಸಮಿತಿ ಮಾಡಿರುವ ಪಟ್ಟಿಯಲ್ಲಿ ಬ್ಲಾಕ್ ಅಧ್ಯಕ್ಷರಿಗೆ ಆದ್ಯತೆ ನೀಡಲು ಮುಂದಾಗಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಿ ಒಂದು ವಾರದಲ್ಲಿ ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.
ಪಕ್ಷ ಸಂಘಟನೆ ವಿಚಾರವಾಗಿ ಸುನೀಲ್ ಕನಗೋಲು ನೀಡಿರುವ ಸಲಹೆ ಸೂಚನೆ ಪರಿಗಣಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಮಾಡುತ್ತಾರೆ. ಅವರು ಇಲ್ಲಿ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿದ್ದು, ಪಕ್ಷದ ಹಿತಕ್ಕಾಗಿ ಅವರು ಕೊಡುವ ಸಲಹೆಗಳನ್ನು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ವಿಧಾನಪರಿಷತ್ತಿಗೆ ಸದಸ್ಯರ ನಾಮ ನಿರ್ದೇಶನ ಮಾಡುವ ಸಂಬಂಧ ಮುಖ್ಯಮಂತ್ರಿ ಚೇತರಿಸಿಕೊಂಡ ನಂತರ ಚರ್ಚೆ ಮಾಡಲಾಗುವುದು ಎಂದು ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು 2023ರ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದೆ. ಪಕ್ಷವನ್ನು ಇನ್ನಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದ್ದು, ಪರಾಜಿತ ಅಭ್ಯರ್ಥಿಗಳಿಗೆ ಮುಂದಿನ ಚುನಾವಣೆಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು, ಸ್ಥಳೀಯ… pic.twitter.com/hFYJnIsN0O
— DK Shivakumar (@DKShivakumar) February 24, 2025







