ಎಚ್ಸಿಜಿ ಆಸ್ಪತ್ರೆ ವಿರುದ್ಧ ತನಿಖೆಗೆ ಆದೇಶಿಸಿದ ಸರಕಾರ

Image Credit: hcgoncology.com
ಬೆಂಗಳೂರು : ಇಲ್ಲಿನ ಎಚ್ಸಿಜಿ(ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್) ಆಸ್ಪತ್ರೆಯಲ್ಲಿ ನಡೆಸಲ್ಪಟ್ಟ ಕ್ಲಿನಿಕಲ್ ಪ್ರಯೋಗಗಳಲ್ಲಿ ಬಡ ರೋಗಿಗಳನ್ನು ಬಳಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಮಂಡಳಿಯು ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದೆ.
ಸಹಾಯಕ ಡ್ರಗ್ಸ್ ಕಾಂಟ್ರೋಲಾರ್ ಡಾ. ಬಿಕಾಶ್ ರಾಯ್, ಡ್ರಗ್ಸ್ ಇನ್ಸ್ ಪೆಕ್ಟರ್ ಸುನೀತಾ ಜೋಶಿ ಸೇರಿದಂತೆ ಮತ್ತಿತರ ಅಧಿಕಾರಿಗಳು ತನಿಖಾ ತಂಡದಲ್ಲಿದ್ದು, ಇದೇ ತಿಂಗಳಿನಲ್ಲಿ ತನಿಖೆಯನ್ನು ನಡೆಸಿ ವರದಿ ನೀಡಲಿದ್ದಾರೆ. ಜು.3, ಜು.4 ಮತ್ತು ಜು.5ರಂದು ಅಧಿಕಾರಿಗಳು ತಪಾಸಣೆ ನಡೆಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.
ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಎಂಬುದು ಹಗರಣ ರೀತಿಯಲ್ಲಿ ನಡೆಯುತ್ತಿದೆ ಎಂದು ಇದೇ ಸಂಸ್ಥೆಯ ನೈತಿಕ ಸಮಿತಿ ಮುಖ್ಯಸ್ಥ ನ್ಯಾ.ಪಿ. ಕೃಷ್ಣಭಟ್ ಆರೋಪಿಸಿದ್ದರು. ಈ ಬಗ್ಗೆ ಕಂಪನಿಯ ಉನ್ನತ ಆಡಳಿತ ವರ್ಗಕ್ಕೆ ಪತ್ರ ಹಾಗೂ ಖುದ್ದಾಗಿ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಅದನ್ನು ಸರಿಪಡಿಸುವ ಬದಲು ಎಚ್ಸಿಜಿ ಆಡಳಿತ ಅಕ್ರಮವನ್ನೇ ಮುಚ್ಚಿ ಹಾಕಲು ಯತ್ನಿಸಿತು ಎಂಬ ಆರೋಪ ಕೇಳಿಬಂದಿತ್ತು.





